ಡಿಕೆಶಿಯಿಂದ ಬೇನಾಮಿ ಆಸ್ತಿಗಾಗಿ 4 ಕೋಟಿ ರು ಹೂಡಿಕೆ
Recommended Video
ಬೆಂಗಳೂರು, ಡಿಸೆಂಬರ್ 11: 'ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು 4 ಕೋಟಿ ರು ಗೂ ಅಧಿಕ ಮೊತ್ತವನ್ನು ಬಳಸಿ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಬೆಂಗಳೂರಿನ ಅರಮನೆ ಆಸ್ತಿಯ ಗುತ್ತಿಗೆ ಒಪ್ಪಂದವನ್ನು ಡಿಕೆ ಶಿವಕುಮಾರ್ ಅವರು ತಮ್ಮ ಸಂಬಂಧಿಕರ ಹೆಸರಿಗೆ ಮಾಡಿಸಿದ್ದಾರೆ' ಎಂದು ಆದಾಯ ತೆರಿಗೆ (ಐ.ಟಿ) ಇಲಾಖೆ ಹೈಕೋರ್ಟ್ಗೆ ತಿಳಿಸಿದೆ. ಮೈಸೂರು ರಾಜ ಮನೆತನದ ವಿಶಾಲಕ್ಷ್ಮಿ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಆದಾಯ ತೆರಿಗೆ ಇಲಾಖೆ ಈ ಪ್ರತಿಕ್ರಿಯೆ ನೀಡಿದೆ.
'ಡಿ.ಕೆ. ಶಿವಕುಮಾರ್ ತಮ್ಮ ಸೋದರ ಸಂಬಂಧಿ ಶಶಿಕುಮಾರ್ ಹೆಸರಿನಲ್ಲಿ ವ್ಯವಹಾರ ನಡೆಸಿದ್ದಾರೆ. ವಿಶಾಲಾಕ್ಷಿ ದೇವಿ ಅವರಿಗೆ 1 ಕೋಟಿ ರುಗಳನ್ನು ಚೆಕ್ ರೂಪದಲ್ಲಿ ನೀಡಿದ್ದಾರೆ. ಉಳಿದ 4 ಕೋಟಿ ರು ನಗದು ರೂಪದಲ್ಲಿ ಚಂದ್ರಶೇಖರ ಸುಖಪುರಿ ಎಂಬುವರ ಮೂಲಕ ನೀಡಿದ್ದಾರೆ. ಒಟ್ಟು 5 ಕೋಟಿ ರು ಹೂಡಿಕೆ ಮಾಡಿದ್ದಾರೆ' ಎಂದು ಐ.ಟಿ ಇಲಾಖೆ ತಿಳಿಸಿದೆ.
ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದ ನಂತರ, ಶಶಿಕುಮಾರ್ ನಿವಾಸದಲ್ಲೂ ತಪಾಸಣೆ ನಡೆಸಲಾಗಿತ್ತು. ನಂತರ ವಿಶಾಲಾಕ್ಷಿ ಅವರ ಮನೆಯಲ್ಲೂ ಪರಿಶೀಲನೆ ನಡೆಸಿದಾದ ಸಿಕ್ಕ ದಾಖಲೆಗಳನ್ನು ಆಧರಿಸಿ ವಿಶಾಲಾಕ್ಷಿ ದೇವಿ ಅವರ ಆಸ್ತಿಯನ್ನು ಐ.ಟಿ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಐಟಿ ಇಲಾಖೆ ಕ್ರಮವನ್ನು ಪ್ರಶ್ನಿಸಿ ವಿಶಾಲಾಕ್ಷಿ ದೇವಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಐ.ಟಿ ಇಲಾಖೆ ಅಧಿಕಾರಿಗಳು, 'ಶಿವಕುಮಾರ್ ಜೊತೆ ಬೇನಾಮಿ ವ್ಯವಹಾರದಲ್ಲಿ ಶಶಿಕುಮಾರ್, ಚಂದ್ರಶೇಖರ್ ಮತ್ತು ವಿಶಾಲಾಕ್ಷಿ ದೇವಿ ಅವರೂ ಭಾಗಿಯಾಗಿದ್ದಾರೆ' ಎಂದಿದ್ದಾರೆ.