ಹೈಕೋರ್ಟ್ ತಡೆಯಿದ್ದರೂ ದಾಳಿ: ಡಿಕೆ ಶಿವಕುಮಾರ್ ಪರ ವಕೀಲ ಆರೋಪ
ಬೆಂಗಳೂರು, ಅಕ್ಟೋಬರ್ 5: ಉಪ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇದು ರಾಜಕೀಯ ದುರುದ್ದೇಶದಿಂದ ಕೂಡಿದ ದಾಳಿಯಾಗಿದೆ ಎಂದು ಡಿಕೆ ಶಿವಕುಮಾರ್ ಅವರ ಮನೆ ಮೇಲಿನ ಸಿಬಿಐ ದಾಳಿಯನ್ನು ಅವರ ಪರ ವಕೀಲ ಎ. ಪೊನ್ನಣ್ಣ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಯಾವುದೇ ತನಿಖೆ ನಡೆಸದಂತೆ ಸೂಚನೆ ನೀಡಲಾಗಿದೆ. ಆದರೂ ಅದನ್ನು ಮೀರಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.
ಹೈಕೋರ್ಟ್ ಅನುಮತಿ ಇಲ್ಲದೆ ದಾಳಿ ನಡೆಸಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಈ ರೀತಿ ದಾಳಿ ಮಾಡಿರುವುದು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದೆ. ಸಿಬಿಐ ತನಿಖೆ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಅನುಮತಿ ನೀಡುವುದನ್ನು ಪ್ರಶ್ನಿಸಿ ಕೋರ್ಟಿಗೆ ಅರ್ಜಿ ಹಾಕಲಾಗಿತ್ತು. ದಾಳಿ ನಡೆಸದಂತೆ ತಡೆಯಾಜ್ಞೆಯಿದೆ. ಹಾಗಿದ್ದರೂ ಸಿಬಿಐ ದಾಳಿ ಮಾಡಿರುವುದು ಏಕೆ ಎಂಬುದನ್ನು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ಹಿರಿಯ ವಕೀಲ ಎ. ಪೊನ್ನಣ್ಣ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ತನಿಖೆ ನಡೆಸಬಾರದು ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ನನಗೆ ಗೊತ್ತಿರುವ ಮಾಹಿತಿ ಪ್ರಕಾರ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐನಲ್ಲಿ ಇರುವುದು ಒಂದೇ ಪ್ರಕರಣ. ಅದರಲ್ಲಿಯೂ ಎಫ್ಐಆರ್ ದಾಖಲಾಗಿಲ್ಲ. ಅಲ್ಲದೆ, ರಾಜ್ಯದ ಒಳಗೆ ಪ್ರವೇಶಿಸುವ ಮುನ್ನ ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರದ ಕಾನೂನಾತ್ಮಕ ಅನುಮತಿ ನೀಡಬೇಕು. ಆದರೆ ಅದನ್ನು ನೀಡಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸರ್ಕಾರ ಅನುಮತಿ ನೀಡಿದೆ. ಇದು ನ್ಯಾಯಾಂಗ ವ್ಯವಸ್ಥೆಗೆ ತೋರಿಸಿರುವ ಅಗೌರವ ಎಂದು ಆರೋಪಿಸಿದರು.












Click it and Unblock the Notifications