ನ್ಯಾಯವಾದಿ ನಾಯಕ್ ಪ್ರಕರಣ: ಅಗತ್ಯಬಿದ್ದರೆ ಎಸ್ಐಟಿ ರಚನೆ
ಬೆಂಗಳೂರು, ಆಗಸ್ಟ್ 7: ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ದಾಂಡೇಲಿಯಾ ವಕೀಲ ಅಜಿತ್ ನಾಯಕ್ ಪ್ರಕರಣದ ತನಿಖೆ ನಡೆಯುತ್ತಿದ್ದು, ನ್ಯಾಯ ಸಿಗದೇ ಹೋದರೆ ವಿಶೇಷ ತನಿಖೆಗೆ ವಹಿಸುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಅಡ್ವೋಕೇಟ್ ಅಸೋಸಿಯೇಷನ್ ಆಫ್ ಬೆಂಗಳೂರು ಹಾಗೂ ದಾಂಡೇಲಿಯ ಸದಸ್ಯರು ವಿಧಾನಸೌಧಕ್ಕೆ ಆಗಮಿಸಿ, ಅಜಿತ್ ನಾಯಕ್ ಕೊಲೆ ಪ್ರಕರಣವನ್ನು ಸಿಐಡಿ ಅಥವಾ ವಿಶೇಷ ತನಿಖೆಗೆ ವಹಿಸುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅವರು, ಅಜಿತ್ ನಾಯಕ್ ಪ್ರಕರಣದ ತನಿಖೆ ಈಗಾಗಲೇ ನಡೆಯುತ್ತಿದೆ. ಈ ತನಿಖೆಯಲ್ಲಿ ನ್ಯಾಯ ಸಿಗದೇ ಹೋದರೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ನ್ಯಾಯವಾದಿಗಳಿಗೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ ಎಂದರು.

ಅಡ್ವೋಕೇಟ್ ಅಸೋಸಿಯೇಷನ್ ಆಫ್ ಬೆಂಗಳೂರು ಅಧ್ಯಕ್ಷ ರಂಗನಾಥ್ ಇದ್ದರು.ಜುಲೈ ತಿಂಗಳ ಕೊನೆಯಲ್ಲಿ ದಾಂಡೇಲಿಯಲ್ಲಿ ನಡೆದ ಇದೊಂದು ಕೊಲೆ ಪ್ರಕರಣ ಶಾಂತ ವಾತಾವರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಜು. 27ರಂದು ನಡೆದ ವಕೀಲ, ಸಾಮಾಜಿಕ ಹೋರಾಟಗಾರ ಅಜಿತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಸತತ ಒತ್ತಡಗಳ ನಂತರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಸುಳಿವೂ ಸಿಕ್ಕಿದೆ. ಅದರ ಬೆನ್ನಲ್ಲೇ ಕೆಲವು ಆರೋಪಿಗಳ ರಕ್ಷಣೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಭೂವಿವಾದದ ಹಿನ್ನೆಲೆಯಲ್ಲಿ ಅಜಿತ್ ನಾಯ್ಕ್ ಕೊಲೆಯಾಗಿದ್ದಾರೆ ಎಂದು ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಗಳಿವೆ. ಈವರೆಗೆ ಹೊರಬಂದಿರುವ ತನಿಖಾ ಮಾಹಿತಿ ಈ ನಿಟ್ಟಿನಲ್ಲಿ ಬೆಟ್ಟುಮಾಡಿ ತೋರಿಸುತ್ತಿದೆ.
ಆದರೆ, ಅಜಿತ್ ನಾಯ್ಕ್ ಹಿನ್ನೆಲೆ, ಅವರ ಹೋರಾಟ ದಿನಗಳನ್ನು ಬಲ್ಲ ದಾಂಡೇಲಿಯ ಜನ, ಕೊಲೆಯ ಹಿಂದೆ ಪ್ರಭಾವಿಗಳ ಕೈವಾಡವನ್ನೂ ಶಂಕಿಸುತ್ತಿದ್ದಾರೆ.ಹಾಗಾಗಿ ಅಗತ್ಯ ಬಿದ್ದರೆ ಎಸ್ಐಟಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications