Bengaluru: ಕಾರ್ ಇಲ್ಲದಿದ್ದರೆ ಹೆಣ್ಣು ಕೊಡಲ್ಲ ಡಿ.ಕೆ ಶಿವಕುಮಾರ್: ಜನರಿಂದ ಕ್ಲಾಸ್, ತೇಜಸ್ವಿ & ನಿಖಿಲ್ ಸಾಥ್!
Bengaluru: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಎಂಡ್ ಟು ಎಂಡ್ ಕನೆಕ್ಟಿವಿಟಿ (ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನೇರ ಸಂಪರ್ಕ ಸಾರಿಗೆ ವ್ಯವಸ್ಥೆ) ಅಭಿವೃದ್ಧಿ ಆಗಿಲ್ಲ. ಮೆಟ್ರೋ, ಬಸ್, ಆಟೋ ಹಾಗೂ ಕ್ಯಾಬ್ ಸೇವೆಗಳು ಇವೆಯಾದರೂ ಜನ ಒಂದಕ್ಕಿಂತ ಹೆಚ್ಚು ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಆದರೆ ಇದೀಗ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಜನ ಕಾರು ಬೇಕು ಎನ್ನುತ್ತಾರೆ, ಕಾರು ಇಲ್ಲದ ಹುಡುಗನಿಗೆ ಹೆಣ್ಣು ಕೊಡುವುದಿಲ್ಲ ಎನ್ನುವ ಅಪಾಯಕಾರಿ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ.
ಬೆಂಗಳೂರಿನ ಟನಲ್ ರೋಡ್ ಪ್ರಾಜೆಕ್ಟ್ ಬಗ್ಗೆ ಪರ - ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ಯೋಜನೆಯನ್ನು ಸಮರ್ಥಿಸಿಕೊಳ್ಳುವ ವಿಷಯದಲ್ಲಿ ಕಾರು ಬಳಕೆ ಅನಿವಾರ್ಯ ಎನ್ನುವಂತೆ ಮಾತನಾಡಿದ್ದಾರೆ. ಸಮೂಹ ಸಾರಿಗೆಗಳನ್ನು ಬಳಕೆ ಮಾಡಿ, ಅದರಿಂದ ಟ್ರಾಫಿಕ್ ಜಾಮ್ ಹಾಗೂ ವಾಯುಮಾಲಿನ್ಯ ಕಡಿಮೆ ಆಗಲಿದೆ. ಸಮಯವೂ ಉಳಿಯಲಿದೆ ಎಂದು ಹೇಳಬೇಕಾಗಿರುವ ಸರ್ಕಾರವೇ ಈ ರೀತಿ ಪ್ರಚಾರ ನೀಡುತ್ತಿರುವುದು ತಪ್ಪು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಿಂದ ಹಾಗೂ ರಾಜಕಾರಣಿಗಳಿಂದಲೂ ವಿರೋಧ ವ್ಯಕ್ತವಾಗುತ್ತಿದೆ.

"ಇಷ್ಟು ದಿನ, ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಸುರಂಗ ಯೋಜನೆ (Tunnel Road Project) ಹೊಂದಿದೆ ಎಂದು ನಾನು ತಪ್ಪು ಅಭಿಪ್ರಾಯಪಟ್ಟಿದ್ದೆ. ಈಗ, ಡಿಸಿಎಂ ಸ್ಪಷ್ಟಪಡಿಸಿದ್ದಾರೆ ಇದು ಸಾಮಾಜಿಕ ಸಮಸ್ಯೆಯನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದೆ - ಜನರು ಕಾರು ಇಲ್ಲದಿರುವ ಹುಡುಗನನ್ನು (ವರ) ಮದುವೆಯಾಗಲು ಬಯಸುವುದಿಲ್ಲ ಎಂದು ಹೇಳಿದ್ದು. ನಾನು ಎಷ್ಟು ಮೂರ್ಖನಾಗಿದ್ದೆ!" ಎಂದು ಸಂಸದ ತೇಜಸ್ವಿ ಸೂರ್ಯ ಅವರು ರಿಯಾಕ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು, ಸರಿಯಾಗಿ ಹೇಳಿದ್ದೀರಿ ತೇಜಸ್ವಿ ಸೂರ್ಯ ಅವರೇ ಕೆಟ್ಟ ಯೋಜನೆಯನ್ನು ಸಮರ್ಥಿಸಲು DCM ಮದುವೆಯ ಜೋಕ್ಗಳನ್ನು ಬಳಸಿದ್ದಾರೆ. ಕಾಂಗ್ರೆಸ್ ಆಡಳಿತದ ಬದಲು ಹಾಸ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಇದು "ನಗರ ಯೋಜನೆ" ಆಗಿದ್ದರೆ, ಕಾಂಗ್ರೆಸ್ GBA ಅನ್ನು BBMP - ಬೆಂಗಳೂರು ಬ್ಯೂರೋ ಆಫ್ ಮ್ಯಾರೇಜಸ್ & ಪೋಟ್ಹೋಲ್ಸ್ ಎಂದು ಮರುನಾಮಕರಣ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಸಾರ್ವಜನಿಕ ವಲಯದಿಂದಲೂ ಟೀಕೆ ವ್ಯಕ್ತವಾಗಿದೆ. ಅಮರನಾಥ್ ಶಿವಶಂಕರ್ ಎನ್ನುವವರು ಸಾರ್ವಜನಿಕ ಸಾರಿಗೆ ಹೆಚ್ಚಿಸದೆ ಹೋದರೆ ಜನ ಅನಿವಾರ್ಯವಾಗಿ ತಮ್ಮದೇ ಸ್ವಂತ ಗಾಡಿಗಳಲ್ಲಿ ಕೆಲಸಕ್ಕೆ ಹೋಗಬೇಕಾಗುತ್ತದೆ. 50 ಜನ ತುಂಬುವ ಒಂದು ಬಸ್ಸು ರಸ್ತೆಯಲ್ಲಿ ಎಷ್ಟು ಜಾಗ ಹಿಡಿಯುತ್ತೆ ಮತ್ತು ಅದರ ಬದಲಿಗೆ 30-40 ಕಾರುಗಳು ಎಷ್ಟು ಜಾಗ ಹಿಡಿಯುತ್ತೆ ಲೆಕ್ಕ ಹಾಕಿದಾಗ ಸಾರ್ವಜನಿಕ ಸಾರಿಗೆಯ ಮಹತ್ವ ತಿಳಿಯುತ್ತದೆ. ಅದೇ ರೀತಿ ಒಂದು ರೈಲು ಸಾವಿರಾರು ಜನರನ್ನು ಒಮ್ಮೆಲೇ ಕರೆದೊಯ್ಯುತ್ತದೆ. ಇದಂತೂ ಇನ್ನೂ ಸಮರ್ಪಕ ಸಾರಿಗೆ ಎಂದು ಹೇಳಿದ್ದಾರೆ.
ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹೊಸ ಮೇಲ್ಸೇತುವೆಗಳು ಕೆಳಸೇತುವೆಗಳು ಅಂದುಕೊಂಡರೆ ಅದು ಮೂರ್ಖತನ. ಬಾಟಲ್ ನೆಕ್ ಗಳನ್ನು ಅವು ಮುಂದೂಡುತ್ತದೆ ಅಷ್ಟೇ. ಪಕ್ಷಾತೀತವಾಗಿ ಸಾರ್ವಜನಿಕ ಸಾರಿಗೆಯನ್ನು ಬೆಂಬಲಿಸುವ ರಾಜಕಾರಣಿಗಳಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದೆ ಅನ್ನಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications