ಕೆಲಸ ವಾಪಸ್ ಕೇಳಲು ಬಂದು ಪ್ರತಿಮಾ ಕೊಲೆ ಮಾಡಿದ ಕಿರಣ್!
ಬೆಂಗಳೂರು, ನವೆಂಬರ್ 06: ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿ 37 ವರ್ಷದ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕ ಕಿರಣ್ ಬಂಧಿಸಲಾಗಿದೆ. ಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ಮುಂದುವರೆಸಿದ್ದು, ಶೀಘ್ರವೇ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ.
ಭಾನುವಾರ ಬೆಳಗ್ಗೆ ಗಣಿ ಭೂ ವಿಜ್ಞಾನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಪ್ರತಿಮಾ ಕೊಲೆಯಾದ ವಿಚಾರ ಬೆಳಕಿಗೆ ಬಂದಿತ್ತು. ಸೋಮವಾರ ತೀರ್ಥಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ, ಇತ್ತ ಬೆಂಗಳೂರು ಪೊಲೀಸರು ಆರೋಪಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕೆಲಸ ವಾಪಸ್ ಕೇಳಲು ಬಂದಿದ್ದ; ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕ ಕಿರಣ್ ಬಂಧಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಗಣಿ ಭೂ ವಿಜ್ಞಾನ ಇಲಾಖೆಯಲ್ಲಿ ಕಾರು ಚಾಲಕನಾಗಿ ಕಿರಣ್ ಕೆಲಸ ಮಾಡುತ್ತಿದ್ದ. ಆದರೆ ಕೆಲವು ದಿನಗಳ ಹಿಂದೆ ಕಿರಣ್ರನ್ನು ಪ್ರತಿಮಾ ಕೆಲಸದಿಂದ ತೆಗೆದುಹಾಕಿದ್ದರು.
ಕೆಲಸ ಕಳೆದುಕೊಂಡ ಮೇಲೆ ಕಿರಣ್ ಸಾಂಸಾರಿಕ ಬದುಕು ಹಾಳಾಗಿತ್ತು. ಪತ್ನಿ ಕಿರಣ್ ಬಿಟ್ಟು ತವರು ಮನೆ ಸೇರಿದ್ದರು. ಆದ್ದರಿಂದ ಶನಿವಾರ ಪ್ರತಿಮಾ ಭೇಟಿಯಾಗಿ ಕೆಲಸ ವಾಪಸ್ ನೀಡಿ, ನೀವು ಹೇಳಿದಂತೆ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಕೇಳಲು ಕಿರಣ್ ಅವರ ಮನೆಯ ಬಳಿ ಬಂದಿದ್ದ.
ಕಿರಣ್ರನ್ನು ಮನೆಯ ಬಳಿ ನೋಡಿ ಪ್ರತಿಮಾ ಕೋಪಗೊಂಡಿದ್ದರು. ಹೀಗೆಲ್ಲ ಮನೆಯ ಹತ್ತಿರ ಬರಬೇಡ ಎಂದು ಗಲಾಟೆ ಮಾಡಿದ್ದರು. ಆದರೆ ಕಿರಣ್ ಕೆಲಸ ವಾಪಸ್ ನೀಡಬೇಕು ಎಂದು ಗೋಳಾಡಿದ್ದ. ಪ್ರತಿಮಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಪ್ರತಿಮಾ ಮೇಲೆ ಸಿಟ್ಟಾದ ಕಿರಣ್ ಅವರ ಚೂಡಿದಾರ್ ವೇಲ್ನಿಂದ ಮೊದಲು ಕುತ್ತಿಗೆ ಬಿಗಿದು ಮನೆಯ ಒಳಗೆ ಎಳೆದುಕೊಂಡು ಹೋಗಿದ್ದ. ಆಗಲೇ ಪ್ರತಿಮಾಗೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದ್ದರು. ಬಳಿಕ ರೂಂ ಒಳಗೆ ತಳ್ಳಿ ಕಿಚನ್ನಲ್ಲಿ ಸಿಕ್ಕ ಚಾಕುವಿನಿಂದ ಅವರ ಕತ್ತು ಸೀಳಿದ್ದ.
