ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಖಡಕ್ ಆರ್ಡರ್
ಬೆಂಗಳೂರು, ನವೆಂಬರ್ 15 : ರಾಜ್ಯದ ಎಲ್ಲ 906 ಪೊಲೀಸ್ ಠಾಣೆಗಳಿಗೂ ಖಡಕ್ ಆರ್ಡರ್ ರವಾನಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಅವರು ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಿದ್ದಾರೆ.
ನೀಲಮಣಿ ರಾಜು ಅವರ ಆದೇಶದ ಪ್ರಕಾರ ಪ್ರತಿಯೊಂದು ಎಸ್.ಐ ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣ ಹಾಗೂ ಆ ಘಟನೆಯ ಬಗ್ಗೆ ತಾವು ಕೈಗೊಂಡ ಕ್ರಮಗಳ ಬಗ್ಗೆ ಪ್ರತಿದಿನ ವರದಿ ಮಾಡಬೇಕಿದೆ.

ಸಣ್ಣ ಪ್ರಕರಣಗಳೆಂದು ಯಾವುದೇ ಪ್ರಕರಣಗಳನ್ನು ಅಲಕ್ಷಿಸದೆ ಆನ್ ಲೈನ್ ಮುಖಾಂತರ ಡಿಜಿಪಿ ನಿಯಂತ್ರಣ ಕೊಠಡಿಗೆ ದಿನ ನಿತ್ಯವೂ ವರದಿಯನ್ನು ಖಡ್ಡಾಯವಾಗಿ ನೀಡುವಂತೆ ಆದೇಶಿಸಲಾಗಿದ್ದು, ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಡಿ.ಜಿ.ಪಿ ನೀಲಮಣಿ ಹೇಳಿದ್ದಾರೆ.
ಈ ಹೊಸ ನಿಯಮಗಳ ಸುತ್ತೋಲೆಯನ್ನು ನವೆಂಬರ್ 6 ರಂದು ನೀಲಮಣಿ ರಾಜು ಹೊರಡಿಸಿದ್ದಾರೆ. ಅಪರಾಧ ಚಟುವಟಿಕೆಗಳು, ಕೈಗೊಂಡ ಕ್ರಮಗಳು, ಬಂಧಿತರ ವಿವರ ಹಾಗೂ ಬಂದೋಬಸ್ತ್ ಕಾರ್ಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಿರಬೇಕಾಗಿ ಅವರು ಸೂಚಿಸಿದ್ದಾರೆ.
ಈ ವರೆಗೆ ಎಸ್ಪಿ ಹಾಗೂ ಡಿಸಿಪಿಗಳಿಗೆ ಮಾತ್ರ ವರದಿ ಮಾಡುತ್ತಿದ್ದ ಇನ್ಸ್ ಪೆಕ್ಟರ್ ಗಳು ಹೊಸ ಸುತ್ತೋಲೆಯ ಪ್ರಕಾರ ಇನ್ನು ಮುಂದೆ ನೇರವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೇ ವರದಿ ನೀಡಬೇಕಿದೆ.












Click it and Unblock the Notifications