ಗಾಂಧಿ ಬಜಾರಿನಲ್ಲಿ ಎಲ್ಲೆಲ್ಲೂ ಹಬ್ಬದ ಸಡಗರ
ಬೆಂಗಳೂರು, ಸೆಪ್ಟೆಂಬರ್ 28: ಸತತ ಮಳೆಯ ನಡುವೆಯೂ ಬೆಂಗಳೂರು ನಗರ ದಸರಾ ಹಬ್ಬಕ್ಕಾಗಿ ಸಿಂಗಾರಗೊಳ್ಳುತ್ತಿದೆ. ನವರಾತ್ರಿ ಆರಂಭವಾದಾಗಿನಿಂದಲೂ ಮನೆ ಮಾಡಿದ್ದ ಹಬ್ಬದ ವಾತಾವರಣಕ್ಕೆ ಆಗಾಗ ಸುರಿಯುತ್ತಿರುವ ಅಗಾಧ ಮಳೆಯು ತಣ್ಣೀರೆರೆಚುತ್ತಿದೆ. ಆದರೂ, ಮಹತ್ವದ ದಿನಗಳಾದ ನವವಿ ಹಾಗೂ ದಶಮಿಗಳ ಆಚರಣೆಗೆ ಬೆಂಗಳೂರಿಗರು ಸನ್ನದ್ಧರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ, ನಗರದ ಪ್ರಮುಖ ಮಾರುಕಟ್ಟೆ ತಾಣಗಳಾದ ಕೆ.ಆರ್. ಮಾರ್ಕೆಟ್, ಗಾಂಧಿ ಬಜಾರ್, ವಿಜಯ ನಗರ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ನಾಗರಿಕರು ಹಬ್ಬಕ್ಕಾಗಿ ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದಾರೆ.
ದಸರಾ ಹಬ್ಬಕ್ಕೆ ಕೆಎಸ್ ಆರ್ ಟಿಸಿಯಿಂದ 1500 ಹೆಚ್ಚುವರಿ ಬಸ್
ಗಾಂಧಿ ಬಜಾರಿನಲ್ಲಂತೂ ಹಬ್ಬದ ಸಡಗರ ಮುಗಿಲು ಮುಟ್ಟಿತ್ತು. ಗಾಂಧಿ ಬಜಾರ್ ನ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಲೂ ಜಾಗವಿಲ್ಲದಷ್ಟು ಜನವೋ ಜನ.
ದಸರಾ ಕೊಡುಗೆ : ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ
ಅತಿ ಹೆಚ್ಚು ಜನರು ಆಗಮಿಸಿದ್ದರಿಂದಾಗಿ, ಅಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಸುಗಮ ಟ್ರಾಫಿಕ್ ಗಾಗಿ ಪೊಲೀಸ್ ಸಿಬ್ಬಂದಿ ಈ ಮಾರ್ಗವನ್ನು ಏಕ ಮುಖ ಸಂಚಾರ ಮಾರ್ಗವನ್ನಾಗಿ ಪರಿವರ್ತಿಸಿದ್ದರು.
ಮತ್ತೂ ಬೆಲೆ ಹೆಚ್ಚು
ಗಾಂಧಿ ಬಜಾರಿನಲ್ಲಿ ಈ ಬಾರಿ ಹೂಗಳ ವ್ಯಾಪಾರ ಹೆಚ್ಚಾಗಿತ್ತು. ಆದರೆ, ದರ ಮಾತ್ರ ಕೇಳಬಾರದು! ಹೂಗಳ ಬೆಲೆ ಈಗಾಗಲೇ ಆಕಾಶದೆತ್ತರಕ್ಕೆ ಏರಿದೆ ಎನ್ನುತ್ತಿದ್ದ ಗ್ರಾಹಕರೊಬ್ಬರು ನವಮಿ, ದಶಮಿಗಳಂದು ಬೆಲೆ ಮತ್ತಷ್ಟು ಹೆಚ್ಚಾಗುವ ಬಗ್ಗೆ ಮಾತನಾಡಿದರು.
ಬಾಳೆ ದಿಂಡು, ಕುಂಬಳ ಮಾರಾಟ ಮಂದ
ಅಂದಹಾಗೆ, ಬಾಳೆ ದಿಂಡು, ಕುಂಬಳ ಕಾಯಿಗಳನ್ನು ಮಾರುತ್ತಿದ್ದವರು ಕೊಂಚ ಆರಾಮಗಿದ್ದಂತೆ ಕಂಡುಬಂತು. ಅವರ ವ್ಯಾಪಾರಕ್ಕಿನ್ನೂ ರಭಸ ಬಂದಿರಲಿಲ್ಲ. ಈ ಬಗ್ಗೆ ಕೇಳಿದಾಗ ಉತ್ತರಿಸಿದರ ವೆಂಕಟೇಶ್ ಎಂಬ ವ್ಯಾಪಾರಿ, ಆಯುಧ ಪೂಜೆಯ ಮುನ್ನ ಬಾಳೆ ದಿಂಡು ಹಾಗೂ ಕುಂಬಳಕಾಯಿಗಳಿಗೆ ವ್ಯಾಪಾರ ಬರುತ್ತದೆ ಎಂದರು. ಹೀಗಾಗಿ, ಗುರುವಾರ (ಸೆ. 28) ಸಂಜೆಯ ನಂತರವೇ ನಮ್ಮ ವ್ಯಾಪಾರ ಏರುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ವ್ಯಾಪಾರವೋ ವ್ಯಾಪಾರ
ಮಧ್ಯಾಹ್ನದ ಹೊತ್ತಿಗೆ ಹೆಚ್ಚೆಚ್ಚು ಜನರು ಗಾಂಧಿ ಬಜಾರಿನತ್ತ ಹೆಜ್ಜೆ ಹಾಕುತ್ತಿದ್ದಂತೆ ಎಲ್ಲೆಲ್ಲೂ ಜನ ಸಂದಣಿ ಗಿಜಿಗುಟ್ಟುತ್ತಿತ್ತು. ಅಕ್ಕ ಪಕ್ಕದ ಹೋಟೆಲ್, ಅಂಗಡಿಗಳಲ್ಲೂ ಸಖತ್ ಬ್ಯುಸಿನೆಸ್ ಆಗುತ್ತಿದೆ ಎಂದು ವ್ಯಾಪಾರಿಯೊಬ್ಬರು ಹೇಳಿದರು.
ಸೊಪ್ಪು, ತರಕಾರಿ ಬೆಲೆಯೂ ಗಗನಕ್ಕೆ
ಅಂದಹಾಗೆ, ಹೂವು, ಕುಂಬಳಕಾಯಿ, ಪೂಜಾ ಸಾಮಗ್ರಿಗಳ ಜತೆಯಲ್ಲೇ ಸೊಪ್ಪು, ತರಕಾರಿ ರೇಟುಗಳೂ ಏರಿವೆ ಎಂದು ಕೆಲವು ಗ್ರಾಹಕರು ಸಿಡಿಮಿಡಿಗೊಳ್ಳುತ್ತಿದ್ದುದು ಮಾಮೂಲಾಗಿತ್ತು. ಕೆಲವಾರು ಕಡೆ, ತರಕಾರಿ, ಸೊಪ್ಪು ಮಾರಾಟಗಾರರ ಜತೆಗೆ ಕೆಲವರು ವಾಗ್ವಾದಕ್ಕೆ ಇಳಿದ ಘಟನೆಗಳೂ ಮಾಮೂಲಾಗಿದ್ದವು.