ಕೊಲೆ ಮಾಡಿದ ಬಳಿಕ ಗಾಬರಿಯಾದ ಕಿರಣ್, ಪ್ರತಿಮಾ ಮನೆಯಲ್ಲಿ ಸಿಕ್ಕ 15 ಸಾವಿರ ರೂ. ಹಣವನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದ. ಸ್ನೇಹಿತರಿಗೆ ಕರೆ ಮಾಡಿ ಚಾಮರಾಜನಗರದ ಮಲೆ ಮಹದೇಶ್ವರಬೆಟ್ಟಕ್ಕೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದ.
ಪೊಲೀಸ್ ವಶದಲ್ಲಿರುವ ಕಿರಣ್ ಎರಡು ಮೊಬೈಲ್ ಬಳಕೆ ಮಾಡುತ್ತಿದ್ದ. ಪ್ರತಿಮಾ ಮನೆಗೆ ಬರುವಾಗಲೇ ಒಂದು ಮೊಬೈಲ್ ಸ್ವಿಚ್ ಆಫ್ ಮಾಡಿ ಮನೆಯಲ್ಲಿ ಇಟ್ಟು ಬಂದಿದ್ದ. 2ನೇ ಮೊಬೈಲ್ ಅನ್ನು ಕೊಲೆ ಮಾಡಿದ ಕೆಲವು ನಿಮಿಷಗಳ ನಂತರ ಆಫ್ ಮಾಡಿದ್ದ.
ಕಿರಣ್ ದೂರವಾಣಿ ಕರೆ ಜಾಡು ಹಿಡಿದಿದ್ದ ಬೆಂಗಳೂರು ಪೊಲೀಸರು ಚಾಮರಾಜನಗರ ಪೊಲೀಸರಿಗೆ ಕಿರಣ್ ಬಗ್ಗೆ ಮಾಹಿತಿ ನೀಡಿದ್ದರು. ಆತ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೊಬೈಲ್ ಮತ್ತೆ ಆನ್ ಮಾಡಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕಿರಣ್ ಸ್ನೇಹಿತರಿಗೆ ತಾನು ಕೊಲೆ ಮಾಡಿ ಬಂದಿರುವುದಾಗಿ ಹೇಳಿಕೊಂಡಿರಲಿಲ್ಲ. ಟಿವಿಯಲ್ಲಿ ಪ್ರತಿಮಾ ಹತ್ಯೆ ಸುದ್ದಿಯನ್ನು ನೋಡಿ ನನಗೂ ಈಗಲೇ ಗೊತ್ತಾಗುತ್ತಿರುವುದು ಎಂದು ಸ್ನೇಹಿತರ ಮುಂದೆ ಹೇಳಿದ್ದ. ಪೊಲೀಸರು ಕಿರಣ್ ವಿಚಾರಣೆ ತೀವ್ರಗೊಳಿಸಿದ್ದು, ಹತ್ಯೆಯಲ್ಲಿ ಇನ್ನು ಯಾರಾದರೂ ಆರೋಪಿಗಳ ಕೈವಾಡವಿದೆಯೇ? ಎಂದು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಆರೋಪಿ ಬಂಧನದ ಕುರಿತು, ಕೊಲೆಯ ಕಾರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಪೊಲೀಸರು ಮಾಹಿತಿ ನೀಡಲಿದ್ದಾರೆ.
ಕೆಲಸದಿಂದ ತೆಗೆದಿದ್ದು ಮಾತ್ರವೇ ಪ್ರತಿಮಾ ಹತ್ಯೆಗೆ ಕಾರಣವೇ? ಅಥವ ಬೇರೆ ಕಾರಣದಿಂದ ಹತ್ಯೆ ನಡೆದಿದೆಯೇ? ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಿರಣ್ನನ್ನು ನ್ಯಾಯಾಲಯದ ಮುಂದೆ ಸಂಜೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆಯು ಸಾಧ್ಯತೆ ಇದೆ.












Click it and Unblock the Notifications