Heavy Rain: ಮಳೆ ಅಬ್ಬರಕ್ಕೆ ಕೊಚ್ಚಿಹೋದ ಬೆಂಗಳೂರು ಜನರ ಬದುಕು
ಗಾರ್ಡನ್ ಸಿಟಿ ಬೆಂಗಳೂರು ಭೀಕರ ಮಳೆಗೆ ಬೆಚ್ಚಿ ಬಿದ್ದಿದೆ. ಮಳೆ ಇಲ್ಲದೆ ತೀವ್ರ ಪರದಾಟ ಶುರುವಾಗಿದ್ದ ಸಮಯದಲ್ಲಿ ಮಳೆರಾಯ ಕರುಣೆ ತೋರಿಸಲಿಲ್ಲ, ಆದರೆ ಇದೀಗ ಚಳಿಗಾಲ ಹತ್ತಿರವಾಗುತ್ತಿರುವ ವೇಳೆ ಮಳೆ ಅಬ್ಬರ ಜೋರಾಗುತ್ತಿದೆ. ಈ ಮೂಲಕ ಮುಂಗಾರು ಮಳೆ ಕೈಕೊಟ್ಟರೂ, ಹಿಂಗಾರು ಮಳೆ ರಾಜ್ಯದ ಜನರ ಕೈಹಿಡಿದಿದೆ. ಹಾಗಾದರೆ ಬೆಂಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ ಇನ್ನೂ ಎಷ್ಟುದಿನ ತೊಂದರೆ ಕೊಡಲಿದೆ ಗೊತ್ತಾ?
ಅಷ್ಟಕ್ಕೂ ಸೋಮವಾರ ಸಂಜೆಯಿಂದ ಶುರುವಾದ ಮಳೆ ಆರ್ಭಟ, ಸಿಲಿಕಾನ್ ಸಿಟಿ ಎಂಬ ಬಿರುದು ಪಡೆದ ರಾಜಧಾನಿ ಬೆಂಗಳೂರನ್ನು ಅಕ್ಷರಶಃ ನಲುಗಿ ಹೋಗುವಂತೆ ಮಾಡಿದೆ. ಈ ಸಮಯದಲ್ಲೇ ವಾಹನ ಸವಾರರು ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳು ಮಳೆಯ ನೀರು ಪಾರ್ಕಿಂಗ್ ಏರಿಯಾಗೆ ನುಗ್ಗಿದ ಕಾರಣ ಪರದಾಡಿದ್ದಾರೆ.

ಬೆಂಗಳೂರು ನಗರದ ಶಾಂತಿನಗರ ಮತ್ತು ಕಲಾಸಿಪಾಳ್ಯ, ಸಿಟಿ ಮಾರ್ಕೇಟ್, ಜಯನಗರ & ವಿಜಯನಗರ, ರಾಜಾಜಿನಗರ, ವಿಲ್ಸನ್ ಗಾರ್ಡನ್, MG ರಸ್ತೆ, ವಿವೇಕ ನಗರ, ವರ್ತೂರು, ಕೋರಮಂಗಲ, ಎಚ್ಎಸ್ಆರ್ ಲೇಔಟ್, ಬೆಳ್ಳಂದೂರು, ಸರ್ಜಾಪುರ, ಮಾರತ್ ಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರದಲ್ಲಿ ಭಾರಿ ಮಳೆ ಬಿದ್ದಿದೆ. ಹಾಗಾದರೆ ಮಳೆ ಸೃಷ್ಟಿಸಿರುವ ಅವಾಂತರ ಹೇಗೆ ಇತ್ತು ಗೊತ್ತಾ?
ಅತಿಥಿಯಂತೆ ಬಂದ ಮಳೆರಾಯ!
ಇಡೀ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಇದೇ ರೀತಿ ಬೆಂಗಳೂರಿನಲ್ಲಿ ಕೂಡ ಮಳೆ ಬರೋದಿಲ್ಲ ಅಂತಾ ಬೆಂಗಳೂರಿಗರು ಅಂದುಕೊಂಡಿದ್ದರು. ಅದೇ ರೀತಿಯಾಗಿ ಕಳೆದ 4 ರಿಂದ 5 ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಕನ್ನಡಿಗರ ರಾಜಧಾನಿಯಾದ ಬೆಂಗಳೂರಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿತ್ತು. ಅದ್ರಲ್ಲೂ ಮುಂಗಾರು ಮಳೆ ಪೂರ್ತಿ ಕೈಕೊಟ್ಟು ಹೋಗಿತ್ತು. ಈ ಕಾರಣಕ್ಕೆ, ಬೋರ್ವೆಲ್ ನೀರು ನಂಬಿ ಬದುಕುತ್ತಿರುವ ನಮ್ಮ ಬೆಂಗಳೂರಿನ ಹೊರವಲಯದ ಜನರು ನೀರಿಗೂ ಪದಾಡುತ್ತಿದ್ದರು. ಆದರೆ ನಿನ್ನೆಯಿಂದಲೇ ಹಿಂಗಾರು ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಲ್ಲೂ ಬೆಂಗಳೂರಿನ ನಗರ ಭಾಗದಲ್ಲಿ ಅಕ್ಷರಶಃ ಜಲಪ್ರಳಯ ಉಂಟಾಗಿದೆ.
ಟ್ರಾಫಿಕ್ ಕಂಟಕದಲ್ಲಿ ನಲುಗಿದ ಸವಾರರು
ಇನ್ನು ಸೋಮವಾರ ಸಂಜೆಯೇ ಸುರಿಯಲು ಆರಂಭಸಿದ್ದ ಮಳೆ, ಭಾರಿ ಅವಾಂತರಗಳನ್ನ ಸೃಷ್ಟಿ ಮಾಡಿತ್ತು. ಧಾರಾಕಾರ ಮಳೆ ಕಾರಣ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗಿ, ವಾಹನಗಳ ಸವಾರರು ಪರದಾಡಿದ್ರು. ಈ ವೇಳೆ ಒಂದಷ್ಟು ಹೊತ್ತು ಗ್ಯಾಪ್ ತೆಗೆದುಕೊಂಡ ಮಳೆರಾಯ ಮತ್ತೆ ಸಂಜೆ 7 ರಿಂದ 8 ಗಂಟೆಯ ನಂತರ ಅಬ್ಬರಿಸಲು ಶುರು ಮಾಡಿದ. ಹೀಗೆ ಕಚೇರಿಯ ಕೆಲಸ ಮುಗಿಸಿ, ಜನ ಮನೆಗೆ ಹೋಗುವ ಸಮಯದಲ್ಲೇ ಮಳೆ ಅಬ್ಬರ ಶುರುವಾಗಿಬಿಟ್ಟಿತ್ತು. ಪರಿಣಾಮ ಬೆಂಗಳೂರಿನ ಜನರು ಮನೆಗೆ ತೆರಳಲು ಪರದಾಡಿದರು. ನಗರದ ಹಲವು ಅಂಡರ್ ಪಾಸ್ಗೆ ಮಳೆ ನೀರು ನುಗ್ಗಿ, ಊರಿಗೆ ಊರೇ ನೀರಿನಲ್ಲಿ ಈಜಾಡುವ ಸ್ಥಿತಿ ಬಂತು.

ರಾತ್ರಿ ಪೂರ್ತಿ ಗುಡುಗಿದ ಮಳೆರಾಯ
ಸಂಜೆ ಕಥೆ ಬಿಡಿ, ಕೆಲವರು ಎದ್ದೂ ಬಿದ್ದು ಮಳೆಯಲ್ಲಿ ಪರದಾಡಿ ಮನೆ ಸೇರಿದರು ಕೂಡ ಮಳೆ ಕಾಟ ನಿಲ್ಲಲೇ ಇಲ್ಲ. ಮಧ್ಯರಾತ್ರಿ ಮತ್ತೆ ಜೋರಾದ ಈ ಮಳೆ ಮನಸ್ಸಿಗೆ ಬಂದಂತೆ, ಎರ್ರಾಬಿರ್ರಿ ಸುರಿಯಿತು. ಅದ್ರಲ್ಲೂ ಮಡಿವಾಳ, ಬೊಮ್ಮನಹಳ್ಳಿ, ಎಚ್ಎಸ್ಆರ್ ಲೇಔಟ್ ಸೇರಿದಂತೆ ಬೆಂಗಳೂರು ಹೊರವಲಯ, ಮಾರತ್ ಹಳ್ಳಿ ಸುತ್ತಮುತ್ತ ಗುಡುಗು & ಮಿಂಚಿನ ಮಳೆ ಸುರಿದು ಜನರು ರಾತ್ರಿ ನಿದ್ದೆ ಮಾಡದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು
ಹಾಗೇ ಇನ್ನೊಂದು ಕಡೆ ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ಮಳೆ ನೀರು ನುಗ್ಗಿರುವ ಪರಿಣಾಮ ಜನ ಪರದಾಡಿದರು. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಈ ರೀತಿ ಮಳೆಯ ಆರ್ಭಟಕ್ಕೆ ಬಡವರು ಪರದಾಡಿದರು. ಮನೆಯ ಒಳಗೆ ನೀರು ಬಂದ ಕಾರಣ ರಾತ್ರಿಯಲ್ಲಿ ನಿದ್ದೆ ಮಾಡುವುದನ್ನು ಬಿಟ್ಟು, ನೀರು ಹೊರಗೆ ಹಾಕುವ ಕೆಲಸದಲ್ಲಿ ತಲ್ಲೀನರಾದರು. ಈ ಸಂದರ್ಭದಲ್ಲಿ, ನಡುರಾತ್ರಿ ದಿಢೀರ್ ಸುರಿದ ಭಾರಿ ಮಳೆಗೆ ಜನ ಶಾಪ ಹಾಕಿದ್ದಾರೆ.












Click it and Unblock the Notifications