ಸೋತ ಶ್ರೀರಾಮುಲುಗೆ ಅಭಿನಂದನೆ ಸಲ್ಲಿಸಿದ ಡಿಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 06: ಬಳ್ಳಾರಿ ಲೋಕಸಭೆ ಕ್ಷೇತ್ರ ಉಪಚುನಾವಣೆ ಡಿಕೆ ಶಿವಕುಮಾರ್ ಮತ್ತು ಶ್ರೀರಾಮುಲು ನಡುವಿನ ಕದನ ಎಂದೇ ಬಿಂಬಿತವಾಗಿತ್ತು. ಈ ರಾಜಕೀಯ ಯುದ್ಧದಲ್ಲಿ ಅಂತಿಮ ವಿಜಯ ಡಿ.ಕೆ.ಶಿವಕುಮಾರ್ ಅವರದ್ದೇ ಆಗಿದೆ.
ಶ್ರೀರಾಮುಲು ಅವರ ಸಹೋದರಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ವಿರುದ್ಧ ಡಿ.ಕೆ.ಶಿವಕುಮಾರ್ ಬೆಂಬಲಿತ ಉಗ್ರಪ್ಪ ಅವರು ಭಾರಿ ಮತಗಳ ಅಂತರದ ವಿಜಯ ಸಾಧಿಸಿದ್ದಾರೆ. ಸ್ವತಃ ಅವರೇ ನಿರೀಕ್ಷಿಸದಷ್ಟು ಮತಗಳು ಅವರಿಗೆ ಬಂದಿವೆ.
ಬಳ್ಳಾರಿಯ ದಿಗ್ವಿಜಯದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್ ಅವರು ಸೋತ ಶ್ರೀರಾಮುಲು ಅವರ ಹೋರಾಟಕ್ಕೆ ಗೌರವ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಜೆ.ಶಾಂತಾ ಅವರಿಗೂ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಗೆದ್ದ ಅಮಲಿನಲ್ಲಿ ಉತ್ಪೇಕ್ಷೆಯ ಹೇಳಿಕೆಗಳನ್ನು ಕೊಡದ ಡಿ.ಕೆ.ಶಿವಕುಮಾರ್ ಬಳ್ಳಾರಿ ಉಪಚುನಾವಣೆಯ ಗೆಲುವು ಜನರ ಗೆಲುವು ಎಂದು ಕ್ಷೇತ್ರದ ಗೆಲುವನ್ನು ಜನರಿಗೆ ಅರ್ಪಿಸಿದ್ದಾರೆ.

ರಾಹುಲ್ ಗಾಂಧಿಗೆ ಗೆಲುವು ಅರ್ಪಣೆ
ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಬಳ್ಳಾರಿ ಚುನಾವಣೆಯ ಪೂರ್ಣ ಉಸ್ತುವಾರಿ ನೀಡಿದ್ದ ಹಾಗೂ ಅಭ್ಯರ್ಥಿ ಆಯ್ಕೆ ಮತ್ತಿತರ ವಿಷಯಗಳಲ್ಲಿ ಪೂರ್ಣ ಸ್ವಾತಂತ್ರ್ಯ ಕೊಟ್ಟ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಈ ಗೆಲುವು ಅರ್ಪಿಸುವುದಾಗಿಯೂ ಡಿ.ಕೆ.ಶಿವಕುಮಾರ್ ಹೇಳಿದರು. ಹಾಗೆಯೇ ಪಕ್ಷದ ಹಿರಿಯ ನಾಯಕರು, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲೆಯ ಕೈ ಶಾಸಕರು, ಸೋತ ಅಭ್ಯರ್ಥಿಗಳು ಮತ್ತು ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಧನ್ಯವಾದ ಸಲ್ಲಿಸಿದರು.

ಕೆಲವರು ಕುಹುಕ ಆಡಿದ್ದರು
ಬಳ್ಳಾರಿ ಜಿಲ್ಲೆಯ ಉಸ್ತುವಾರಿ ನನಗೆ ನೀಡಿದಾಗ ನಮ್ಮ ಪಕ್ಷದ ಗೆಳೆಯರೇ ಕೆಲವರು ಕುಹುಕ ಆಡಿದರು. ಹೊರಗಿನಿಂದ ಬಂದ ಈತನಿಗೆ ಕ್ಷೇತ್ರ ಗೊತ್ತಿಲ್ಲ ಎಂಬಿತ್ಯಾದಿ ಮಾತುಗಳು ಹೇಳಿದರು. ಬಳ್ಳಾರಿಗೆ ಉಗ್ರಪ್ಪ ಅವರನ್ನು ಅಭ್ಯರ್ಥಿ ಮಾಡಿದಾಗಲೂ ಇದೇ ಮಾತುಗಳು ಆಡಿದರು ಆದರೆ ಈಗ ಚಿತ್ರಣ ಬದಲಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಅವರು ಹೇಳಿದರು.

ಶಾಂತವಾಗಿ ಮತದಾನ ನಡೆಸುವುದು ಉದ್ದೇಶವಾಗಿತ್ತು
ಇದು ಹೈವೋಲ್ಟೇಜ್ ಕ್ಷೇತ್ರ ಎಂಬ ಕಾರಣದಿಂದ ಇಲ್ಲಿ ಶಾಂತರೀತಿಯಲ್ಲಿ ಮತದಾನ ನಡೆಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಹಾಗಾಗಿ ನಾನು ವೈಯಕ್ತಿಕ ಟೀಕೆಗಳಿಗೆ ಇಳಿಯಲಿಲ್ಲ, ಕಾರ್ಯಕರ್ತರಿಗೂ ಶಾಂತವಾಗಿ ವರ್ತಿಸುವಂತೆ ಹೇಳಿದ್ದೆ. ಬಿಜೆಪಿಯವರು ಸಹ ಶಾಂತ ರೀತಿಯಲ್ಲಿ ಚುನಾವಣೆ ನಡೆಸಿದರು. ಅಭ್ಯರ್ಥಿ ಶಾಂತಾ ಅವರು ಸಹ ಶಾಂತ ರೀತಿಯಿಂದ ಇದ್ದರು ಎಂದು ಅವರು ಹೇಳಿದರು.

ಎಲ್ಲವೂ ಚರ್ಚೆ
ಚುನಾವಣೆಯಲ್ಲಿ ಜಾತಿ, ಅಭಿವೃದ್ಧಿ, ಪಕ್ಷ, ಪ್ರತಿಷ್ಠೆ ಎಲ್ಲದರ ಬಗ್ಗೆಯೂ ಚರ್ಚೆ ಆಯಿತು. ಆದರೆ ಕಾಂಗ್ರೆಸ್ ಕೇವಲ ಅಭಿವೃದ್ಧಿಯ ವಿಷಯ ಇಟ್ಟುಕೊಂಡು ಮತ ಕೇಳಿತು. ಕಾಂಗ್ರೆಸ್ನ ವಿಜಯ ಪಕ್ಷದ ಮೇಲೆ ಜವಾಬ್ದಾರಿ ಹೆಚ್ಚಿಸಿದೆ. ಇರುವ ಅಲ್ಪ ಸಮಯದಲ್ಲಿ ಕ್ಷೇತ್ರಕ್ಕಾಗಿ ದುಡಿಯಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.












Click it and Unblock the Notifications