ಕರ್ನಾಟಕದಿಂದ ರಾಜ್ಯಸಭೆ ಕಣಕ್ಕಿಳಿದ ಎಲೆಕ್ಷನ್ ಕಿಂಗ್!
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 19 ರಂದು ಚುನಾವಣೆ ನಡೆಯಲಿದ್ದು, ಸೋಮವಾರ ಎಲೆಕ್ಷನ್ ಕಿಂಗ್ ಪದ್ಮರಾಜನ್ ವಿಧಾನಸೌಧಕ್ಕೆ ಆಗಮಿಸಿ ಚುನಾವಣೆಗಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಅವರು 160ನೇ ಬಾರಿ ಚುನಾವಣೆ ಕಣಕ್ಕೆ ಧುಮುಕಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯ್ಥರ್ಥಿ ನಾಮಪತ್ರಕ್ಕೆ 10 ಶಾಸಕರ ಸಹಿ ಅಗತ್ಯವಾಗಿದೆ. ಆದರೆ, ಸೋಮವಾರ ಪದ್ಮರಾಜನ್ ಸಲ್ಲಿಸಿರುವ ನಾಮಪತ್ರಕ್ಕೆ ಕರ್ನಾಟಕ ಯಾವ ಶಾಸಕರು ಸಹಿ ಹಾಕಿಲ್ಲ. ಆದ್ದರಿಂದ ಪದ್ಮರಾಜನ್ ಅವರ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಇದೆ. [ರಾಜ್ಯಸಭೆ ಚುನಾವಣೆ ಜೂನ್ 19ಕ್ಕೆ]
ಚುನಾವಣೆಗೆ ಸ್ಪರ್ಧಿಸುವುದರಲ್ಲಿ ದಾಖಲೆ ನಿರ್ಮಿಸಿರುವ ಕೆ.ಪದ್ಮರಾಜನ್ ಅವರು 25 ವರ್ಷಗಳಲ್ಲಿ 159 ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಪ್ರಮುಖ ರಾಜಕೀಯ ಮುಖಂಡ ಎದುರು ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪದ್ಮರಾಜನ್ ದಾಖಲೆ ನಿರ್ಮಿಸಿದ್ದಾರೆ. [ಪದ್ಮರಾಜನ್ ಯಾರು?]
ಶೆಟ್ಟರ್ ವಿರುದ್ಧ ನಾಮಪತ್ರ ಸಲ್ಲಿಸಿದ್ದರು : ಪದ್ಮರಾಜನ್ ಕರ್ನಾಟಕದಿಂದ ಚುನಾವಣೆ ಕಣಕ್ಕೆ ಇಳಿಯುತ್ತಿರುವುದ ಇದು ಮೊದಲಲ್ಲ. ಡಾ.ಕೆ.ಪದ್ಮರಾಜನ್ 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ವಿರುದ್ಧ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು.
ಆದರೆ, ನಾಮಪತ್ರಗಳ ಪರಿಶೀಲನೆ ವೇಳೆ ಪದ್ಮರಾಜನ್ ಕರ್ನಾಟಕದ ಮತದಾರರಲ್ಲ, 10 ಜನ ಅನುಮೋದಕರ ಹೆಸರು ಹಾಗೂ ಸಹಿ ಇಲ್ಲ ಹಾಗೂ ಫಾರ್ಮ್ ಸಂಖ್ಯೆ 26ನ್ನು ಸಲ್ಲಿಸಿಲ್ಲ ಎಂದು ಚುನಾವಣಾ ಆಯೋಗ ಪದ್ಮರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು. ಸದ್ಯ ರಾಜ್ಯಸಭೆ ಚುನಾವಣೆಗೆ ಅವರು ನಾಪತ್ರ ಪತ್ರ ಸಲ್ಲಿಸಿದ್ದಾರೆ.