ಸರ್ಕಾರಿ ಗೌರವದೊಂದಿಗೆ ಪಿಎಸ್ ಐ ಜಗದೀಶ್ ಅಂತ್ಯ ಸಂಸ್ಕಾರ
ಬೆಂಗಳೂರು, ಅ, 17 : ವಾಹನಗಳ್ಳರನ್ನು ಬಂಧಿಸಲು ಮುಂದಾಗಿ ಹತ್ಯೆಗೀಡಾಗಿದ್ದ ದೊಡ್ಡಬಳ್ಳಾಪುರದ ಪಿಎಸ್ ಐ ಜಗದೀಶ್ ಅವರ ಅಂತ್ಯಸಂಸ್ಕಾರ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಲ್ಲಾಪುರದ ಗ್ರಾಮದಲ್ಲಿ ಅಕ್ಟೋಬರ್ 17ರ ಶನಿವಾರ ಮಧ್ಯಾಹ್ನ 2ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೋಯ್ಲಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಅವರು ಪಿಎಸ್ ಐ ಜಗದೀಶ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. 500 ಮಂದಿ ಪೊಲೀಸ್ ಅಧಿಕಾರಿಗಳು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.[ಕಳ್ಳರಿಂದ ಹತ್ಯೆಯಾದ ಪಿಎಸ್ ಐ ಜಗದೀಶ್ ಪರಿಚಯ]

ದೊಡ್ಡಬಳ್ಳಾಪುರದ ಪಿಎಸ್ ಐ ಜಗದೀಶ್ ಅವರ ಹತ್ಯೆಗೆ ಹಲವಾರು ಗಣ್ಯರು, ಹಳ್ಳಿಗರು, 50ಕ್ಕೂ ಹೆಚ್ಚು ಬ್ಯಾಚ್ ಮೇಟ್ ಗಳು ಸೇರಿದಂತೆ ಸಾವಿರಾರು ಮಂದಿ ಕಂಬನಿ ಮಿಡಿದಿದ್ದಾರೆ. ಈ ಸಂದರ್ಭದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.[ಪೊಲೀಸರ ದುಗುಡ-ದುಮ್ಮಾನ ತೆರೆದಿಡುವ ಪೇದೆಯ ಪತ್ರ]
ದೊಡ್ಡಬಳ್ಳಾಪುರ ವ್ಯಾಪ್ತಿಯ ಪಿ ಎಸ್ ಐ ಜಗದೀಶ್ ಅವರನ್ನು ಚಂದ್ರಶೇಖರ್ ಮತ್ತು ಮಧು (ಅಪ್ಪ-ಮಗ) ಎಂಬ ಬೈಕ್ ಕಳ್ಳರನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಅವರು ಚಾಕುವಿನಿಂದ ಇರಿದು ಕೊಂದ ಘಟನೆ ನೆಲಮಂಗಲದ ವಿನಾಯಕ ನಗರದ ಬಳಿ ಅಕ್ಟೋಬರ್ 16 ಶುಕ್ರವಾರ ಬೆಳಿಗ್ಗೆ 11.45 ರ ವೇಳೆಯಲ್ಲಿ ನಡೆದಿತ್ತು. ಜಗದೀಶ್ ಅವರ ಹೊಟ್ಟೆ ಮತ್ತು ಎದೆಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವವಾದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದ್ದರು.












Click it and Unblock the Notifications