ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ತ್ಯಾಜ್ಯ ನೀರು ಹರಿಸದಂತೆ ಎಚ್ಚರಿಕೆ
ಬೆಂಗಳೂರು ಗ್ರಾಮಾಂತರ, ನ. 28: ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಕೈಗಾರಿಕೆಗಳ ತ್ಯಾಜ್ಯ ನೀರು ಹರಿಸದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಎಚ್ಚರಿಕೆ ನೀಡಿದ್ದಾರೆ.
ನಗರದ ಒಳಚರಂಡಿ ನೀರು, ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ನೇರವಾಗಿ ಕೆರೆಗಳಿಗೆ ಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಸೋಮವಾರ ಜಿಲ್ಲಾಧಿಕಾರಿ ಆರ್.ಲತಾ ದೊಡ್ಡಬಳ್ಳಾಪುರ ನಗರದ ನಾಗರಕೆರೆ ಹಾಗೂ ತಾಲೂಕಿನ ಚಿಕ್ಕತುಮಕೂರು ಎಸ್ಟಿಪಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರಕ್ಕೆ ಸೆಡ್ಡು ಹೊಡೆದು ತಾತ್ಕಾಲಿಕ ಸೇತುವೆ ನಿರ್ಮಿಸಿದ ಸುಗ್ಗನಹಳ್ಳಿ ಗ್ರಾಮಸ್ಥರು
ನಾಗರಕೆರೆಗೆ ಏಳೆಂಟು ಕಡೆ ಮನೆಗಳ ಯುಜಿಡಿ ನೀರು, ಮಗ್ಗಗಳ ಡೈಯಿಂಗ್ ನೀರು ಬಂದು ಸೇರುತ್ತಿದೆ. 2008ರಲ್ಲಿ ಕೆರೆ ಮಧ್ಯಭಾಗದಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಪೈಪ್ಲೈನ್ ನಿರ್ಮಿಸಲಾಗಿದೆ. ಇದರಿಂದಲೂ ಯುಜಿಡಿ ನೀರು ನೇರವಾಗಿ ಕೆರೆಗೆ ಸೇರುತ್ತಿದೆ. ಈ ಬಗ್ಗೆ ನಾಗರಿಕರಿಂದ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಖುದ್ದು ವೀಕ್ಷಣೆ ನಡೆಸಿ, ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ನಾಗರಕೆರೆ ಒತ್ತುವರಿ ತೆರವಿಗೆ ಸೂಚನೆ
ದೊಡ್ಡಬಳ್ಳಾಪುರದ 26 ವಾರ್ಡುಗಳಲ್ಲಿ ಮಾತ್ರ ಯುಜಿಡಿ ಸಂಪರ್ಕವಿದೆ. ಉಳಿದ ಐದು ವಾರ್ಡುಗಳಲ್ಲಿ ಇಲ್ಲ. ಈಗಿರುವ ಯುಜಿಡಿ ಸಂಪರ್ಕವೂ ಅಸಮರ್ಪಕವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಡಿಪಿಆರ್ ಸಿದ್ದಪಡಿಸುವಂತೆ ಸೂಚಿಸಲಾಗಿದೆ. ಎಸ್ಟಿಪಿ ಘಟಕವನ್ನು ಹೊಸ ತಂತ್ರಜ್ಞಾನ ಬಳಸಿ ನಿರ್ಮಿಸಬೇಕು. ಯುಜಿಡಿ, ಕೈಗಾರಿಕೆಗಳಿಂದ ಬರುವ ತ್ಯಾಜ್ಯ ನೀರನ್ನು ಮೂಲದಲ್ಲಿಯೇ ಸಂಸ್ಕರಿಸಿ ಕೆರೆಗೆ ಬಿಡುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
175 ಎಕರೆ ವಿಸ್ತೀರ್ಣದ ನಾಗರಕೆರೆಯಲ್ಲಿ ಕೆಲವೆಡೆ ಕೆರೆ ಜಾಗ ಒತ್ತುವಾರಿಯಾಗಿದೆ. ಈಗಾಗಲೇ ಕೆರೆಯ ಸರ್ವೇ ಮಾಡಲಾಗಿದೆ. ಒತ್ತುವರಿಯಾಗಿರುವ ಕಡೆ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದರು. ಅಂದಾಜಿನ ಪ್ರಕಾರ 20 ಎಕರೆಗೂ ಹೆಚ್ಚು ಜಾಗ ಒತ್ತುವರಿಯಾಗಿದೆ ಎನ್ನಲಾಗಿದೆ.
ಸಂಪೂರ್ಣವಾಗಿ ಕಲುಷಿತವಾಗಿರುವ ಕೆರೆಗಳು
ನಾಗರಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳಿವೆ. ನೂರಾರು ಜಾತಿಯ ವಲಸೆ ಪಕ್ಷಿಗಳು ಆಗಮಿಸುತ್ತವೆ. ಇಂತಹ ಜೀವವೈವಿದ್ಯ ತಾಣವಾದ ನಾಗರಕೆರೆಯನ್ನು ಸಂರಕ್ಷಿಸಬೇಕು ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಆರ್.ಲತಾ ಅವರು ತ್ವರಿತಗತಿಯಲ್ಲಿ ಕೆರೆ ಸಂರಕ್ಷಣೆಗೆ ಕ್ರಮ ಜರುಗಿಸಲಾಗುವುದು. ಡಿಪಿಆರ್ ಸಿದ್ಧಪಡಿಸುವಾಗ ತಜ್ಞರ ಅಭಿಪ್ರಾಯ, ಸಲಹೆ ಸೂಚನೆ ಸ್ವೀಕರಿಸಬೇಕು ಎಂದು ನಗರಸಭೆ ಆಯುಕ್ತ ಶಿವಶಂಕರ್ ಅವರಿಗೆ ಸೂಚಿಸಿದರು.
