ಕೃಷಿ, ಹೋರಾಟದಲ್ಲಿ ಬ್ಯುಸಿ ದೊಡ್ಡಬಳ್ಳಾಪುರದ ಈ ಮಹಿಳೆ
ಬೆಂಗಳೂರು, ಮಾರ್ಚ್ 15; ಮಹಿಳೆಯರಿಗೂ ಸಮಾನ ನ್ಯಾಯ ಹಾಗೂ ಸಮಾನವಾದ ಮೀಸಲಾತಿ ಸಿಗಬೇಕೆಂಬ ಕಾನೂನು ನಮ್ಮ ದೇಶದಲ್ಲಿ ಈಗಾಗಲೇ ಜಾರಿಯಲ್ಲಿದೆ. ಆದರೆ ಅದೇಷ್ಟೊ ಮಹಿಳೆಯರು ಇವತ್ತಿನ ದಿನದಲ್ಲಿ ಮದುವೆಯಾದ ನಂತರ ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಹೆದರುತ್ತಾರೆ. ಆದರೆ ಇಲ್ಲೊಬ್ಬರು ದಿಟ್ಟ ಮಹಿಳೆ ನಾವು ಸಮಾಜದಲ್ಲಿ ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಬದುಕುತ್ತಿದ್ದಾರೆ.
ಈ ಮಹಿಳೆ ಕೃಷಿಗೂ ಸೈ, ಉಳುಮೆಗೂ ಸೈ. ಹೋರಾಟಕ್ಕೂ ಸೈ ಅಲ್ಲದೆ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಕೊಡಿಸುವುದಕ್ಕೂ ಸೈ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಹಿಳೆ ಇವರು. ದೇಶದ ಬೆನ್ನೆಲುಬು ಅನ್ನದಾತ. ನಾನು ಕೂಡ ಕೃಷಿ ಚಟುವಟಿಕ ಮಾಡಿ ದೇಶದ ಅನ್ನದಾತ ಮಹಿಳೆಯಾಗುತ್ತೇನೆ ಎಂಬ ಹಂಬಲದಿಂದ ಟ್ರಾಕ್ಟರ್ನಲ್ಲಿ ಉಳಮೆ ಮಾಡುತ್ತಿರುವ ಈ ಮಹಿಳೆಯ ಹೆಸರು ಉಮಾದೇವಿ.
ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿ ಗ್ರಾಮದ ನಿವಾಸಿಯಾದ ಈಕೆ ಪುರುಷರಿಗಿಂತಲೂ ಕಮ್ಮಿಯಿಲ್ಲ ಎಂಬಂತೆ ಕೃಷಿ ಮಾಡುತ್ತಿದ್ದಾರೆ. ಕೃಷಿಯೊಂದೇ ಅಲ್ಲದೇ ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಸಿಗಬೇಕೆಂದು ಸರ್ಕಾರದ ವಿರುದ್ಧ ನಿರಂತರ ಹೋರಾಟವನ್ನು ಮಾಡುತ್ತಿದ್ದಾರೆ. ಉಮಾದೇವಿ ಓದಿರೋದು ಕೇವಲ 10 ನೇ ತರಗತ ಮಾತ್ರ. ಆದರೆ ಕೃಷಿ ಚಟುವಟಿಕೆಗೆ ಧುಮಕಿದರೆ ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಕೆಲಸ ಮಾಡುತ್ತಾರೆ.
ಅಂದಹಾಗೆ 18 ವರ್ಷಗಳ ಹಿಂದೆ ತಾನು ವಾಸವಿದ್ದ ಅದೇ ಗ್ರಾಮದಲ್ಲಿ ಚನ್ನೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಅಂತರ್ಜಾತಿ ವಿವಾಹವಾಗಿರುವುದರಿಂದ ಉಮಾದೇವಿಗೆ ತನ್ನ ಅತ್ತೆಯ ಮನೆಯಲ್ಲಿ ಸಾಕಷ್ಟು ಕಷ್ಟಗಳು ಎದುರಾಗಿದೆ. ಮೊದಲಿನಿಂದಲೂ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದ ಉಮಾದೇವಿಗೆ ತನ್ನ ಗಂಡನ ಸ್ವತ್ತಿಗೆ ಬಂದ 4 ಎಕರೆ ಭೂಮಿಯಲ್ಲಿ ಕೃಷಿಯನ್ನು ಮಾಡುತ್ತಿದ್ದರು.

