Breaking News: ಜೈಲಿನಿಂದ ಹೊರ ಬಂದ ದರ್ಶನ್, ಪತ್ನಿಯೊಂದಿಗೆ ಬೆಂಗಳೂರಿನತ್ತ ಪಯಣ!
ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ವಿಚಾರಣಾಧೀನ ಕೈದಿ ಆಗಿರುವ ದರ್ಶನ್ ತೂಗುದೀಪ್ ಸುದೀರ್ಘ ಅವಧಿಯ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ಬುಧವಾರ ಸಂಜೆ ಪ್ರಯಾಣ ಬೆಳೆಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ 131 ದಿನಗಳ ಕಾಲ ಜೈಲು ಸೇರಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆರು ವಾರಗಳ ಕಾಲ ದರ್ಶನ್ ತೂಗುದೀಪ್ಗೆ ಜಾಮೀನು ನೀಡಲಾಗಿದೆ.
ಕುಂಟುತ್ತಲ್ಲೇ ಹೊರ ಬಂದ ದರ್ಶನ್: ನಟ ದರ್ಶನ್ ಅವರು ಬುಧವಾರ ಸಂಜೆ ಬಳ್ಳಾರಿ ಜೈಲಿನಿಂದ ಕುಂಟುತ್ತಲೇ ಹೊರ ಬಂದರು. ಜೈಲಿನಿಂದ ಹೊರ ಬಂದ ದರ್ಶನ್ ಮುಖದಲ್ಲಿ ಸಣ್ಣ ನಿರಾಳತೆ ಹಾಗೂ ನೋವು ಸಹ ಇತ್ತು. ಸಂಜೆ 6.12ರ ಸುಮಾರಿಗೆ ಅವರು ಬಳ್ಳಾರಿ ಜೈಲಿನ ಗೇಟ್ನಿಂದ ಹೊರ ಬಂದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ಅವರನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಬರಲಾಯಿತು.
ಅಭಿಮಾನಿಗಳ ಹರ್ಷೋದ್ಗಾರ: ದರ್ಶನ್ ಅವರು ಬಳ್ಳಾರಿ ಜೈಲಿನಿಂದ ಹೊರ ಬರುತ್ತಿದ್ದಂತೆಯೇ ದರ್ಶನ್ ಅವರ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಜೈ ಡಿಬಾಸ್, ಜೈ ಡಿಬಾಸ್ ಎಂದು ಕೂಗಿದರು. ಈ ಸಂದರ್ಭದಲ್ಲಿ ನೂರಾರು ಜನ ದರ್ಶನ್ ಅಭಿಮಾನಿಗಳು ಇಲ್ಲಿ ಸೇರಿದ್ದರು.

ಅಲ್ಲದೇ ದರ್ಶನ್ ಅವರು ಬೆಂಗಳೂರಿಗೆ ಹೋಗುವ ಕಾರ್ನ ಹಿಂದೆಯೇ ನೂರಾರು ಜನ ಅಭಿಮಾನಿಗಳು ಬೈಕ್ನ ಮೂಲಕ ಅವರನ್ನು ಹಿಂಬಾಲಿಸಿಕೊಂಡು ಹೋಗುವ ದೃಶ್ಯಗಳು ಕಂಡು ಬಂತು. ನಟ ದರ್ಶನ್ ಅವರು ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅಭಿಮಾನಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಸಂಚಾರ ಬದಲಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬಳ್ಳಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್: ದರ್ಶನ್ ಅವರು ಬಿಡುಗಡೆಯಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಹಲವು ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿರುವುದು ಕಂಡು ಬಂತು. ದರ್ಶನ್ ಅವರ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ದರ್ಶನ್ಗಳ ಹಿಂದೆ ನೂರಾರು ಜನ ಹಿಂಬಾಲಿಸುತ್ತಿದ್ದು, ದರ್ಶನ್ ಅವರು ಹೊರಗೆ ಬರುತ್ತಿರುವುದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ.
ದರ್ಶನ್ ಕಾರ್ ಸುತ್ತುವರಿದ ಅಭಿಮಾನಿಗಳು: ದರ್ಶನ್ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಅವರ ಅಭಿಮಾನಿಗಳು ಕಾರ್ ಸುತ್ತುವರಿದು ಜೈ ಡಿ ಬಾಸ್, ಒಂದು ಸಲ ನೋಡಿ ಬಾಸ್ ಪ್ಲೀಸ್ ಎಂದು ಕೂಗುತ್ತಿದ್ದರು. ಅಲ್ಲದೇ ದರ್ಶನ್ ಅವರ ಭಾವಚಿತ್ರಕ್ಕೆ ಹೂವು ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದು, ಇದೇ ಸಂದರ್ಭದಲ್ಲಿ ಕಂಡುಬಂತು.
ಬೆಂಗಳೂರು ತಲುಪಲು ವಿಳಂಬ ಸಾಧ್ಯತೆ: ಇನ್ನು ನಟ ದರ್ಶನ್ ಅವರು ಬೆಂಗಳೂರು ತಲುಪುವುದು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ನಾಲ್ಕರಿಂದ ಐದು ಗಂಟೆಯಲ್ಲಿ ತಲುಪಬಹುದು. ಆದರೆ, ದರ್ಶನ್ ಬರುತ್ತಿರುವ ಮಾರ್ಗದಲ್ಲಿ ದರ್ಶನ್ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಅಲ್ಲದೇ ಬೈಕ್ ಹಾಗೂ ಕಾರ್ಗಳಲ್ಲೂ ಅವರನ್ನು ಹಿಂಬಾಲಿಸುತ್ತಿದ್ದಾರೆ. ಹೀಗಾಗಿ, ಮಾರ್ಗದುದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ದರ್ಶನ್ ಅವರು ಬೆಂಗಳೂರು ತಲುಪುವುದು ವಿಳಂಬವಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications