ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ದೇವೇಗೌಡ
ಬೆಂಗಳೂರು, ಆಗಸ್ಟ್ 12: ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆ ನೀಡಿರೆಂದು ಸಿಎಂ ಯಡಿಯೂರಪ್ಪ ಅವರು ಮನವಿ ಮಾಡಿದ ಬೆನ್ನಲ್ಲೆ ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ಇಂದು ಜೆಪಿ ನಗರದ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹ ಸಂತ್ರಸ್ತರ ನೆರವಿಗೆಂದು ಸ್ವಂತ ಖಾತೆಯಿಂದ ಎರಡು ಲಕ್ಷ ರೂಪಾಯಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿರುವುದಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ: ದೇವರಲ್ಲಿ ದೇವೇಗೌಡ ಪ್ರಾರ್ಥನೆ
'ನನಗೆ ಈಗ ಸಂಬಳ ಬರುತ್ತಿಲ್ಲ, ಯಾವ ಪಿಂಚಣಿಯೂ ಬರುತ್ತಿಲ್ಲ, ನನ್ನ ಖಾತೆಯಲ್ಲಿ ಸುಮಾರು 24 ಲಕ್ಷ ಹಣ ಇರಬಹುದು ಅದರಲ್ಲಿ ಎರಡು ಲಕ್ಷ ರೂಪಾಯಿಯನ್ನು ಪ್ರವಾಹ ಸಂತ್ರಸ್ತರ ನೆರವಿಗೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇನೆ ಎಂದು ದೇವೇಗೌಡ ಹೇಳಿದರು.
ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲದಿದ್ದರೂ ಪ್ರವಾಹದ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಕೆಲವೊಂದು ಕಡೆ ಮಳೆ ಸದ್ಯ ಕಡಿಮೆಯಾಗಿದೆ. ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟ ಭಾಗಗಳಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಇದರಿಂದ ಕರ್ನಾಟಕದ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಾವೇರಿ ಭಾಗದಲ್ಲೂ ಪ್ರವಾಹ ಆಗಿದೆ. ಹೀಗಾಗಿ ತುರ್ತಾಗಿ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡುವಂತೆ ಮೋದಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಬಿಎಸ್ವೈ 3 ತಿಂಗಳು ಅಧಿಕಾರದಲ್ಲಿದ್ರೂ ಓಕೆ, ನಮಗೆ ಬೇಡವಾದ ವಿಷಯ: ದೇವೇಗೌಡ
ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುವ ವಿಚಾರದಲ್ಲಿ ಜೆಡಿಎಸ್ನ ಯಾರೂ ಹಿಂದೆ ಬಿದ್ದಿಲ್ಲ ಎಂದ ದೇವೇಗೌಡ ಅವರು, ಪ್ರಜ್ವಲ್ ರೇವಣ್ಣ ಅವರು ತಮ್ಮ ಒಂದು ತಿಂಗಳ ಸಂಬಳ ನೆರೆ ಸಂತ್ರಸ್ತರಿಗೆ ನೀಡಿದ್ದಾರೆ. ಜೊತೆಗೆ ಅವರೇ ಪ್ರವಾಹ ಪೀಡಿತ ಸ್ಥಳಗಳಿಗೆ ಹೋಗಿ ಸಹಾಯದಲ್ಲಿ ತೊಡಗಿದ್ದಾರೆ ಎಂದರು.
'ಪ್ರವಾಹ ಪರಿಸ್ಥಿತಿಯಲ್ಲಿ ನಾವುಗಳ್ಯಾರು ರಾಜಕೀಯ ಮಾಡುವುದು ಬೇಡ. ಯಡಿಯೂರಪ್ಪ ಮೂರು ಸಾವಿರ ಕೋಟಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದಾರೆ. ನನ್ನ ಅನುಭವದ ಮೇಲೆ ನಾನು ಮಧ್ಯಂತರವಾಗಿ 5 ಸಾವಿರ ಕೋಟಿ ಕೊಡಲಿ ಎಂದು ಕೇಳಿದ್ದೇನೆ' ಎಂದರು.
ಯಡಿಯೂರಪ್ಪ ಸರಕಾರ ಅಸ್ಥಿರಗೊಳಿಸುವ ಬಗ್ಗೆ ದೇವೇಗೌಡ್ರ ಸ್ಪಷ್ಟನೆ
ಪ್ರವಾಹ ಪರಿಸ್ಥಿತಿ ಕೊಂಚ ಇಳಿದ ಮೇಲೆ ನಾನು ಪ್ರವಾಸ ಮಾಡುತ್ತೇನೆ. ಎಲ್ಲೆಲ್ಲಿ ಏನೇನು ಸಮಸ್ಯೆ ಆಗಿದೆ ಎಂದು ಖುದ್ದಾಗಿ ನಾನೇ ಭೇಟಿ ಮಾಡುತ್ತೇನೆ. ಎಷ್ಟು ರಸ್ತೆ ಹಾಳಾಗಿದೆ, ಎಷ್ಟು ಸೇತುವೆ, ಮನೆ ಹಾಳಾಗಿದೆ ಎಂದು ಖುದ್ದು ಪರಿಶೀಲನೆ ನಡೆಸುತ್ತೇನೆ. ಎಲ್ಲಾ ಭಾಗಗಳಲ್ಲೂ ನಾನು ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.