ಜಮೀನು ಕಿತ್ತುಕೊಂಡ ಅತ್ತೆ
ಅಲ್ಲದೆ 4ಕ್ಕೂ ಹೆಚ್ಚು ಬೋರ್ ವೆಲ್ ಕೊರೆಸಿ ಅದರಲ್ಲಿ ಸಿಕ್ಕಿದ್ದ ಒಂದು ಬೋರ್ ವೆಲ್ ನೀರನ್ನು ಬಳಸಿಕೊಂಡು ಉತ್ತಮವಾದ ಬೆಳೆ ಬೆಳೆದಿದ್ದರು. ಆದರೆ ಅಂತರ್ಜಾತಿ ವಿವಾಹವಾಗಿ ಇಷ್ಟೆಲ್ಲಾ ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಉಮಾದೇವಿಯ ಅತ್ತೆ ಬೆಳೆದಿದ್ದ ಬೆಳೆ ನಾಶ ಮಾಡಿ ಜಮೀನನ್ನು ಕಿತ್ತುಕೊಂಡು ಬಿಟ್ಟರು. ಈ ಬಗ್ಗೆ ತನ್ನ ಗಂಡನೂ ಏನು ಮಾಡಲಿಕ್ಕೆ ಅಸಯಾಕರಾದಗ ಉಮಾದೇವಿ ದಿಟ್ಟ ಹೆಜ್ಜೆಯನ್ನಿಟ್ಟಳು. ತನ್ನ ತಾಯಿ ಕೊಟ್ಟ 22 ಗುಂಟೆ ಜಮೀನಿನಲ್ಲೇ ಕೃಷಿ ಚಟುವಟಿಕೆ ಮಾಡಲು ಮುಂದಾದರು.

ಸಾಲ ಮಾಡಿ ಕೃಷಿ ಆರಂಭಿಸಿದರು
ಉಮಾದೇವಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಆದರೂ ಕೃಷಿ ಮಾಡಲೇಬೇಕು ಎಂಬ ಹಂಬಲದಿಂದ ತನ್ನ ಬಳಿ ಇದ್ದ 22 ಗಂಟೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೋರ್ ವೆಲ್ ಕೊರೆಸಿದರು. ಒಳ್ಳೆಯ ನೀರು ಸಹ ಬಿದ್ದಿದೆ. ನೀರು ಸಿಕ್ಕಿದ ತಕ್ಷಣ ಬ್ಯಾಂಕ್ಗೆ ತೆರಳಿ ಸಾಲವನ್ನು ಮಾಡಿ ಸುಮಾರು 4 ಲಕ್ಷ ಮೌಲ್ಯದ ಟ್ರಾಕ್ಟರ್ ತಂದಿದ್ದಾರೆ. ತನ್ನ ಜಮೀನಿನಲ್ಲಿ ತಾವೇ ಟ್ರಾಕ್ಟರ್ನಲ್ಲಿ ಉಳಮೆಯನ್ನು ಮಾಡಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಅಂದಹಾಗೆ ಮಹಿಳೆಯರು ಟ್ರಾಕ್ಟರ್ ಓಡಿಸೋದೆ ಕಡಿಮೆ. ಆದರೆ ಉಮಾದೇವಿ ತಾನೇ ಟ್ರಾಕ್ಟರ್ ತೆಗೆದುಕೊಂಡು ಉಳುಮೆ ಮಾಡುವುದಲ್ಲದೇ, ಬೆಳೆದ ತರಕಾರಿಗಳನ್ನು ಟ್ರಾಕ್ಟರ್ಗೆ ತುಂಬಿಕೊಂಡು ಮಾರ್ಕೆಟ್ಗೂ ಹೋಗುತ್ತಾರೆ.

ಹಸು ಸಹ ಸಾಕಾಣಿಕೆ ಮಾಡುತ್ತಾರೆ
ಎರಡು ಹಸು ಸಾಕಿ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಂದ ಆಗುವ ಮೋಸದಿಂದ ಉಮಾದೇವಿ ಬೇಸತ್ತಿದ್ದಾರೆ. ಈ ಹಿಂದೆ ಒಂದು ಬಾರಿ ದೊಡ್ಡಬಳ್ಳಾಪುರದಲ್ಲಿ ಬೆಳೆದಿದ್ದ ಸೊಪ್ಪನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ದಲ್ಲಾಳಿಗಳ ಮೋಸದಿಂದ ರೈತರಿಗೆ ಬೆಲೆಯಲ್ಲಿ ಆಗುತ್ತಿರುವ ಮೋಸ ಖಂಡಿಸಿ ರಸ್ತೆಯಲ್ಲೇ ಹೋರಾಟವನ್ನು ಮಾಡಿದರು. ಅಲ್ಲದೆ ರೈತರರಿಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಟ್ರಾಕ್ಟರ್ನಲ್ಲಿ ವಿಧಾನಸೌಧ ಚಲೋ ಹೋರಾಟ ಸಹ ಮಾಡಿದ್ದಾರೆ. ಇನ್ನೂ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಉಮಾದೇವಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಶಾಶ್ವತ ನೀರಾವರಿ ಹೋರಾಟ ಜಾಥಾದಲ್ಲಿ ಟ್ರಾಕ್ಟರ್ನಲ್ಲಿ ಪಾಲ್ಗೊಂಡ ಏಕೈಕ ಮಹಿಳೆ ಉಮಾದೇವಿ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರಿಗೆ ಯಾವುದೇ ಕೊರೆತೆಯಿಲ್ಲದಂತೆ ಓದಿಸುತ್ತಿದ್ದಾರೆ.

ರೈತರಿಗೆ ಸಹಾಯ ಮಾಡುತ್ತಾರೆ
ಉಮಾದೇವಿ ಕೃಷಿ, ಹೋರಾಟದ ಜೊತೆಯಲ್ಲಿ ತನ್ನ ಕೈಲಾದ ಮಟ್ಟಿಗೆ ಜನರಿಗೆ ಸೇವೆಯನ್ನು ಮಾಡುತ್ತಿದ್ದಾರೆ. ದೊಡ್ಡಬಳ್ಳಾಪುರ ತಾಲೂಕು ಕಛೇರಿಗೆ ಆಗಮಿಸುವ ರೈತರಿಗೆ ತನ್ನ ಕೈಲಾದ ಕೆಲಸ ಮಾಡಿಕೊಡುತ್ತಾರೆ. ತನ್ನದೇ ಖರ್ಚಿನಲ್ಲಿ ಪತ್ರಿಕೆ ಮಾಡಿ, ಹೋರಾಟ ನಡೆಸುತ್ತಿದ್ದಾರೆ. ಉಮಾದೇವಿಯ ಹೋರಾಟಕ್ಕೆ ಹಾಗೂ ಕೃಷಿ ಚಟುವಟಿಕೆಗೆ ಪತಿ ಚನ್ನೇಗೌಡ ಸಹಾಯಕವಾಗಿದ್ದಾರೆ.
ಉಮಾದೇವಿ ಮಾರುಕಟ್ಟೆಗೆ ಹೋಗಿ ಬರುವಷ್ಟರಲ್ಲಿ ತಾನೇ ಅಡುಗೆ ಮಾಡಿ ಮನೆಯ ಕೆಲಸ ಮುಗಿಸುತ್ತಾರೆ. ಹೆಂಡತಿಯ ಹೋರಾಟದ ಸಾಧನೆ ಹಾಗೂ ಕೃಷಿ ಚಟುವಟಿಕೆಯ ಬಗ್ಗೆ ಚನ್ನೇಗೌಡರು ಸಂತಸ ವ್ಯಕ್ತಪಡಿಸುತ್ತಾರೆ. ಇನ್ನೂ ಪಕ್ಕದ ಮನೆಯ ಮಹಿಳೆಯರು ಸಹ ಉಮಾದೇವಿಯ ದಿಟ್ಟ ಹೋರಾಟ ಹಾಗೂ ಅವರ ದೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications