ತೆಲಂಗಾಣ ಕಾಂಗ್ರೆಸ್ ನಾಯಕನ ಬಂಧನ: ಡಿಕೆಶಿ ಆಕ್ರೋಶ
ಬೆಂಗಳೂರು, ಡಿಸೆಂಬರ್ 04: ತೆಲಂಗಾಣದ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ ಅವರ ಬಂಧನವನ್ನು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
"ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಕೊಡಂಗಲ್ ಶಾಸಕ ರೇವಂತ್ ರೆಡ್ಡಿ ಅವರ ಬಂಧನ ನಿಜಕ್ಕೂ ಖಂಡನೀಯ. ಮುಖ್ಯಮಂತ್ರಿ ಕೆಸಿಆರ್ ಅವರ ಪ್ರಚಾರ ಸಭೆ ಇದೆ ಎಂಬ ಕಾರಣಕ್ಕೆ ರೇವಂತ್ ರೆಡ್ಡಿ ಅವರನ್ನು ಬೆಳಗ್ಗಿನ ಜಾವ 3 ಗಂಟೆಯ ಹೊತ್ತಿಗೆ ಬಂಧಿಸಿದ್ದು ಎಷ್ಟು ಸರಿ?" ಎಂದು ಅವರು ಪ್ರಶ್ನಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್, "ಈ ಕುರಿತು ನಾವು ಚುನಾವಣಾ ಆಯೋಗದ ಮೊರೆಹೋಗುತ್ತೇವೆ" ಎಂದರು.

ತೆಲಗಾಣದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕೊಡಂಗಲ್ ಕ್ಷೇತ್ರದಲ್ಲಿ ಟಿಆರ್ ಎಸ್ ಮುಖಂಡ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದರು. ಆದರೆ ಕೆಸಿಆರ್ ಪ್ರಚಾರ ಸಭೆಯನ್ನು ರದ್ದುಗೊಳಿಸುವಂತೆ ಈ ಮೊದಲೇ ರೇವಂತ ರೆಡ್ಡಿ ಬೆದರಿಕೆ ಒಡ್ಡಿದ್ದರಿಂದ, ಭದ್ರತೆಯ ದೃಷ್ಟಿಯಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ.












Click it and Unblock the Notifications