ಉಪ ಚುನಾವಣೆಗೆ ತಡೆ ನೀಡಲು ಅನರ್ಹ ಶಾಸಕರಿಂದ ಸುಪ್ರೀಂಗೆ ಮೊರೆ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 21: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಇಂದು ಘೋಷಣೆಯಾಗಿದ್ದು. ಆಯೋಗದ ನಿರ್ಣಯ ಅನರ್ಹ ಶಾಸಕರ ಜಂಘಾಬಲ ಉಡುಗಿಸಿದೆ.
ಅನರ್ಹತೆ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಈಗಾಗಲೇ ಅನರ್ಹ ಶಾಸಕರು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದಾರೆ. ಆದರೆ ಅರ್ಜಿಯ ತುರ್ತು ವಿಚಾರಣೆ ನಡೆಸಲಾಗಿಲ್ಲ. ಆದರೆ ಈ ನಡುವೆ ಈಗ ಹಠಾತ್ತನೆ ಉಪ ಚುನಾವಣೆ ಘೋಷಣೆ ಆಗಿದ್ದು ಅನರ್ಹ ಶಾಸಕರ ಆತಂಕಕ್ಕೆ ಈಡಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅನರ್ಹ ಶಾಸಕರಲ್ಲಿ ಒಬ್ಬರಾದ ಸುಧಾಕರ್ ಅವರು, ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿದ್ದು, ಉಪಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಮತ್ತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

'ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನಮ್ಮನ್ನು ಅಸಾಂವಿಧಾನಿಕವಾಗಿ, ಕಾನೂನು ಬಾಹಿರವಾಗಿ ಅನರ್ಹಗೊಳಿಸಿದ್ದಾರೆ. ಇದು ನ್ಯಾಯಾಲಯಕ್ಕೆ ಮನವರಿಕೆ ಆಗಲಿದೆ' ಎಂದು ಹೇಳಿದ್ದಾರೆ.
'ಸೋಮವಾರ ನಮ್ಮ ಅರ್ಜಿ ವಿಚಾರಣೆಗೆ ಬರಲಿದ್ದು, ನ್ಯಾಯಾಲಯವು ಉಪಚುನಾವಣೆಗೆ ತಡೆಯಾಜ್ಞೆ ನೀಡಲಿದೆ ಎಂಬ ನಂಬಿಕೆ ಇದೆ ನಮ್ಮ ವಕೀಲರು ಈ ಬಗ್ಗೆ ಸೋಮವಾರ ಮತ್ತೊಂದು ಮನವಿ ಸಲ್ಲಿಸಲಿದ್ದಾರೆ' ಎಂದು ಅವರು ಹೇಳಿದರು.
'ಯಾವುದೇ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಸ್ಥಾನ ಖಾಲಿಯಾದರೆ ಅದನ್ನು ಆರು ತಿಂಗಳ ಒಳಗೆ ತುಂಬುವುದು ಆಯೋಗದ ಕರ್ತವ್ಯ, ಅದಕ್ಕೆ ಅನುಸಾರವಾಗಿಯೇ ಚುನಾವಣೆ ಘೋಷಿಸಲಾಗಿದೆ. ಆದರೆ ಅಧಿಸೂಚನೆ ಇನ್ನೂ ಹೊರಡಿಸಲಾಗಿಲ್ಲ, ಈಗ ವೇಳಾಪಟ್ಟಿ ಮಾತ್ರವೇ ಘೋಷಣೆ ಆಗಿದೆ' ಎಂದು ಸುಧಾಕರ್ ಹೇಳಿದರು.
ಪಿಎಲ್ಡಿ ಬ್ಯಾಂಕಿನ ಸಭೆಯಲ್ಲಿ ಭಾಗವಹಿಸಿದ್ದ ಸುಧಾಕರ್ ಅವರು, ಚುನಾವಣೆ ಘೋಷಣೆ ಆದ ಸುದ್ದಿ ತಿಳಿದ ಕೂಡಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ನಗರಕ್ಕೆ ಬಂದು ಯಡಿಯೂರಪ್ಪ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡರು ಎನ್ನಲಾಗಿದೆ.












Click it and Unblock the Notifications