ಮಹಾದಾಯಿ ವಿಚಾರದಲ್ಲಿ ಕಾನೂನು ಉಲ್ಲಂಘಿಸಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಜನವರಿ 30 : ಮಹಾದಾಯಿ ನದಿ ಪಾತ್ರದಲ್ಲಿ ಯಾವುದೇ ನಿಯಮದ ಉಲ್ಲಂಘನೆ ಆಗಿಲ್ಲ. ನಿಯಮ ಉಲ್ಲಂಘನೆ ಆಗಿದ್ದರೆ ನ್ಯಾಯ ಮಂಡಳಿ ತೀರ್ಮಾನ ಹೇಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ವಿಧಾನಸೌಧದ ಆವರಣದಲ್ಲಿನ ಮಹಾತ್ಮ ಗಾಂಧಿಯವರ ಪ್ರತಿಮೆ ಬಳಿ ಆಯೋಜಿಸಿದ್ದ ಮೌನ ಆಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದ ಉಪ ಸಭಾಪತಿ ಹೇಳಿದ್ದೆಲ್ಲ ಕಾನೂನು ಅಥವಾ ತೀರ್ಮಾನ ಆಗುವುದಿಲ್ಲ. ತಂಟೆ ಮಾಡುವುದೇ ಗೋವಾದ ಕೆಲಸ. ನಮ್ಮ ನೀರು ನಮಗೆ ಕೊಡಿ ಎಂದು ಕೇಳಿದರೆ ಗೋವಾದವರು ಗಲಾಟೆ ಮಾಡುತ್ತಾರೆ. ಏನು ಮಾಡುವುದು, 45 ಟಿಎಂಸಿ ನೀರು ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುತ್ತದೆ. 200 ಟಿಎಂಸಿ ಸಮುದ್ರ ಸೇರುತ್ತಿದ್ದರೂ ಗೋವಾದವರು ಅದನ್ನು ಬಳಸಿಕೊಳ್ಳುತ್ತಿಲ್ಲ.

ನಮಗೆ 7.5 tmc ಕುಡಿಯಲು ಕೊಡಿ ಎಂದರೆ ಕ್ಯಾತೆ ತೆಗೆದಿದ್ದಾರೆ. ನಮ್ಮ ರಾಜ್ಯದ ಒಳಗೆ ಕದ್ದು ಬಂದಿದ್ದಾರೆ. ನಮಗೆ ಹೇಳಿಯೇ ಬಂದಿದ್ದರೆ ಎಲ್ಲ ವ್ಯವಸ್ಥೆ ಮಾಡುತ್ತಿದ್ದೆವು. ಒಂದು ರಾಜ್ಯದ ಮುಖ್ಯಮಂತ್ರಿ, ಮಂತ್ರಿ, ಸಭಾಪತಿ, ಶಾಸಕರು ಮತ್ತೊಂದು ರಾಜ್ಯಕ್ಕೆ ಅಧಿಕೃತ ಭೇಟಿಗಾಗಿ ಹೋದಾಗ ಶಿಷ್ಟಾಚಾರ ಪ್ರಕಾರ ಮಾಹಿತಿ ಕೊಡಬೇಕು. ತಂಟೆ ಮಾಡುವುದೇ ಗೋವಾದವರ ಕಸುಬು ಎಂದರು.
ನಮ್ಮ ರಾಜ್ಯಕ್ಕೆ ಕಳ್ಳತನವಾಗಿ ಬಂದು ನಾವೇನೋ ಅಪರಾಧ ಮಾಡಿದ್ದೇವೆ ಎಂಬಂತೆ ಬಿಂಬಿಸುವ ಗೋವಾದವರ ವರ್ತನೆಯನ್ನು ಖಂಡಿಸುತ್ತೇನೆ. ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಯಾವ ಕಾಮಗಾರಿಯೂ ಅಲ್ಲಿ ನಡೆಯುತ್ತಿಲ್ಲ. ನಮ್ಮ ರಾಜ್ಯ ಕಾನೂನು, ಸಂವಿಧಾನವನ್ನು ಯಾವಾಗಲೂ ಗೌರವಿಸುವ ರಾಜ್ಯವಾಗಿದೆ ಎಂದು ಹೇಳಿದರು.












Click it and Unblock the Notifications