ಬಿಜೆಪಿಗೆ ವೋಟ್, ಆದರೆ ಸಮಸ್ಯೆಗೆ ನಮ್ಮ ಬಳಿ?: ಪರಮೇಶ್ವರ್ ಸಿಡಿಮಿಡಿ
Recommended Video
ಬೆಂಗಳೂರು, ಜೂನ್ 28: 'ಮತ ಹಾಕೋದು ಮೋದಿಗೆ, ಆದರೆ ಸಮಸ್ಯೆ ಬಗೆಹರಿಸಲು ನಮ್ಮ ಬಳಿ ಬರುತ್ತೀರಾ'- ಎಂಬ ಅರ್ಥದಲ್ಲಿ ಬುಧವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡೋದು ನಾವು, ಆದರೆ ನೀವು ಬಿಜೆಪಿಗೆ ಲೀಡ್ ಕೊಟ್ಟಿದ್ದೀರಿ ಎಂದು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯ ಜನರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈಗ ಮೂರನೇ ದಿನವಾದ ಶುಕ್ರವಾರ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ.
ಬೆಂಗಳೂರಿನ ಆರ್ಟಿ ನಗರದಲ್ಲಿ ರಸ್ತೆ ಕಾಮಗಾರಿ ವೀಕ್ಷಣೆಗೆ ತೆರಳಿದ ಪರಮೇಶ್ವರ್ ಅವರ ಮುಂದೆ ಸಾರ್ವಜನಿಕರು ದೂರುಗಳ ಸುರಿಮಳೆಗರೆದರು. ರಸ್ತೆ, ಚರಂಡಿ, ಸಾರಿಗೆ, ನೀರು ಮುಂತಾದ ಅವ್ಯವಸ್ಥೆಗಳ ಕುರಿತು ಅಹವಾಲು ಸಲ್ಲಿಸಿದರು.
ಏನ್ ಕೆಲ್ಸ ಮಾಡಿದ್ದಾರೆ ಅಂತ ಬಿಜೆಪಿಗೆ ವೋಟ್ ಹಾಕ್ತೀರಾ? ಸಿದ್ದರಾಮಯ್ಯ
ಲೋಕಸಭೆ ಚುನಾವಣೆ ಇದ್ದಿದ್ದರಿಂದ ರಸ್ತೆ ಕಾಮಗಾರಿ ವೀಕ್ಷಣೆ ನಡೆಸಲು ಆಗಿರಲಿಲ್ಲ ಎಂದು ಪರಮೇಶ್ವರ್ ಈ ವೇಳೆ ತಿಳಿಸಿದರು.
ತಮ್ಮ ಬಳಿ ದೂರು ಸಲ್ಲಿಸಿದ ಸಾರ್ವಜನಿಕರನ್ನು ಕುರಿತು, ಬಿಜೆಪಿಗೆ ವೋಟ್ ಹಾಕಿದವರು ಜಾಸ್ತಿ ಜನರು ಇದ್ದೀರಿ. ಕಾಂಗ್ರೆಸ್ಗೆ ವೋಟ್ ಹಾಕಿದವರು ಎಷ್ಟು ಮಂದಿ ಇದ್ದೀರೋ ಗೊತ್ತಿಲ್ಲ. ಆದರೂ ಪರವಾಗಿಲ್ಲ. ಎಲ್ಲರ ಸಮಸ್ಯೆಯನ್ನೂ ಆಲಿಸುತ್ತೇನೆ ಎಂದು ಪರಮೇಶ್ವರ್ ಹೇಳಿದರು.
ಮತ್ತೆ ಝೀರೋ ಟ್ರಾಫಿಕ್ ಸಮಸ್ಯೆ
ಡಿಸಿಎಂ ಪರಮೇಶ್ವರ್ ಅವರು ರಸ್ತೆ ಕಾಮಗಾರಿ ವೀಕ್ಷಣೆಗೆ ತೆರಳುವಾಗಲೂ ಝೀರೋ ಟ್ರಾಫಿಕ್ನಲ್ಲಿ ಹೋಗಿದ್ದರು. ಬೆಳಿಗ್ಗೆಯೇ ಅವರು ಕಾಮಗಾರಿ ವೀಕ್ಷಣೆಗೆ ಹೊರಟಿದ್ದರು. ಅದು ಜನರು ಕಚೇರಿಗೆ, ಶಾಲಾ, ಕಾಲೇಜುಗಳಿಗೆ ಹೋಗುವ ಸಮಯವಾಗಿದ್ದರಿಂದ ಝೀರೋ ಟ್ರಾಫಿಕ್ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಆರ್ಟಿನಗರದ ಸುತ್ತಮುತ್ತ ಅನೇಕ ಕಡೆ ವಿಪರೀತ ಟ್ರಾಫಿಕ್ ಜಾಮ್ ಉಂಟಾಯಿತು. ತಡವಾಗುತ್ತಿದ್ದರಿಂದ ಟ್ರಾಫಿಕ್ ದಟ್ಟಣೆಯಿಂದ ಮುಕ್ತಿ ಸಿಗುವವರೆಗೂ ಹೆಣಗಾಡುವಂತಾಯಿತು.
