ಟೆರ್ರಾ ಫಾರ್ಮ್ ಕಸಕ್ಕೆ ಬೆಂಕಿ, ಜನರಿಗೆ ಸಂಕಷ್ಟ
ಬೆಂಗಳೂರು, ಮಾ. 23 : ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗುಂಡ್ಲಹಳ್ಳಿಯಲ್ಲಿರುವ ಟೆರ್ರಾ ಫಾರ್ಮ್ ಕಸ ವಿಲೇವಾರಿ ಘಟಕಕ್ಕೆ ಬೆಂಕಿ ಬಿದ್ದು ಮೂರು ದಿನಗಳು ಕಳೆದಿವೆ. ಕಸದ ರಾಶಿಯಿಂದ ಮೇಲೇಳುತ್ತಿರುವ ದಟ್ಟ ಹೊಗೆಯಿಂದಾಗಿ ಜನರು ಉಸಿರಾಟದ ತೊಂದರೆಯಿಂದ ನರಳುತ್ತಿದ್ದಾರೆ.
ಮಾರ್ಚ್ 20ರಂದು ಕಸ ವಿಲೇವಾರಿ ಘಟಕಕ್ಕೆ ಬೆಂಕಿ ಬಿದ್ದಿದ್ದು ಮೂರು ದಿನ ಕಳೆದರೂ ಬೆಂಕಿ ನಂದಿಲ್ಲ. ರಾಸಾಯನಿಕ ಮಿಶ್ರಿತ ದಟ್ಟ ಹೊಗೆಯು ಗುಂಡ್ಲಹಳ್ಳಿ ಗ್ರಾಮವನ್ನು ಸಂಪೂರ್ಣವಾಗಿ ಆವರಿಸಿದ್ದು ಗ್ರಾಮದ ಶ್ವೇತಾ (4), ರೋಹಿತ್ (6), ಬಿಂದು (6) ಮತ್ತು ಗುರುಪ್ರಸಾದ್ (4) ಎಂಬ ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೆ, ದಟ್ಟಹೊಗೆ ಸುಮಾರು 5 ಕಿ.ಮೀ.ವ್ಯಾಪಿಸಿದ್ದು ಕಾರ್ಯಾಚರಣೆಗೂ ತೊಂದರೆ ಉಂಟಾಗಿದೆ. ಗುಂಡ್ಲಹಳ್ಳಿ, ಚಿಕ್ಕಮಂಕಲಾಳ, ಕಾಮನ ಅಗ್ರಹಾರ, ಸಕ್ಕರೆ ಗೊಲ್ಲಹಳ್ಳಿ, ಕಾಡತಿಪ್ಪೂರು ಸೇರಿದಂತೆ 20 ಗ್ರಾಮಗಳನ್ನು ಹೊಗೆ ಆವರಿಸಿದೆ. [ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]
ಕಸದ ರಾಶಿಯ ಹೊಗೆಯಿಂದಾಗಿ ಜನರು ಗಂಟಲು ಕೆರೆತ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಘಟಕಕ್ಕೆ ಬೆಂಕಿ ಬಿದ್ದು ಮೂರು ದಿನಗಳು ಕಳೆದರೂ ಬಿಬಿಎಂಪಿಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. [ಕಸ ಬೇರ್ಪಡಿಸದಿದ್ದರೆ ದಂಡ]
ಘಟಕ ಮುಚ್ಚಲು ಆದೇಶ : ಟೆರ್ರಾ ಫಾರ್ಮ್ ಕಸ ವಿಲೇವಾರಿ ಘಟಕಕ್ಕೆ ಬೆಂಕಿ ಬಿದ್ದು ಜನರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಈ ಘಟಕವನ್ನು ಮುಚ್ಚಲು ನಿರ್ಧರಿಸಲಾಗಿದೆ. ಸೋಮವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಘಟಕವನ್ನು ಮುಚ್ಚುವುದಕ್ಕೆ ಆದೇಶ ಜಾರಿ ಮಾಡಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications