ಕೆಫೆಯಲ್ಲಿ ಯುವತಿಯರ ಫೋಟೋ ಕ್ಲಿಕ್ಕಿಸಿದ ಎಡಿಜಿಪಿ
ಬೆಂಗಳೂರು, ಮೇ 27: ಕಾಫಿ ಶಾಪಿನಲ್ಲಿ ಯುವತಿಯರ ಫೋಟೋ ಕ್ಲಿಕ್ಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ರವೀಂದ್ರನಾಥ್ ಮತ್ತೊಮ್ಮೆ ವೃತ್ತಿಗೆ ರಾಜೀನಾಮೆ ನೀಡುವ ಮಾತನ್ನಾಡಿದ್ದಾರೆ. ಇದೀಗ ಅವರು ಪೊಲೀಸ್ ಆಯುಕ್ತರ ಕಚೇರಿಗೆ ಆಟೋದಲ್ಲಿ ತೆರಳಿದ್ದು, ನೇರವಾಗಿ ರಾಜೀನಾಮೆ ಸಲ್ಲಿಸುವ ಮಾತನ್ನಾಡಿದ್ದಾರೆ.
ಹಿಂದಿನ ಸುದ್ದಿ: ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಯಡವಟ್ಟು ಮಾಡಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫೀ ಶಾಪೊಂದರಲ್ಲಿ ತಮ್ಮ ಮೊಬೈಲ್ನಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದ ವೇಳೆ ಸಾರ್ವಜನಿಕರೇ ಅವರನ್ನು ಹಿಡಿದು ಥಳಿಸಿದ ಘಟನೆ ನಡೆದಿದೆ.
ಇದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ನಾಟಕೀಯ ಬೆಳವಣಿಗೆಯಲ್ಲಿ ಇಂದು ಖುದ್ದಾಗಿ ಅವರೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಹಾಜರಾಗಿ ತಮ್ಮನ್ನು ಲಾಕಪ್ ಒಳಕ್ಕೆ ಕೂಡಿಹಾಕುವಂತೆ ಠಾಣಾಧಿಕಾರಿಗಳಿಗೆ ದುಂಬಾಲುಬಿದ್ದಿದ್ದಾರೆ.
ಕೆಳಗಿನ ಚಿತ್ರದಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ KSRP ADGP ಡಾ. ಪಿ ರವೀಂದ್ರನಾಥ್ ಅವರೇ ಈ ಕಥಾನಕದ ಕೇಂದ್ರಬಿಂದು. ಅವರು ನಿನ್ನೆ ಕಾಫೀ ಶಾಪ್ ಮಳಿಗೆಯಲ್ಲಿ (Au Bon Pain coffee shop) ಮೇಲಿನ ಮಹಡಿಯಲ್ಲಿ ನಿಂತು ಕೆಳಗಡೆಯಿದ್ದ ಯುವತಿಯರ ಫೋಟೋ ಹಾಗೂ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದರು.

ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಯನ್ನು ನಿನ್ನೆ ಇಡೀ ರಾತ್ರಿ ಸಾಮಾನ್ಯ ಆರೋಪಿಯಂತೆ ಅವರನ್ನು ಠಾಣೆಯ ಸೆಲ್ ನಲ್ಲಿ ಕೂಡಿಹಾಕಿದ್ದಾರೆ. ಆದರೆ ತಡವಾಗಿ ವಿಚಾರಣೆಯ ವೇಳೆ ತಾನು ಐಪಿಎಸ್ ಅಧಿಕಾರಿ ಎಂದು ಆರೋಪಿಯು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಹೈಲೆವೆಲ್ ಕಾಂಟ್ಯಾಕ್ಸ್ ಸಾಧಿಸಿ, ಉನ್ನತಾಧಿಕಾರಿಗಳು ತಮ್ಮ ನೆರವಿಗೆ ಬರುವಂತೆ ನೋಡಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಅವರನ್ನು ಠಾಣೆಯಿಂದ ಬಿಡಿಸಿಕೊಂಡು ಹೋಗಿದ್ದಾರೆ.
ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಆರೋಪಿ ರವೀಂದ್ರನಾಥ್ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಪೇದೆಯನ್ನು ಅಮಾನತುಗೊಳಿಸಬೇಕು ಎಂದು ಆ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಕೆಜೆ ಜಾರ್ಜ್ ಅವರು 'ಇದೊಂದು ಸೂಕ್ಷ್ಮ ಪ್ರಕರಣ. ಘಟನೆಯ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ' ಎಂದಿದ್ದಾರೆ.
ಆರೋಪಿ ರವೀಂದ್ರನಾಥ್ ಈ ಹಿಂದೆಯೂ ವಿವಾದಗಳನ್ನು ಸೃಷ್ಟಿಸಿದ್ದಾರೆ. 2008ರಲ್ಲಿ ಸಾಹೇಬರು ಡಿಐಜಿ ಆಗಿದ್ದಾಗ ಮೇಲಧಿಕಾರಿ (ADGP ಬಿಇ ಉಮಾಪತಿ) ರಜೆ ನಿಡಲಿಲ್ಲವೆಂದು ರಾಜೀನಾಮೆ ಪತ್ರ ಬರೆದಿಟ್ಟು ಮನೆಗೆ ತೆರಳಿದ್ದರು.












Click it and Unblock the Notifications