ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಯಾರಿಂದ? ಓವರ್ ಟು ದೇವೇಗೌಡ್ರು
ಬೆಂಗಳೂರು, ಆ 19: ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬಂದಿದೆ ಎನ್ನುವ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರ ಹೇಳಿಕೆ ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ.
ಪರೋಕ್ಷವಾಗಿ ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸದೇ, " ದೇಶದಲ್ಲಿ ಏಕಚಕ್ರಾಧಿಪತಿ ವ್ಯವಸ್ಥೆ ಜಾರಿಗೆ ಬರುತ್ತಿದೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ" ಎಂದು ದೇವೇಗೌಡ್ರು, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರು.
"ಮೋದಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದರೆ, ಎರಡನೇ ಅವಧಿಗೆ ಅಭೂತಪೂರ್ವ ಮ್ಯಾನ್ ಡೇಟ್ ನಿಂದ ಹೇಗೆ ಮತ್ತೆ ಪ್ರಧಾನಿಯಾಗುತ್ತಿದ್ದರು?". "ಆರ್ಟಿಕಲ್ 370 ರದ್ದು ಮಾಡುವ ಕಠಿಣ ನಿರ್ಧಾರವನ್ನು ಬೇರೆ ಯಾವುದಾದರೂ ಸರಕಾರ ತೆಗೆದುಕೊಳ್ಳುತ್ತಿತ್ತೇ?" ಎನ್ನುವ ಮರುಪ್ರಶ್ನೆಗಳನ್ನು ಹಾಕಲಾಗುತ್ತಿದೆ.

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ದೇವೇಗೌಡ್ರು, ತಾವ್ಯಾಕೆ ಕಾಂಗ್ರೆಸ್ ಜೊತೆ ಸೇರಿಕೊಂಡು ಮೈತ್ರಿ ಸರಕಾರ ರಚಿಸಿತು ಎನ್ನುವುದರ ಬಗ್ಗೆ ಪುನರುಚ್ಚಿಸಿದ್ದಾರೆ.
"ನಾವೇನು ಕಾಂಗ್ರೆಸ್ ಮನೆಬಾಗಿಲಿಗೆ ಹೋಗಲಿಲ್ಲ. ಖರ್ಗೆಯವರನ್ನು ಸಿಎಂ ಮಾಡಿ ಎಂದು ಹೇಳಿದ್ದೆ. ಅಶೋಕ್ ಗೆಹ್ಲೋಟ್ ಕುಮಾರಸ್ವಾಮಿಯೇ ಸಿಎಂ ಆಗಬೇಕು ಎಂದು ಹಠ ಹಿಡಿದರು" ಎಂದು ಗೌಡ್ರು ಹೇಳಿದರು.
" ಜೆಡಿಎಸ್ ತೊರೆದು ಹೋಗಿರುವ ಗೋಪಾಲಯ್ಯನನ್ನು ಹೇಗಾದರೂ ಮಾಡಿ ಸೋಲಿಸಬೇಕಿದೆ. ಹಿಂದೆ, ಪೊಲೀಸರು ಅವರ ಮನೆಬಾಗಿಲಿನಲ್ಲಿ ನಿಂತಾಗ ಆಗಿದ್ದು ಏನು ಎನ್ನುವುದನ್ನು ನಾನು ವಿವರಿಸಲಾರೆ" ಎಂದು ದೇವೇಗೌಡ್ರು, ಗೋಪಾಲಯ್ಯ ವಿರುದ್ದ ವಾಗ್ದಾಳಿ ನಡೆಸಿದರು.












Click it and Unblock the Notifications