ದೀಪಾವಳಿ ಪಟಾಕಿ; ಬೆಂಗಳೂರಲ್ಲಿ ಮಾಲಿನ್ಯ ಶೇ 18ರಷ್ಟು ಹೆಚ್ಚಳ
ಬೆಂಗಳೂರು, ಅಕ್ಟೋಬರ್ 31 : ಉದ್ಯಾನ ನಗರಿ ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮ ಮುಗಿದಿದೆ. ಒಂದು ಕಡೆ ರಾಶಿ-ರಾಶಿ ಕಸ ಸಂಗ್ರವಾಗಿತ್ತು. ಮತ್ತೊಂದು ಕಡೆ ಪಟಾಕಿ ಸಿಡಿಸಿದ್ದರಿಂದ ಶೇ 18ರಷ್ಟು ಮಾಲಿನ್ಯ ಹೆಚ್ಚಾಗಿದೆ. ಪಟಾಕಿ ಸಿಡಿಸುವಾಗ ಗಾಯಗೊಂಡವರ ಸಂಖ್ಯೆ 124.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ನಗರದ ಏಳು ಕಡೆ ವಾಯಮಾಲಿನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದೆ. 2018ರ ದೀಪಾವಳಿ ಸಂದರ್ಭಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮಾಲಿನ್ಯದ ಪ್ರಮಾಣ ಶೇ26ರಷ್ಟು ಕಡಿಮೆಯಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಮಾಡಿದ್ದ ಏಳು ವಾಯು ಗುಣಮಟ್ಟ ತಪಾಸಣಾ ಕೇಂದ್ರದಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದಾಗ ಮಿತಿ ಮೀರಿದ ಮಾಲಿನ್ಯ ದಾಖಲಾಗಿದೆ. ಕೇಂದ್ರದಲ್ಲಿ ಅಕ್ಟೋಬರ್ 27 ರಿಂದ 29ರ ತನಕ ವಾಯು ಗುಣಮಟ್ಟ ತಪಾಸಣೆ ಮಾಡಲಾಗಿದೆ.
ಪಟಾಕಿ ಸಿಡಿಸುವಾಗ ಜಾತ್ರೆಯಿಂದ ಇರಬೇಕು ಎಂದು ಹಲವಾರು ಸಂಘ ಸಂಸ್ಥೆಗಳು ಅರಿವು ಮೂಡಿಸಿದ್ದವು. ಆದರೆ, ಪಟಾಕಿ ಸಿಡಿಸುವಾಗ ಗಾಯಗೊಂಡಿರುವವರ ಸಂಖ್ಯೆ 124. ಗಾಯಗೊಂಡವರ ಪೈಕಿ ಇಬ್ಬರು ಒಂದು ಕಣ್ಣು ಕಳೆದುಕೊಂಡಿದ್ದಾರೆ. ಇನ್ನೊಬ್ಬರ ಎರಡೂ ಕಣ್ಣುಗಳಿಗೆ ಗಂಭೀರ ಗಾಯವಾಗಿದೆ.

ಎಲ್ಲಿ, ಎಷ್ಟು ಮಾಲಿನ್ಯ ದಾಖಲು
ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಮಾಡಿದ್ದ ಕೇಂದ್ರಗಳಲ್ಲಿ ಮಾಲಿನ್ಯದ ಪ್ರಮಾಣ ದಾಖಲಾಗಿದೆ. ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ 111, ಎಸ್. ಜಿ. ಹಳ್ಳಿಯಲ್ಲಿ 85, ಪಶುವೈದ್ಯ ಕಾಲೇಜು ಹೆಬ್ಬಾಳದಲ್ಲಿ 71, ಜಯನಗರ 5ನೇ ಹಂತದಲ್ಲಿ 90, ಕವಿಕಾ ಮೈಸೂರು ರಸ್ತೆಯಲ್ಲಿ 76, ನಿಮ್ಹಾನ್ಸ್ನಲ್ಲಿ 69, ಸೆಂಟ್ರಲ್ ಸಿಲ್ಕ್ ಬೋರ್ಡ್ನಲ್ಲಿ 67 ದಾಖಲಾಗಿದೆ. (ಅಕ್ಟೋಬರ್ 27 ರಿಂದ 29).

ಆರೋಗ್ಯದ ಮೇಲೆ ಪರಿಣಾಮ
ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 0-50 ಇದ್ದರೆ ಆರೋಗ್ಯದ ಮೇಲೆ ಅಲ್ಪ ಪರಿಣಾಮ ಉಂಟಾಗುತ್ತದೆ. 50-100 ಇದ್ದರೆ ಉಸಿರಾಟದ ಸಮಸ್ಯೆ ಉಂಟಾಗಲಿದೆ. 101-200 ಇದ್ದರೆ ಶ್ವಾಸಕೋಶ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ, ಮಕ್ಕಳಿಗೆ ಉಸಿರಾಡಲು ಕಷ್ಟವಾಗಲಿದೆ.

ಮಾಲಿನ್ಯ ದಾಖಲು ಹೇಗೆ?
ಹೆಚ್ಚು ಸಾಂದ್ರತೆಯಿಂದ ಕೂಡಿರುವ ದೂಳಿನ ಕಣಗಳು ಪಿಎಂ -10, ಪಿಎಂ 2.5, ಇಂಗಾಲ ಮೊದಲಾದವುಗಳ ಪ್ರಮಾಣವನ್ನು ಒಟ್ಟುಗೂಡಿಸಿ ಗಾಳಿಯ ಗುಣಮಟ್ಟವನ್ನು ಅಳೆದು ಎಕ್ಯೂಎ ಲೆಕ್ಕಹಾಕಲಾಗುತ್ತದೆ. ಈ ಬಾರಿ ದೀಪಾವಳಿ ಸಮಯದಲ್ಲಿ ಮಳೆ ಇದ್ದ ಕಾರಣ ಮಾಲಿನ್ಯದ ಪ್ರಮಾಣ ತಗ್ಗಿದೆ. ಜನರಲ್ಲಿ ಪರಿಸರದ ಬಗ್ಗೆ ಕಾಳಜಿಯೂ ಹೆಚ್ಚುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಗಾಯಾಳುಗಳ ಸಂಖ್ಯೆ 124
ಪಟಾಕಿ ಸಿಡಿತದಿಂದ ನಗರದಲ್ಲಿ ಗಾಯಗೊಂಡವರ ಸಂಖ್ಯೆ 124. ಮಿಂಟೋ ಆಸ್ಪತ್ರೆಯಲ್ಲಿ 36, ನಾರಾಯಣ ನೇತ್ರಾಯದಲ್ಲಿ 42 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಪವನ್ (22), ವೆಂಕಟೇಶ್ (6) ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಗಜೇಂದ್ರಮೂರ್ತಿ (13) ಎರಡೂ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.












Click it and Unblock the Notifications