ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯ ಬೇಕೇ ಬೇಕು ಎಂದ ಪರಮೇಶ್ವರ
Recommended Video

ಬೆಂಗಳೂರು, ಸೆ.26: ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಬೆಂಗಳೂರು ನಗರದಲ್ಲಿ ತಾವು ಸಂಚರಿಸಲು ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯವನ್ನು ಪಡೆದುಕೊಂಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಸಂದರ್ಭದಲ್ಲೇ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯದಲ್ಲಿಲ್ಲಿ ನಗರದಲ್ಲಿ ಸಂಚರಿಸಿದ್ದು, ಇದರಿಂದ ಮಳೆಯ ಹೊರತಾಗಿಯೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಕೇಳಿಬಂದಿತ್ತು.
ಈ ಹಿಂದೆ ಗೃಹಸಚಿವರಾಗಿದ್ದ ರಾಮಲಿಂಗಾರೆಡ್ಡಿ ಹಾಗೂ ಕೆಜೆ ಜಾರ್ಜ್ ಅವರು ಬೆಂಗಳೂರಲ್ಲಿ ಸಂಚರಿಸುವ ವೇಳೆ ವಿಪರೀತ ಟ್ರಾಫಿಕ್ ಇದ್ದರೂ ಝೀರೋ ಟ್ರಾಫಿಕ್ ಸಂಚಾರ ವ್ಯವಸ್ಥೆ ಪಡೆದಿರಲಿಲ್ಲ. ಇಲ್ಲಿಯವರೆಗೆ ಮುಖ್ಯಮಂತ್ರಿಗಳು ಮಾತ್ರ ಈ ಸೌಲಭ್ಯ ಪಡೆಯುತ್ತಿದ್ದರು.

ಮುಖ್ಯಮಂತ್ರಿಗಳನ್ನು ಬಿಟ್ಟರೆ ರಾಜ್ಯಪಾಲರು ಅಥವಾ ದೆಹಲಿಯಿಂದ ರಾಷ್ಟ್ರಪತಿಗಳು, ಪ್ರಧಾನಮಂತ್ರಿ ಅಥವಾ ಕೇಂದ್ರ ಗೃಹ ಸಚಿವರು ಬಂದಾಗ ಮಾತ್ರ ಇಂತಹ ಸೌಲಭ್ಯವನ್ನು ನೀಡಲಾಗುತ್ತಿತ್ತು.
ಆದರೆ ಪರಮೇಶ್ವರ್ ಈ ಸೌಲಭ್ಯ ಪಡೆದಿದ್ದು, ಇದರಿಂದ ಬೆಂಗಳೂರು ಜನರು ಮತ್ತೊಬ್ಬ ವಿಐಪಿಯನ್ನು ಹೆಚ್ಚುವರಿಯಾಗಿ ಸಹಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಈಗಾಗಲೇ ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯ ಪಡೆದಿದ್ದಾರೆ ನಾನೂ ಪಡೆಯುತ್ತಿದ್ದೇನೆ.
ನಾನೂ ವಯಕ್ತಿಕವಾಗಿ ಈ ಸೌಲಭ್ಯ ಪಡೆಯುತ್ತಿಲ್ಲ. ಒಬ್ಬ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವನಾಗಿ ಪಡೆಯುತ್ತಿದ್ದೇನೆ. ಈ ಹಿಂದಿನ ಗೃಹಸಚಿವರಾಗಿದ್ದವರು ಕೂಡ ಇಂತಹ ಸೌಲಭ್ಯ ಪಡೆದಿಲ್ಲ ಎಂದಾದರೆ ಅದು ಅವರ ವಯಕ್ತಿಕ ನಿರ್ಧಾರ ಎಂದರು. ಜೀರೋ ಟ್ರಾಫಿಕ್ ವ್ಯವಸ್ಥೆ ಪಡೆಯಬೇಕೆಂಬುದು ನನ್ನ ವಯಕ್ತಿಕ ನಿರ್ಧಾರ ಎಂದು ಸಮರ್ಥಿಸಿಕೊಂಡರು.
ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯವನ್ನು ಪಡೆಯುವ ಕುರಿತಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಮುನಿಸಿಕೊಂಡ ಪರಮೇಶ್ವರ ಈ ಸೌಲಭ್ಯ ಪಡೆಯುವುದು ಬೇಡ ಎಂದು ಹೇಳುವುದಾದರೆ ಬಿಡುತ್ತೇನೆ ಬಿಡಿ ಎಂದು ವ್ಯಂಗ್ಯವಾಗಿ ನುಡಿದರು.












Click it and Unblock the Notifications