ದೊಡ್ಡಬಳ್ಳಾಪುರ: ಜನಸ್ಪಂದನಕ್ಕೆ ಕರಾಳೋತ್ಸವದ ಬಿಸಿ: ನಗರದ ಹಲವೆಡೆ ಕಪ್ಪು ಪಟ್ಟಿ!
ದೊಡ್ಡಬಳ್ಳಾಪುರ, ಸೆಪ್ಟೆಂಬರ್ 10: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರವನ್ನು ಘೋಷಣೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ದೊಡ್ಡಬಳ್ಳಾಪುದಲ್ಲಿ ನಡೆಯಲಿರುವ ಸರ್ಕಾರದ ಜನಸ್ಪಂದನ ಕಾರ್ಯಕ್ರಮಕ್ಕೆ ಕರಾಳೋತ್ಸವದ ಬಿಸಿ ತಟ್ಟಿಸಲು ಸ್ಥಳೀಯರು ಕಾತರರಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ವಿವಿಧೆಡೆಗಳಲ್ಲಿ ಕಪ್ಪು ಪಟ್ಟಿಯನ್ನು ಭುಜಕ್ಕೆ ಕಟ್ಟಿಕೊಂಡು ಹೋರಾಟಕ್ಕೆ ಬೆಂಬಲ ನೀಡುತ್ತಿರುವುದು ಕಂಡು ಬರಲಾರಂಭಿಸಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿನ ಅಂಗಡಿಗಳ ಮುಂದೆ ಕಪ್ಪು ಬಟ್ಟೆಯ ಬಾವುಟ ಕಟ್ಟುತ್ತಿದ್ದಾರೆ.
ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಹಂತಗಳಲ್ಲಿ ನಡೆಸುತ್ತಿರುವ ಹೋರಾಟದ ಅಂಗವಾಗಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಏಕೆ ಆಗಬೇಕು? ಇದಕ್ಕೆ ಇರುವ ಅರ್ಹತೆಗಳೇನು? ಹೀಗೊಂದು ಮುಖಾಮುಖಿ ಕುರಿತ ಕರಪತ್ರಗಳನ್ನು ಸಾರ್ವಜನಿಕರಿಗೆ ಶುಕ್ರವಾರ ಹಂಚುವ ಮೂಲಕ ಜಿಲ್ಲಾ ಕೇಂದ್ರ ಹೋರಾಟಕ್ಕೆ ಬೆಂಬಲಿಸುವಂತೆ ಹಾಗೂ ಸೆ.10ರಂದು ನಡೆಯಲಿರುವ ಜನಸ್ಪಂದನದ ವೇಳೆ ಕರಾಳೋತ್ಸವ ಆಚರಿಸಿ, ಕಪ್ಪು ಪಟ್ಟಿಧರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸಹ ಕಪ್ಪುಪಟ್ಟಿ ಧರಿಸಿ, ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿಸುವಂತೆ ಒತ್ತಾಯಿಸಬೇಕೆಂದು ಕರೆ ನೀಡಿತ್ತು.
ಡಾ ಕೆ ಸುಧಾಕರ್ ಹೇಳಿಕೆಗೆ ಖಂಡನೆ
ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಡಾಕೆ.ಸುಧಾಕರ್ ಹೇಳಿಕೆ ಖಂಡಿಸಿ ತಾಲೂಕಿನಲ್ಲಿ ಹೋರಾಟ ನಡೆಸಲಾಗುತ್ತಿದೆ. ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆಗಳಿದ್ದರು ದೊಡ್ಡಬಳ್ಳಾಪುರ ತಾಲೂಕಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ಜಿಲ್ಲಾ ಕೇಂದ್ರದ ಅರ್ಹತೆಗಳ ಬಗ್ಗೆ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯ ಅರ್ಹತೆಗಳನ್ನು ಪಟ್ಟಿ ಮಾಡಿ, ಹಾಗೂ ದೊಡ್ಡಬಳ್ಳಾಪುರದ ವಿಶೇಷತೆಗಳ ಬಗ್ಗೆ ಕರಪತ್ರದಲ್ಲಿ ಮಾಹಿತಿ ನೀಡಿ ಸಾರ್ವಜನಿಕರಿಗೆ ಹಂಚಿದ್ದು, ಸಾರ್ವಜನಿಕರು ಸಹ ಹೋರಾಟವನ್ನು ಬೆಂಬಲಿಸಲು ಹೋರಾಟ ಸಮಿತಿ ಮನವಿ ಮಾಡಿದೆ.
ಜಿಲ್ಲಾ ಕೇಂದ್ರ ಮಾಡುವಲ್ಲಿ ಅನ್ಯಾಯ
ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ವತಿಯಿಂದ ದೊಡ್ಡಬಳ್ಳಾಪುರ ವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರು ಪದೇ ಪದೇ ಜಿಲ್ಲಾ ಕೇಂದ್ರದ ವಿಚಾರವಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಲೇ ಇರುತ್ತಾರೆ. ಈ ದಿಸೆಯಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಸೆ.10ರ ಜನಸ್ಪಂದನದ ವೇಳೆ ಕರಾಳೋತ್ಸವ ಆಚರಿಸಲು ನಿರ್ಧರಿಸಿತ್ತು.
ಜಾಥದಲ್ಲಿ ಹಲವು ಹೋರಾಟಗಾರರು ಭಾಗಿ
ಬೆಳಿಗ್ಗೆ 9.30 ಗಂಟೆಗೆ ನಗರದ ಕನ್ನಡ ಜಾಗೃತ ಪರಿಷತ್ತಿನ ಮುಂಭಾಗದಿಂದ ಬೃಹತ್ ಜಾಥಾ ಹೊರಟು ಪಿಎಸ್ಐ ಜಗದೀಶ್ (ಅರ್ಕಾವತಿ)ವೃತ್ತದಲ್ಲಿ ಕರಾಳೋತ್ಸವ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ಶಾಂತಿಯುತ ಪ್ರತಿಭಟೆ ಎಂದ ಹೋರಾಟಗಾರರು
ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿಯಿಂದ ಹೋರಾಟಗಾರರ ಜೊತೆ ಗೌಪ್ಯ ಸಂಧಾನ ಸಭೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸರು ಹೋರಾಟಗಾರರನ್ನ ಕರೆಸಿ ಸಂಧಾನ ಯತ್ನ ಮಾಡಿದ್ದಾರೆ.
ಯಾವುದೇ ಪ್ರತಿಭಟನೆ ಮಾಡಬೇಡಿ, ಇನ್ನೊಂದು ದಿನ ಬೇಕಾದ್ರೆ ಪ್ರತಿಭಟನೆ ಮಾಡಿ, ಕೆಲ ಮುಖಂಡರಿಗೆ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಕೆ ಮಾಡಲಿಕ್ಕೆ ಅವಕಾಶ ನೀಡ್ತೇವೆ ಎಂದಿರೋ ಎಸ್.ಪಿ ಆಶ್ವಾಸನೆಯನ್ನು ನೀಡಿದ್ದಾರೆ. ಆದರೆ ಹೋರಾಟಗಾರು ಮಾತ್ರ ತಾವು ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ. ಕಪ್ಪು ಪಟ್ಟಿ ಧರಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.