ನಮ್ಮ ತ್ಯಾಗಕ್ಕೆ ಜೆಡಿಎಸ್ ಓಗೊಡಲಿ: ಡಿಕೆಶಿ ಮನವಿ
ಬೆಂಗಳೂರು, ಮೇ 26: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್ಗೆ ಮನವಿ ಮಾಡಿದ್ದೇವೆ. ನಾವು ಮಾಡಿದ ತ್ಯಾಗಕ್ಕೆ ಓಗೊಟ್ಟು ಅವರು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆರ್ಆರ್ನಗರ ಅಭ್ಯರ್ಥಿ ವಿಚಾರವಾಗಿ ನಾವು ಜೆಡಿಎಸ್ನವರಿಗೆ ಬಹಳ ಗೌರವದಿಂದ ಹೇಳಿದ್ದೇವೆ. ಬಿಜೆಪಿಯನ್ನು ದೂರ ಇಡಲು ಇದೊಂದು ಉತ್ತಮ ಅವಕಾಶವಾಗಿದೆ. ನಾವು ಬಹಳ ಉದಾರದಿಂದ ದೊಡ್ಡ ತ್ಯಾಗದಿಂದ ಜೆಡಿಎಸ್ಗೆ ಸಹಾಯ ಮಾಡಿದ್ದೇವೆ. ಹಾಗಾಗಿ ನಮ್ಮ ಅಭ್ಯರ್ಥಿ ಗೆಲುವಿಗೆ ಸಹಾಯಮಾಡಿ ಎಂದು ಕೇಳಿಕೊಂಡಿದ್ದೇವೆ ಎಂದರು.
ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್ಗೆ ಮನವಿ ಮಾಡಿದ್ದೆವು ಆದರೆ ಅಭ್ಯರ್ಥಿಗಳನ್ನು ಹಾಕಿರುವುದರಿಂದ ಹಿಂತೆಗೆದುಕೊಳ್ಳಲು ಕಷ್ಟ ಎಂದಿದ್ದಾರೆ. ಆದರೂ ಕಾಂಗ್ರೆಸ್ ಮಾಡಿದ ಈ ದೊಡ್ಡ ತ್ಯಾಗಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಾಲಹಳ್ಳಿ ಅಪಾರ್ಟ್ಮೆಂಟ್ವೊಂದರಲ್ಲಿ 10 ಸಾವಿರಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಮೇ 28ರಂದು ಈ ಕ್ಷೇತ್ರದ ಚುನಾವಣೆ ನಡೆಯಲಿದೆ.












Click it and Unblock the Notifications