ವಾರ್ಧಾ ಎಫೆಕ್ಟ್: ಮಳೆಗೆ ತೋಯ್ದ ಗುಬ್ಬಚ್ಚಿಯಂತಾದ ಬೆಂಗಳೂರು
ವಾರ್ಧಾ ಚಂಡಮಾರುತ ಬೆಂಗಳೂರಿಗೂ ಮಳೆ-ಗಾಳಿ ತಂದಿದೆ. ಇನ್ನೆರಡು ದಿನ ಮನೆಯಿಂದ ಆಚೆ ಹೋಗುವಾಗ ಛತ್ರಿ ಜತೆಗಿರಲಿ. ವಾಹನ ಪಾರ್ಕಿಂಗ್ ಮಾಡುವಾಗ ಹುಷಾರ್. ತಗ್ಗಿನ ಪ್ರದೇಶದಲ್ಲಿರುವವರು ಕೂಡ ಎಚ್ಚರಿಕೆಯಿಂದ ಇರಿ.
ಬೆಂಗಳೂರು, ಡಿಸೆಂಬರ್ 13: ಸೋಮವಾರ ಸಂಜೆಯಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರು ತೋಯ್ದ ಗುಬ್ಬಚ್ಚಿಯಂತಾಗಿದೆ. ವಾರ್ಧಾ ಚಂಡಮಾರುತ ಚೆನ್ನೈನಲ್ಲಿ ಸಾಮಾನ್ಯ ಬದುಕನ್ನು ಚೆಲ್ಲಾಪಿಲ್ಲಿ ಮಾಡಿದ್ದರೆ, ಅದರದೇ ಪರಿಣಾಮ ಬೆಂಗಳೂರು ನಗರದ ಮೇಲೂ ಆಗುತ್ತಿದ್ದು ಸೋಮವಾರ ರಾತ್ರಿಯಿಡೀ ಮಳೆ ಸುರಿದಿದೆ. ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಮುಂದಿನ ಎರಡು ದಿನದಲ್ಲಿ ಬೆಂಗಳೂರಿನಲ್ಲಿ ಭಾರಿ ಗಾಳಿ ಬೀಸಿ, ಮಳೆ ಆಗಬಹುದು. ನಗರದ ಕೆಲವು ಕಡೆ ಮರಗಳು ನೆಲಕ್ಕುರುಳಿವೆ. ಇನ್ನು ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಸಣ್ಣ ಪ್ರಮಾಣದ ಮಳೆ ಬಿದ್ದರೆ ಪತರಗುಟ್ಟುವ ಬೆಂಗಳೂರಿಗೆ ಈಗಿನ ಸನ್ನಿವೇಶ ಸವಾಲಾಗಿರುವುದು ಹೌದು. ಬಿಬಿಎಂಪಿ ಈ ಸ್ಥಿತಿಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಕೂಡ ಸದ್ಯದ ಪ್ರಶ್ನೆ.[ಕರ್ನಾಟಕಕ್ಕೂ ತಟ್ಟಿದ ವಾರ್ಧಾ ಚಂಡಮಾರುತ ಭೀತಿ!]

ಸೋಮವಾರ ಬಿಬಿಎಂಪಿ ತುರ್ತು ಸಭೆ ನಡೆಸಿದೆ. ಮರಗಳು ಬೀಳುವುದು ಮತ್ತಿತರೆ ಸಮಸ್ಯೆಗಳಾದಲ್ಲಿ ತಕ್ಷಣ ಪರಿಹಾರ ಕೈಗೊಳ್ಳಲು ಸಿದ್ಧರಿರಬೇಕು ಎಂದು ಸೂಚಿಸಲಾಗಿದೆ. ಬೆಂಗಳೂರು-ಚೆನ್ನೈ ಮಧ್ಯೆ ಸಂಚರಿಸುವ ಹಲವು ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಕೆಲವು ವಿಮಾನಗಳ ಪ್ರಯಾಣವನ್ನು ಮಂಗಳವಾರಕ್ಕೆ ಬದಲಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.











Click it and Unblock the Notifications