'ಪಕ್ಷ ಬದಲಾದರೂ ಉತ್ತರ ಕ್ಷೇತ್ರ ಬಿಡುವುದಿಲ್ಲ'
ಬೆಂಗಳೂರು, ಫೆ.8: ಇಂದಿರಾಗಾಂಧಿಯವರ ರಾಜಕೀಯ ಮರುಜನ್ಮಕ್ಕೆ ಪರೋಕ್ಷವಾಗಿ ಕಾರಣರಾದ ಚಿಕ್ಕಮಗಳೂರು ಜಿಲ್ಲೆಯ ಹಿರಿಯ ರಾಜಕಾರಣಿ ಡಿ.ಬಿ ಚಂದ್ರೇಗೌಡರ ಬಿಜೆಪಿ ಜತೆಗಿನ ಸಾಂಗತ್ಯ ಕೊನೆಗಾಲವನ್ನು ಕಾಣುತ್ತಿದೆ. ಚಂದ್ರೇಗೌಡರು ರಾಜಕೀಯ ನಿವೃತ್ತಿ ಬಯಸಿದ್ದಾರೆ ಎಂಬ ಸುದ್ದಿಯ ನಡುವೆ ಮೂಲ ಬಿಜೆಪಿ ಪಟುಗಳು ಚಂದ್ರೇಗೌಡರಿಗೆ ಟಿಕೆಟ್ ನೀಡಲು ವಿರೋಧಿಸಿದ್ದಾರೆ. ಈ ನಡುವೆ ಪಕ್ಷ ಬದಲಾದರೂ ಬೆಂಗಳೂರು ಉತ್ತರ ಕ್ಷೇತ್ರ ತೊರೆಯುವುದಿಲ್ಲ ಎಂದು ಚಂದ್ರೇಗೌಡರು ಭಾನುವಾರ ಬಾಂಬ್ ಸಿಡಿಸಿದ್ದಾರೆ.
ಉತ್ತಮ ಸಂಸದೀಯ ಪಟು ಎನಿಸಿಕೊಂಡಿರುವ ಚಂದ್ರೇಗೌಡ ಅವರು ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡುತ್ತಾ, ನಾನು ರಾಜಕೀಯ ನಿವೃತ್ತಿ ಬಯಸಿಲ್ಲ. ನಾನು ಬಿಜೆಪಿಯಲಿ ಉನ್ನತ ಸ್ಥಾನಮಾನ ಆಕಾಂಕ್ಷಿಯಾಗಿ ಬರಲಿಲ್ಲ, ಈಗಲೂ ಯಾವುದೇ ಅಪೇಕ್ಷೆಯಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಿಂದ ಬಿಜೆಪಿ ನಾಯಕರು ಮತ್ತು ಕಾರ್ಯಚಟುವಟಿಕೆಗಳಿಂದ ದೂರವಾಗಿ ಏಕಾಂಗಿಯಾಗಿರುವ ಚಂದ್ರೇಗೌಡ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಖಡಕ್ ನಿರ್ಧಾರ ಮಾಡಿದ್ದಾರೆ. ಆದರೆ, ಈ ಬಾರಿ ಚಂದ್ರೇಗೌಡರಿಗೆ ಉತ್ತರ ಕ್ಷೇತ್ರದ ಟಿಕೆಟ್ ನೀಡದಂತೆ ಮಾಜಿ ಗೃಹ ಸಚಿವ ಆರ್ ಅಶೋಕ್, ಡಿವಿ ಸದಾನಂದ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಉತ್ತರ ಕ್ಷೇತ್ರಕ್ಕೆ ಮಾಜಿ ಉಪ ಮುಖ್ಯಮಂತ್ರಿ ಅಶೋಕ್, ಮಲ್ಲೇಶ್ವರಂ ಶಾಸಕ ಸಿ.ಎನ್ ಅಶ್ವಥನಾರಾಯಣ ಅವರ ಹೆಸರು ಕೇಳಿ ಬಂದಿದೆ.
ತಮ್ಮ ಕಡೆಗೆ ಸೆಳೆದುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಪ್ರಯತ್ನ ಮಾಡುತ್ತಿವೆ ಎಂಬ ವಿಚಾರವೂ ರಾಜಕೀಯ ವಲಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ.ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಮೂವರು ಹಾಗೂ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅಂದರೆ ಮೂರೂ ಪಕ್ಷಗಳು ಪ್ರಬಲವಾಗಿರುವುದರಿಂದ ಇಲ್ಲಿ ಸಮಬಲದ ತ್ರಿಕೋನ ಮತ್ತು ಜಿದ್ದಾಜಿದ್ದಿ ಹೋರಾಟ ನಡೆಯುವುದು ನಿಶ್ಚಿತ ಎನ್ನಲಾಗಿದೆ.












Click it and Unblock the Notifications