ವಲಸೆ ಕಾರ್ಮಿಕರಿಗೆ ಪ್ರತಿದಿನ ಎರಡು ಲಕ್ಷ ದಿನಸಿ ಕಿಟ್ ವಿತರಣೆ
ಬೆಂಗಳೂರು, ಏಪ್ರಿಲ್ 21: ಉದ್ಯೋಗ ಅರಸಿ ರಾಜ್ಯಕ್ಕೆ ಆಗಮಿಸಿ, ರಾಜ್ಯದಲ್ಲೇ ನೆಲೆಸಿರುವ ವಲಸೆ ಕಾರ್ಮಿಕರಿಗೆ ಪ್ರತಿ ದಿನ ಎರಡು ಲಕ್ಷ ದಿನಸಿ ಕಿಟ್ ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
Recommended Video
ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಂಗಳವಾರ ಬೆಂಗಳೂರು ಅರಮನೆಯ ತ್ರಿಪುರವಾಸಿನಿ ಆವರಣದಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನುದಾನದ ನೆರವಿನಿಂದ ದಿನಸಿ ಕಿಟ್ ಸಿದ್ಧಪಡಿಸುವ ಪ್ರಧಾನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ಗಮನಿಸಿ, ಸ್ವಯಂ ಸೇವಕರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
"ಪಾದರಾಯನಪುರ ದಾಂಧಲೆ ಯಾರೇ ಕುಮ್ಮಕ್ಕು ಕೊಟ್ಟರೂ ಬಿಡಲ್ಲ"- ಬೊಮ್ಮಾಯಿ
ಕಿಟ್ನಲ್ಲಿ ಏನೇನಿರುತ್ತೆ?
ಪ್ರತಿ ದಿನಸಿ ಕಿಟ್ನಲ್ಲಿ ಉತ್ತಮ ಗುಣಮಟ್ಟದ ಐದು ಕೆ ಜಿ ಅಕ್ಕಿ, ಎರಡು ಕೆ ಜಿ ತೊಗರಿ ಬೇಳೆ, 250 ಗ್ರಾಂ ಕಡಲೆ, 500 ಗ್ರಾಂ ರಿಫೈಂಡ್ ಆಯಿಲ್, ತಲಾ 200 ಗ್ರಾಂ ರಸಂ ಪುಡಿ ಮತ್ತು ಸಾಂಬಾರ್ ಪುಡಿ, 100 ಗ್ರಾಂ ಹಸಿಖಾರದ ಪುಡಿ, 200 ಗ್ರಾಂ ಉಪ್ಪಿನಕಾಯಿ, 500 ಗ್ರಾಂ ಸಕ್ಕರೆ, ಎರಡು ಕೆ ಜಿ ಗೋಧಿ ಹಿಟ್ಟು ಅಥವಾ ಇಡ್ಲಿ ರವೆ ಇರುತ್ತದೆ. ಪ್ರತಿ ಕಿಟ್ನಲ್ಲಿ ಓರ್ವ ವ್ಯಕ್ತಿ ದಿನಕ್ಕೆ ಎರಡು ಬಾರಿಯಂತೆ 21 ದಿನ ಊಟ ತಯಾರಿಸಿ ಕೊಳ್ಳುವಷ್ಟು ದಿನಸಿ ಪದಾರ್ಥಗಳಿವೆ ಎಂದು ಸಚಿವರು ಹೇಳಿದರು.
ಯಾರಾರು ಭಾಗಿ?
ಕರ್ನಾಟಕ ಪೊಲೀಸ್ ಇಲಾಖೆಯ ಅಂಗ ಸಂಸ್ಥೆ ಎನಿಸಿರುವ ನಾಗರಿಕ ರಕ್ಷಣಾ ವಿಭಾಗ ಹಾಗೂ ಇಸ್ಕಾನ್ ನ ಅಕ್ಷಯ ಪಾತ್ರ ಫೌಂಡೇಷನ್ನ ಸ್ವಯಂ ಸೇವಕರು, ಕಾರ್ಮಿಕ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗಿ ಸುಮಾರು ಎರಡು ಲಕ್ಷ ಕಾರ್ಮಿಕರಿಗೆ ದಿನಸಿ ತಲುಪಿಸುವ ಈ ಕೆಲಸ ಮಾಡುತ್ತಿವೆ.
ನಿಯಂತ್ರಣದಲ್ಲಿ ಪಾದರಾಯನಪುರ
ಕೊರೊನಾ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಹಾಗೂ ಸಿಲ್ ಡೌನ್ ಉಲ್ಲಂಘಿಸಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ನಗರದ ಪಾದರಾಯನಪುರದಲ್ಲಿ ಗಲಭೆ ಸೃಷ್ಠಿಸಲು ಕಾರಣರಾದ 119 ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಪಾದರಾಯನಪುರ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಪತ್ತು ನಿರ್ವಹಣಾ ಕಾಯ್ದೆ ಪ್ರಯೋಗ
ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಕ್ರಮ ಜರುಗಿಸುವಿರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಷ್ಟ್ರೀಯ ವಿಪತ್ತ ನಿರ್ವಹಣಾ ಕಾಯಿದೆ ಹಾಗೂ ಸಾಂಕ್ರಾಮಿಕ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಅಂತೆಯೇ, ಎಲ್ಲಾ ಹಾಟ್-ಸ್ಪಾಟ್ ಜಿಲ್ಲೆಗಳಲ್ಲೂ ಕೋವಿಡ್-19 ಕಂಟೈನ್ಮೆಂಟ್ ಜೋನ್ಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.