ಅರ್ಕಾವತಿ ಪಾತ್ರದ ಚಿಕ್ಕತುಮಕೂರು, ದೊಡ್ಡ ತುಮಕೂರು ಕೆರೆಗಳು ಸಂಪೂರ್ಣ ಕಲುಷಿತವಾಗಿದ್ದು, ಜಲಮೂಲ ಉಳಿವಿಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ದೊಡ್ಡತುಮಕೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್ ಒತ್ತಾಯಿಸಿದರು. ಬಳಿಕ ಚಿಕ್ಕತುಮಕೂರು ಎಸ್ಟಿಪಿ ಘಟಕವನ್ನು ಜಿಲ್ಲಾಧಿಕಾರಿ ವಿಕ್ಷೀಸಿದರು.
ಬಾಶೆಟ್ಟಿಹಳ್ಳಿಯಲ್ಲಿ 312 ಕೈಗಾರಿಕೆಗಳು
ಬಣ್ಣ ಹಾಗೂ ರಾಸಾಯನಿಕ ಕೈಗಾರಿಕೆಗಳು ಹೊರ ಬಿಡುತ್ತಿರುವ ವಿಷಯುಕ್ತ ನೀರಿನಿಂದ ಕೆರೆಗಳು ಸಂಪೂರ್ಣ ಮಲಿನಗೊಂಡಿವೆ. ಕೈಗಾರಿಕೆಗಳು ಮೂಲದಲ್ಲಿಯೇ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗೆ ಬಿಡಬೇಕು. ಉದಾಸೀನ ಮಾಡಿ ಜಲಮೂಲ ಹಾಳು ಮಾಡುವ ಕೈಗಾರಿಕೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಬಂದ್ ಮಾಡಿಸಿ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಬಾಶೆಟ್ಟಿಹಳ್ಳಿಯಲ್ಲಿ 312 ಕೈಗಾರಿಕೆಗಳಿವೆ. ಕೆಐಎಡಿಬಿ ಬಳಿ ಜಮೀನು ಇದ್ದರೆ ಮುರ್ನಾಲ್ಕು ಎಕರೆ ಪ್ರದೇಶದಲ್ಲಿ ಪ್ರತ್ಯೇಕ ಟ್ರೀಟ್ ಮೆಂಟ್ ಪ್ಲಾಂಟ್ ಮಾಡಬಹುದು. ಈ ಬಗ್ಗೆ ಗಮನ ಹರಿಸಿ ಎಂದು ತಹಶೀಲ್ದಾರ್ ಮೋಹನಕುಮಾರಿ ಅವರಿಗೆ ಸೂಚಿಸಿದರು.
ಜಲಚರಗಳ ಸಾವಿಗೆ ಕಾರಣವಾದ ಕಂಪನಿಗಳ ವಿರುದ್ಧ ಕ್ರಮವಿಲ್ಲ!
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಕೈಗಾರಿಕೆಗಳು ತ್ಯಾಜ್ಯ ನೀರನ್ನು ಕೆರೆಗೆ ಬಿಟ್ಟು ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ, ಅವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೊಡ್ಡತುಮಕೂರು ಹಾಗೂ ಚಿಕ್ಕತುಮಕೂರು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಜೋದಾನಿ ಕಂಪನಿ ಕಲುಷಿತ ನೀರು ಬಿಟ್ಟ ಕಾರಣ ಜಲಚರಗಳು ಸತ್ತಿದ್ದವು. ಅವರ ವಿರುದ್ದ ಈವರೆಗು ಕ್ರಮ ಜರುಗಿಸಿಲ್ಲ. ಅದೇ ರೀತಿ ಅನುಗ್ರಹ ಕೆಮಿಕಲ್ಸ್ ಕಂಪೆನಿ ಕೂಡ ವಿಷಯುಕ್ತ ನೀರು ಹರಿಸುತ್ತಿದೆ. ಈ ಹಿಂದಿನ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಮೇಶ್ ಅವರು ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದ್ದರು. ಆದರೆ, ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಲಾಯಿತು ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಬಾಶೆಟ್ಟಿಹಳ್ಳಿ ಸೇರಿದಂತೆ ಕಲುಷಿತಗೊಂಡಿರುವ ಕೆರೆ ವ್ಯಾಪ್ತಿಯ ಗ್ರಾಮಗಳಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳಿಂದ ಸ್ಯಾಂಪಲ್ ಗಳನ್ನು ಐಐಎಸ್ಸಿಗೆ ರವಾನಿಸಲು ಸೂಚಿಸಲಾಗಿದೆ.