ಕಿರುಕುಳ ತಾಳಲಾರದೆ ಬೆಂಗಳೂರಿನ ಕಾಫಿ ಡೇ ಉದ್ಯೋಗಿ ಆತ್ಮಹತ್ಯೆ
ಬೆಂಗಳೂರು, ಜುಲೈ 25: ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಕಾಫಿ ಡೇ ಉದ್ಯೋಗಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಾರಾಯಣಪುರದಲ್ಲಿ ಇಂದು(ಜುಲೈ 25) ನಡೆದಿದೆ.
ಟೆಕ್ಕಿಗಳ ತುಮುಲಗಳನ್ನು ಬೆತ್ತಲೆ ಮಾಡಿದ ದುರಂತ ಸಾವು
ಮೂಲತಃ ಚಿಕ್ಕಮಂಗಳೂರಿನವರಾದ ಪ್ರಮೋದ್(35), ಬೆಂಗಳೂರಿನ ನಾರಾಯಣಪುರದಲ್ಲಿ ವಾಸಿಸುತ್ತಿದ್ದರು. ಇವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಲ್ಲಿನ ಮಹದೇವಪುರದಲ್ಲಿರುವ ಫಿನಿಕ್ಸ್ ಮಾಲ್ ನಲ್ಲಿ ಕಳೆದ 11 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪ್ರಮೋದ್ ಗೆ ಕಳೆದ ಹಲವು ವರ್ಷಗಳಿಂದ ಬಡ್ತಿ ನೀಡುತ್ತೇವೆಂದು ಹೇಳಿ ಕಾಫಿ ಡೇ ಆಡಳಿತ ಮಂಡಳಿ ವಂಚಿಸಿತ್ತು.
ಬಡ್ತಿಯ ಕಾರಣವೊಡ್ಡಿ ಮಂಗಳೂರಿಗೂ ಇವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಅಲ್ಲೂ ಯಾವುದೇ ಬಡ್ತಿ ನೀಡಲಾಗಿರಲಿಲ್ಲ. ನಂತರ ಮತ್ತೆ ಅವರನ್ನು ಬೆಂಗಳುರಿಗೆ ವರ್ಗಾವಣೆ ಮಾಡಲಾಗಿತ್ತು. ಆಡಳಿತ ಮಂಡಳಿಯ ಈ ಕಣ್ಣಾಮುಚ್ಚಾಲೆ ಆಟದಿಂದ ಮನನೊಂದ ಪ್ರಮೋದ್ ಒತ್ತಡ, ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಪ್ರಮೋದ್ ಪತ್ನಿ, ಮಗ ಮತ್ತು ಕುಟುಂಬ ವರ್ಗವನ್ನು ಅಗಲಿದ್ದು, ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಕಾರಣ ಏನು ಎಂಬುದನ್ನು ಬರೆದಿಟ್ಟಿದ್ದಾರೆ. ಪತ್ನಿ ಮತ್ತು ಮಗನ ಜೀವನೋಪಾಯಕ್ಕೆ ನೆರವು ನೀಡುವಂತೆಯೂ ಪತ್ರದಲ್ಲಿ ಕೋರಿದ್ದಾರೆ. ಹಾಗೆಯೇ ತಮ್ಮ ಅಂಗಾಂಗವನ್ನು ದಾನ ಮಾಡುವಂತೆಯೂ ಬರೆದಿಟ್ಟು ಆತ್ಮಹತ್ಯೆಯಲ್ಲೂ ಉದಾರತೆ ಮೆರೆದಿದ್ದಾರೆ.