ಕ್ಯಾಶ್ ಬ್ಯಾಕ್ ಹೆಸರಿನಲ್ಲಿ ಮೋಸ ಮಾಡ್ತಾರೆ ಸೈಬರ್ ವಂಚಕರು ಹುಷಾರ್!
ಬೆಂಗಳೂರು, ಮಾ. 02: ಪೇಟಿಎಂ ಕ್ಯಾಶ್ ಬ್ಯಾಕ್ ಆಫರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಸೈಬರ್ ವಂಚಕನನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೀಪಕ್ ಚಕ್ರವರ್ತಿ ಬಂಧಿತ ಆರೋಪಿ. ಈತ ತಾನು ಪೇಟಿಎಂ ಎಕ್ಸಿಕ್ಯೂಟೀವ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಪರಿಚಯವಾದವರಿಗೆ ಕ್ಯಾಶ್ ಬ್ಯಾಕ್ ಆಫರ್ಗಾಗಿ ಪೇಟಿಎಂ ಬಿಸಿನೆಸ್ ಆಪ್ ಇನ್ಸ್ಟಾಲ್ ಮಾಡಿಸುತ್ತಿದ್ದ. ಆ ಬಳಿಕ 20 ಸಾವಿರ ರೂ. ಠೇವಣಿ ಇಡುವಂತೆ ಸೂಚಿಸಿ ಹಣ ಪಡೆದು ಮೋಸ ಮಾಡುತ್ತಿದ್ದ. ಅನೇಕ ಮಂದಿಗೆ ಈ ರೀತಿ ಮೋಸ ಮಾಡಿದ್ದ. ಈ ಕುರಿತು ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ದೂರುಗಳು ದಾಖಲಾಗಿದ್ದವು. ಆರೋಪಿ ಚಲನವಲನ ಗಮನಿಸಿ ದೀಪಕ್ ಚಕ್ರವರ್ತಿಯನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅನೇಕರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಆನ್ಲೈನ್ ವಹಿವಾಟು ನಡೆಸುವ ಆಪ್ಗಳು ಗ್ರಾಹಕರನ್ನು ಸೆಳೆಯಲು ಕ್ಯಾಷ್ ಬ್ಯಾಕ್ ಆಫರ್ ನೀಡುತ್ತಿವೆ. ಹೀಗಾಗಿ ಜನರು ಸಣ್ಣ ಅನುಮಾನ ಪಡದೇ ಆಪ್ಗಳ ಕ್ಯಾಶ್ ಬ್ಯಾಕ್ ಆಫರ್ ಬಗ್ಗೆ ಸಂಶಯಗಳಿಲ್ಲದೇ ನಂಬುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದೀಪಕ್ ಚಕ್ರವರ್ತಿ ಪೇಟಿಎಂ ಬಿಸಿನೆಸ್ ಆಪ್ ಇನ್ಸ್ಟಾಲ್ ಮಾಡಿಸುವ ಹೆಸರಿನಲ್ಲಿ ಅನೇಕರಿಂದ ಹಣ ಪಡೆದು ದೋಖಾ ಮಾಡಿದ್ದಾನೆ. ಆನ್ಲೈನ್ ಆಫರ್ಗಳ ಹೆಸರಿನಲ್ಲಿ ಸೈಬರ್ ವಂಚಕರು ವಂಚನೆಗೆ ಇಳಿದಿದ್ದು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ.
ಕುಡಿದ ಅಮಲಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ:
ಕುಡಿದ ಅಮಲಿನಲ್ಲಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೊಬ್ಬನಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಸರಘಟ್ಟ ಮುಖ್ಯ ರಸ್ತೆಯ ಬಾಗಲಗುಂಟೆ ಬಾರ್ ಸಮೀಪ ಗಲಾಟೆ ನಡೆದಿದ್ದು, ಮೋಹನ್ ಅಲಿಯಾಸ್ ಮುಂಗಸಿ ಎಂಬಾತ ಮೃತಪಟ್ಟಿದ್ದಾನೆ. ಹದಿನೆಂಟು ವರ್ಷದಿಂದ ಬಾಗಲಗುಂಟೆಯಲ್ಲಿ ಮೋಹನ್ ನೆಲೆಸಿದ್ದ. ಎಂದಿನಂತೆ ಕೆಲಸ ಮುಗಿಸಿ ಕುಡಿಯಲೆಂದು ಬಾಗಲಗುಂಟೆ ಬಾರ್ಗೆ ಸ್ನೇಹಿತರ ಜತೆ ಹೋಗಿದ್ದ. ಕ್ಷುಲ್ಲಕ ವಿಚಾರಕ್ಕೆ ನಾಲ್ಕು ಸ್ನೇಹಿತರ ಜತೆ ಜಗಳ ಉಂಟಾಗಿದೆ.
ಪವರ್, ಕಿಶೋರ್, ಮುಂಗಸಿ ಹಾಗೂ ಮತ್ತೊಬ್ಬ ವ್ಯಕ್ತಿ ನಡುವೆ ಜಗಳ ಆಗಿದೆ. ಈ ವೇಳೆ ಮೋಹನ್ಗೆ ಮೂವರು ಹಲ್ಲೆ ಮಾಡಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ಕಿಶೋರ್ನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recommended Video