ವಿದ್ಯುತ್ ಸಮಸ್ಯೆಯಿಂದ ನಮ್ಮ ಮೆಟ್ರೋ ಸಂಚಾರ ಸ್ಥಗಿತ
ಬೆಂಗಳೂರು, ಜೂನ್ 3: ವಿದ್ಯುತ್ ಸಮಸ್ಯೆಯಿಂದಾಗಿ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಭಾನುವಾರ ಸ್ಥಗಿತಗೊಂಡಿತ್ತು.
ವಿದ್ಯುತ್ ಸಮಸ್ಯೆ ಈಗ ಮೆಟ್ರೋವನ್ನು ಕೂಡ ಬಿಡದೆ ಕಾಡುತ್ತಿದೆ. ಬೈಯಪ್ಪನಹಳ್ಳಿ ಇಂದಿರಾನಗರ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಅರ್ಧಗಂಟೆ ವಿದ್ಯುತ್ ಪೂರೈಕೆ ನಿಂತಿದ್ದರಿಂದ ಬಹುತೇಕ ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಾಯಬೇಕಾಯಿತು.
ಭಾನುವಾರ ಸಂಜೆ 7.23ರ ಸುಮಾರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಥರ್ಡ್ ರೇಲ್ನಲ್ಲಿ ವಿದ್ಯುತ್ ಸರಬರಾಜು ನಿಂತಿದ್ದರಿಂದ ರೈಲುಗಳು ಸಂಚರಿಸಲು ಸಾಧ್ವಾಗಿರಲಿಲ್ಲ. ಮಳೆಯೂ ಬರುತ್ತಿದ್ದುದರಿಂದ ಪ್ರಯಾಣಿಕರು ನಿಲ್ದಾಣದಿಂದ ಹೊರಕ್ಕೆ ಹೋಗಲು ಕೂಡ ಸಾಧ್ಯವಾಗಲಿಲ್ಲ. ರೈಲುಗಳು ಚಲಿಸಲು ಸಾಧ್ಯವಾಗದೆ ಅರ್ಧದಲ್ಲೇ ನಿಂತಿದ್ದವು.

ಬ್ಯಾಟರಿ ಚಾಲಿತ ಲೂಪ್ ರೈಲುಗಳ ಸಂಚಾರ
ಬ್ಯಾಟರಿ ಬಳಸಿ ನಿಲ್ದಾಣದವರೆಗೆ ಕೊಂಡೊಯ್ಯಲಾಯಿತು. ನಂತರ ಮೈಸೂರು ರಸ್ತೆಯಿಂದ ಇಂದಿರಾನಗರ ನಿಲ್ದಾಣದವರೆಗೆ ಬ್ಯಾಟರಿ ಚಾಲಿತ ಲೂಪ್ ರೈಲುಗಳನ್ನು ಕಾರ್ಯಾಚರಣೆಗೊಳಿಸಲಾಯಿತು.

ಬ್ಯಾಟರಿ ಚಾಲಿತ ರೈಲುಗಳು ನಿಧಾನ ಚಾಲನೆ
ಲೂಪ್ ರೈಲುಗಳು ನಿಧಾನವಾಗಿ ಸಂಚರಿಸುವುದರಿಂದ ಪ್ರತಿ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಮೆಜೆಸ್ಟಿಕ್ ನಿಲ್ದಾಣಕ್ಕೆ ರೈಲುಗಳು ಬಂದಾಗ ದಟ್ಟಣೆಯಿಂದಾಗಿ ಅನೇಕರು ರೈಲು ಹತ್ತಲಾರದೆ ಮುಂದಿನ ರೈಲಿಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ರಾತ್ರಿ 8 ಗಂಟೆಗೆ ಸರಿಹೋದ ರೈಲು ಸಂಚಾರ
ರಾತ್ರಿ 8.03ರ ಹೊತ್ತಿಗೆ ಸಿಬ್ಬಂದಿ ಸಮಸ್ಯೆಯನ್ನು ಸರಿಪಡಿಸಿ ವಿದ್ಯುತ್ ಪೂರೈಕೆಯಾಗುವಂತೆ ಮಾಡಿದರು. ನಂತರ ರೈಲುಗಳು ಬೈಯ್ಯಪ್ಪನಹಳ್ಳಿವರೆಗೆ ಸೇವೆ ನೀಡಲು ಆರಂಭಿಸಿದವು. ಆದರೆ ಅರ್ಧಗಂಟೆಯಲ್ಲಾದ ಸಮಸ್ಯೆಯಿಂದ ಎಲ್ಲಾ ನಿಲ್ದಾಣಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ರಾತ್ರಿ 9 ಗಂಟೆ ಬಳಿಕವೂ ನೇರಳೆ ಮಾರ್ಗದಲ್ಲಿ ಹೆಚ್ಚು ದಟ್ಟಣೆಯಿತ್ತು.

ಟೋಕನ್ ಖರೀದಿಸಿದವರಿಗೆ ಅನಿವಾರ್ಯ
ಇಂದಿರಾನಗರದವರೆಗೆ ಬಂದ ರೈಲುಗಳು ಮುಂದೆ ಹೋಗಲು ತಾಂತ್ರಿಕ ಸಮಸ್ಯೆ ಉಂಟಾಯಿತು. ಹೀಗಾಗಿ ಇಂದಿರಾನಗರದಿಂದ ಮುಂದಿನ ಸ್ವಾಮಿ ವಿವೇಕಾನಂದ ರಸ್ತೆ ನಿಲ್ದಾಣ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಗಳಲ್ಲಿ ರೈಲು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಎರಡೂ ನಿಲ್ದಾಣಗಳಿಗೆ ಬಂದವರಿಗೆ ರೈಲು ಸೇವೆ ಇಲ್ಲ ಎಣದು ಸಿಬ್ಬಂದಿ ಮಾಹಿತಿ ನೀಡಿದರು. ಆಗಲೇ ಟೋಕನ್ ಖರೀದಿಸಿದವರಿಗೆ ಅನಿವಾರ್ಯವಾಗಿ ದಾರಿ ಇಲ್ಲದೆ ರೈಲ್ವೆ ನಿಲ್ದಾಣದಲ್ಲೇ ಇರಬೇಕಾಯಿತು.












Click it and Unblock the Notifications