ನಾಗರಿಕರ ಟ್ವೀಟ್ಗೆ ಸ್ಪಂದಿಸಿದ ಡಿಸಿಎಂ: ಟ್ವೀಟ್ನಲ್ಲೇನಿತ್ತು?
ಬೆಂಗಳೂರು, ಜು.11: ನಾಗರಿಕರು ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಜಿ. ಪರಮೇಶ್ವರ್, ಸಿದ್ದಾಪುರ ಪೊಲೀಸ್ ಠಾಣೆ ಸಮೀಪದ ಫುಟ್ಪಾತ್ ಆಕ್ರಮಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿದ್ದಾರೆ.
ಕೋಮುವಾದಿ ಶಕ್ತಿ ನಿರ್ಮೂಲನೆಗೆ ಕಾಂಗ್ರೆಸ್ ಪ್ರತಿಷ್ಠಾಪನೆ: ಪರಮೇಶ್ವರ್
ಈ ಭಾಗದ ಫುಟ್ಪಾತ್ನಲ್ಲಿ ಅಂಗಡಿ ಮುಂಗಟ್ಟು ಇಟ್ಟುಕೊಂಡು ಸಾರ್ವಜನಿಕರು ನಡೆದಾಡಲೂ ಕಷ್ಟದ ಸ್ಥಿತಿ ನಿರ್ಮಾಣ ಮಾಡಲಾಗಿತ್ತು. ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಕೂಡಲೇ ಫುಟ್ಪಾತ್ ಮೇಲಿನ ಅಂಗಡಿ ಮುಂಗಟ್ಟು ತೆರವುಗೊಳಿಸಲು ಸೂಚಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಬಿಬಿಎಂಪಿ ಅಧಿಕಾರಿಗಳು ಫುಟ್ಪಾತ್ ಮೇಲೆ ಇಟ್ಟಿದ್ದ ಅಂಗಡಿಗಳನ್ನು ತೆಗೆಸಿದ್ದಾರೆ.
ಇಷ್ಟು ದಿನದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಂತಾಗಿದೆ. ಸಾರ್ವಜನಿಕರೊಬ್ಬರು ಸಿದ್ದಾಪುರ ಪೊಲೀಸ್ ಠಾಣೆ ಬಳಿ ಇರುವ ಫುಟ್ಪಾತ್ ಆಕ್ರಮಿಸಿಕೊಂಡಿರುವ ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಜಿ. ಪರಮೇಶ್ವರ್ ಹಾಗೂ ಬಿಬಿಎಂಪಿಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪರಮೇಶ್ವರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚಿಸಿದ್ದರು. ಅಷ್ಟೇ ಅಲ್ಲ, ಎಲ್ಲೆಲ್ಲಿ ಫುಟ್ಪಾತ್ ಆವರಿಸಿಕೊಂಡಿದ್ದಾರೋ ಎಲ್ಲೆಡೆ ತೆರವುಗೊಳಿಸುವಂತೆಯೂ ಪರಮೇಶ್ವರ್ ಅವರು ಸೂಚಿಸಿದ್ದಾರೆ. ಸಿದ್ದಾಪುರ ಫುಟ್ಪಾತ್ ನನ್ನು ಜನರ ಓಡಾಟಕ್ಕೆ ಮುಕ್ತ ಮಾಡಿಕೊಟ್ಟಿದ್ದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.