ಗೃಹ ಸಚಿವ ಸಚಿವ ಕೆ.ಜೆ.ಜಾರ್ಜ್ ವಜಾಕ್ಕೆ ಬಿಜೆಪಿ ಪಟ್ಟು
ಬೆಂಗಳೂರು, ಜೂ.2: ಎಡಿಜಿಪಿ ಡಾ.ರವೀಂದ್ರನಾಥ್ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಗೃಹ ಸಚಿವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜೂ. 2 ಸೋಮವಾರ ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸಿ ಕೆ.ಜೆ.ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿದರು.
ಜನರ ರಕ್ಷಣೆಗೆ ಇರಬೇಕಾದ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಪೊಲೀಸ್ ಹಿರಿಯ ಅಧಿಕಾರಿಗಳ ಕಿತ್ತಾಟ ತಾರಕಕ್ಕೇರಿದ್ದು ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂದು ಬೆಂಗಳೂರು ಬಿಜೆಪಿ ನಗರಾಧ್ಯಕ್ಷ ಸುಬ್ಬನರಸಿಂಹ ಆರೋಪಿಸಿದರು.[ಕೆಫೆಯಲ್ಲಿ ಯುವತಿಯರ ಫೋಟೋ ಕ್ಲಿಕ್ಕಿಸಿದ ಎಡಿಜಿಪಿ]
ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ಮಾತನಾಡಿ, ಎಟಿಎಂನಲ್ಲಿ ಜ್ಯೋತಿಯವರ ಮೇಲೆ ಹಲ್ಲೆ ನಡೆದು ತಿಂಗಳುಗಳೇ ಕಳೆದರೂ ಆರೋಪಿ ಪತ್ತೆಯಾಗಿಲ್ಲ. ಸರ್ಕಾರ ಸತ್ತಿದೆಯೋ, ಬದುಕಿದೆಯೋ ಎಂಬ ಅನುಮಾನ ಕಾಡುತ್ತಿದೆ. ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದ ಪೊಲೀಸ್ ಇಲಾಖೆ ಈಗ ಬೀದಿಗೆ ಬಂದಿರುವುದು ವಿಷಾದನೀಯ ಎಂದರು.[ರವೀಂದ್ರನಾಥ್ ಪರ ನಿಂತ ಮೀಸಲು ಪೊಲೀಸ್ ಪಡೆ]
ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಮಾತನಾಡಿ, ಭೂಗತ ಪಾತಕಿಗಳು, ಭಯೋತ್ಪಾದಕರನ್ನು ಬಂಧಿಸಿ ರಾಜ್ಯದ ಪೊಲೀಸರು ಇಲಾಖೆಗೆ ಕೀರ್ತಿ ತಂದಿದ್ದರು. ಆದರೆ ಕಳೆದ ಒಂದು ವಾರದಿಂದ ಎಡಿಜಿಪಿ ಡಾ.ರವೀಂದ್ರನಾಥ್ ಪ್ರಕರಣದಿಂದಾಗಿ ಬೀದಿರಂಪಾಟವಾಗಿದೆ. ತನಿಖೆಯನ್ನು ಆದಷ್ಟು ಬೇಗ ಮುಗಿಸಿ ವರದಿಯನ್ನು ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಬಿಎಂಪಿ ಸದಸ್ಯರು, ಬಿಜೆಪಿ ಮುಖಂಡರು ಮತ್ತು ಬೆಂಗಳೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.