ಇಡಿ ವಶದಲ್ಲಿರುವ ಡಿಕೆಶಿ ಟ್ವೀಟ್: ಅಭಿಮಾನಿಗಳಿಗೆ ಜನರಿಗೆ ಮನವಿ
ಬೆಂಗಳೂರು, ಸೆಪ್ಟೆಂಬರ್ 10: ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಆಶ್ಚರ್ಯಕರ ರೀತಿಯಲ್ಲಿ ಇಂದು ಟ್ವೀಟ್ ಮಾಡಿದ್ದಾರೆ.
'ನನ್ನ ಬೆಂಬಲಕ್ಕೆ ಬೆಂಗಳೂರಿನಲ್ಲಿ ನಾಳೆ ಭಾರಿ ದೊಡ್ಡ ಪ್ರತಿಭಟನೆ ಹಮ್ಮಿಕೊಂಡಿರುವ ನಾಯಕರು, ಮಿತ್ರರು, ಬೆಂಬಲಿಗರು ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು' ಎಂದು ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
'ಪ್ರತಿಭಟನೆ ಶಾಂತವಾಗಿರಲಿ, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು, ಸಾರ್ವಜನಿಕ ಆಸ್ತಿಗೆ ಯಾವುದೇ ಹಾನಿ ಆಗಬಾರದು' ಎಂದು ಅವರು ಮನವಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರನ್ನು ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿಯು ವಶಕ್ಕೆ ಪಡೆದುಕೊಂಡಿದೆ. ಸೆಪ್ಟೆಂಬರ್ 13 ರ ವರೆಗೆ ಅವರು ಇಡಿ ವಶದಲ್ಲಿ ಇರಲಿದ್ದಾರೆ. ಆ ನಂತರ ನ್ಯಾಯಾಲಯವು ಡಿಕೆಶಿಗೆ ಜಾಮೀನು ನೀಡಬಹುದೇ ಇಲ್ಲವೇ ಎಂಬುದನ್ನು ನಿರ್ಧರಿಸಲಿದೆ.
ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸಿ ಮತ್ತು ಅವರ ಬಂಧನವನ್ನು ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ಭಾರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಒಕ್ಕಲಿಗರ ಸಂಘ, ಕಾಂಗ್ರೆಸ್ ಸೇರಿ ಇನ್ನೂ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ.
ಇಂದು ನಡೆದಿರುವ ಹೊಸ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರಿಗೂ ಇಡಿ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರಿದೆ.












Click it and Unblock the Notifications