ಕ್ಷಮೆಯಾಚಿಸಿದ ಪರಮೇಶ್ವರ್
ಪರಮೇಶ್ವರ್ ಅವರ ಝೀರೋ ಟ್ರಾಫಿಕ್ನಿಂದಾಗಿ ಶಾಲಾ ಬಸ್ಗಳು ವಾಹನದಟ್ಟಣೆಯಲ್ಲಿ ಸಿಕ್ಕಿಕೊಂಡವು. ಇದರಿಂದಾಗಿ ಅನೇಕ ಶಾಲೆಗಳ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ತಡವಾಯಿತು. ಈ ಬಗ್ಗೆ ಪರಮೇಶ್ವರ್ ಬಳಿಕ ಕ್ಷಮೆಯಾಚಿಸಿದರು. ನನ್ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಮ್ಮಿಂದ ಯಾರಿಗೂ ಬೇಸರ ಆಗಬಾರದು. ಮತ್ತೊಮ್ಮೆ ಈ ರೀತಿ ಆಗೊಲ್ಲ ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಪರಮೇಶ್ವರ ಝೀರೋ ಟ್ರಾಫಿಕ್ ದರ್ಬಾರಿಗೆ ಜನ ಹೈರಾಣ
ಮತದಾರರಿಗೆ ಅಗೌರವ
ಸರ್ಕಾರದ ನಾಯಕರು ನೀಡಿದ ಹೇಳಿಕೆ ಕುರಿತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ್, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಮತದಾರರನ್ನು ಅಗೌರವಿಸುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿಯೂ ಜನರು ಇವರ ಪರವಾಗಿ ತೀರ್ಪು ನೀಡಿಲ್ಲ. ಬಿಜೆಪಿಗೆ 105 ಸೀಟುಗಳನ್ನು ನೀಡಿದ್ದಾರೆ. ತಾಂತ್ರಿಕವಾಗಿ ಈ ಎರಡೂ ಪಕ್ಷಗಳು ಒಂದಾಗಿ ಸರ್ಕಾರ ನಡೆಸುತ್ತಿವೆಯಷ್ಟೇ. ಹಿರಿಯ ರಾಜಕಾರಣಿಗಳಾಗಿ ಇವರಿಗೆ ಜನತೆಯ ತೀರ್ಪನ್ನು ಗೌರವಿಸುವ ಮನಸ್ಥಿತಿ ಇಲ್ಲದೆ ಇರುವುದು ದುರ್ದೈವ. ಚುನಾವಣೆಯ ಬಳಿಕ ಇದು ಚರ್ಚೆಯ ವಿಷಯವೇ ಅಲ್ಲ. ಹಾಗೆ ಬಿಜೆಪಿಗೆ ಮತಹಾಕಿದ್ದೀರಿ ಎನ್ನುವ ಅವರೇ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ನಮಗೆ ಮತ ಹಾಕಿದ್ದಾರೆಂದು ಹೇಳಿಕೊಂಡಿದ್ದರಲ್ಲ? ಎಂದು ಪ್ರಶ್ನಿಸಿದರು.
ಇದು ಗ್ರಾಮ ವಾಸ್ತವ್ಯ ಮಾಡುವ ಸಮಯವಲ್ಲ: ಯಡಿಯೂರಪ್ಪ
ಸಿಡಿಮಿಡಿಗೊಂಡಿದ್ದ ಸಿಎಂ
ಬಿಜೆಪಿಗೆ ವೋಟ್ ಹಾಕುತ್ತೀರಿ, ಆದರೆ ಸಮಸ್ಯೆ ಪರಿಹಾರಕ್ಕೆ ನಾವು ಬೇಕು ಎಂದು ರಾಜ್ಯದ ಪ್ರಮುಖ ನಾಯಕರು ಹೇಳಿಕೆ ನೀಡುತ್ತಿರುವುದು ಇದು ಸತತ ಮೂರನೇ ಬಾರಿ. ಬುಧವಾರ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೆಗುಡ್ಡಕ್ಕೆ ಗ್ರಾಮವಾಸ್ತವ್ಯಕ್ಕಾಗಿ ತೆರಳುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿದ್ದ ವಾಹನವನ್ನು ಅಡ್ಡಗಟ್ಟಿದ್ದ ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಆಗ ಕುಮಾರಸ್ವಾಮಿ ಅವರು 'ಮೋದಿಗೆ ವೋಟ್ ಹಾಕ್ತೀರಿ, ಸಮಸ್ಯೆಗೆ ಪರಿಹಾರ ಕೇಳೋಕೆ ನನ್ನ ಬಳಿ ಬರ್ತೀರಾ?' ಎಂದು ರೇಗಿದ್ದರು.
ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ
ಅಭಿವೃದ್ಧಿಗೆ ನಾವು, ವೋಟ್ ಅವರಿಗಾ?
ಗುರುವಾರ ಬಾದಾಮಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಎಲ್ಲ ಭಾಗ್ಯಗಳನ್ನು, ಯೋಜನೆಗಳನ್ನು ನಾವು ಕೊಟ್ಟಿದ್ದೇವೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 9 ಸಾವಿರ ಲೀಡ್ ಕೊಟ್ಟಿದ್ದೀರಿ. ಅಭಿವೃದ್ಧಿ ಕೆಲಸ ಮಾಡಿದವರಿಗೆ ವೋಟ್ ಹಾಕುವುದಿಲ್ಲ. ಅವರೇನು ಕೆಲಸ ಮಾಡಿದ್ದಾರೆಂದು ಅವರಿಗೆ ವೋಟ್ ಹಾಕಿದ್ದೀರಿ?' ಎಂದು ಕಿಡಿಕಾರಿದ್ದರು.