ನಕಲಿ ಪೊಲೀಸರ ಗ್ಯಾಂಗ್ ಸೃಷ್ಟಿಸಿ ಸ್ನೇಹಿತನ ಬಳಿ ಸುಲಿಗೆ ಮಾಡಿಸಿದ್ದ ಆಪ್ತಮಿತ್ರ !
ಬೆಂಗಳೂರು, ಜೂ. 02: ಪೊಲೀಸರ ಸೋಗಿನಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನನ್ನು ಅಡ್ಡಗಟ್ಟಿ ಬೈಕ್ ಹಾಗೂ ಎಟಿಎಂ ಕಾರ್ಡ್ ಕಸಿದುಕೊಂಡು ಹಣ ಪಡೆದು ಹಂಚಿಕೊಂಡಿದ್ದ ನಕಲಿ ಪೊಲೀಸ್ ಗ್ಯಾಂಗ್ನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ದೂರುದಾರನ ಬಳಿ ಹಣ ಇರುವ ವಿಚಾರ ಗೊತ್ತಿದ್ದ ಆಪ್ತ ಸ್ನೇಹಿತನೇ ರೂಪಿಸಿದ್ದ ಪ್ಲಾನ್ನಂತೆ ನಕಲಿ ಪೊಲೀಸರ ಕಾರ್ಯಾಚರಣೆ ನಡೆಸಿ ವಂಚನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬಸವೇಶ್ವರನಗರದ ಸಿವಿಎಲ್ ಇಂಜಿನಿಯರ್ ಶರತ್ ಶೆಟ್ಟಿ, ಬಿಇ ಇಂಜಿನಿಯರಿಂಗ್ ಓದುತ್ತಿರುವ ಪೂರ್ವಿಕ್ ರಾಜ್, ಕಂಪ್ಯೂಟರ್ ಆಪರೇಟರ್ ಮೋಹನ್ ಕುಮಾರ್ ಹಾಗೂ ದೂರುದಾರನ ನೆಚ್ಚಿನ ಗೆಳೆಯ ತಪನ್ ರಾಯ್ ಬಂಧಿತ ಅರೋಪಿಗಳು. ಇವರ ಪೊಲೀಸರ ಸೋಗಿನಲ್ಲಿ ಕದ್ದಿದ್ದ ಬೈಕ್ ಹಾಗು ಎಟಿಎಂ ಕಾರ್ಡ್ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.
ನಡೆದಿದ್ದೇನು?: ಪಶ್ಚಿಮ ಬಂಗಾಳ ಮೂಲದ ತಪನ್ ಬಿಸ್ವಾಸ್ ಬಾರ್ ಬೈಂಡಿಗ್ ಕೆಲಸ ಮಾಡುತ್ತಿದ್ದ. ತಲಘಟ್ಟಪುರದ ಸಮೀಪ ಗೆಳೆಯ ತಪಸ್ ರಾಯ್ ಜತೆಗಿದ್ದ. ಮೇ. 30 ರಂದು ತಪನ್ ಬಿಸ್ವಾಸ್ ನನ್ನು ಪುಸಲಾಯಿಸಿ ನೈಸ್ ರಸ್ತೆಗೆ ಕರೆದುಕೊಂಡು ಬಂದಿದ್ದ. ಮಫ್ತಿಯಲ್ಲಿರುವ ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ತಪನ್ ಬಿಸ್ವಾಸ್ ಬೈಕ್ ಅಡ್ಡಗಟ್ಟಿದ್ದರು. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದೀಯ ಎಂದು ಹೆದರಿಸಿ ಆತನ ಬೈಕ್ ಹಾಗೂ ಜೇಬಿನಲ್ಲಿದ್ದ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಪಡೆದುಕೊಂಡಿದ್ದರು. ಬ್ಯಾಂಕ್ ಖಾತೆ ಪಿನ್ ವಿವರ ಪಡೆದುಕೊಂಡಿದ್ದರು. ನಾಳೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಂದು ಅಸಲಿ ದಾಖಲೆ ನೀಡಿದರೆ ಮಾತ್ರ ಬೈಕ್ ಹಾಗೂ ಮೊಬೈಲ್ ಕೊಡುವುದಾಗಿ ಹೇಳಿದ್ದರು.
ಮರುದಿನ ತನ್ನ ಗೆಳೆಯ ತಪಸ್ ರಾಯ್ ಜತೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಹೋಗಿ ತಪನ್ ಬಿಸ್ವಾಸ್ ಪರಿಶೀಲಿಸಿದಾಗ ಅಲ್ಲಿ ಬೈಕ್ ಇರಲಿಲ್ಲ. ಪೊಲೀಸರು ದಾಖಲೆ ಪರಿಶೀಲಿಸಿ ಅಂತಹ ಹೆಸರಿನ ಪೊಲೀಸರು ನಮ್ಮಲ್ಲಿ ಇಲ್ಲ ಅಂತ ಹೇಳಿದ್ದರು. ಬರಿ ಗೈಯಲ್ಲಿ ತೆರಳಿದ್ದ ತಪನ್ ಬಿಸ್ವಾಸ್ ಮರುದಿನ ಬೆಳಗ್ಗೆ ಘಟನೆ ನಡೆದ ಕೆಂಗೇರಿ ಪೊಲೀಸರಿಗೆ ನಾಲ್ವರು ನಕಲಿ ಪೊಲೀಸರ ಕಾರ್ಯಾಚರಣೆ ಬಗ್ಗೆ ದೂರು ನೀಡಿದ್ದ. ದೂರಿನ ಆಧಾರದ ಮೇಲೆ ಸಿಸಿಟಿವಿ ದೃಶ್ಯ ಪಡೆದು ಪರಿಶೀಲನೆ ನಡೆಸಿದ್ದರು. ಇದೇ ವೇಳೆ ತಪನ್ ಬಿಸ್ವಾಸ್ ಬ್ಯಾಂಕ್ ಖಾತೆಯಲ್ಲಿದ್ದ 80 ಸಾವಿರ ರೂ. ಹಣವನ್ನು ಎಗರಿಸಿದ್ದರು. ಯುಕೋ ಬ್ಯಾಂಕ್ ನಿಂದ ಕೆನರಾ ಬ್ಯಾಂಕ್ ಗೆ ವರ್ಗಾವಣೆ ಮಾಡಿಕೊಂಡಿದ್ದರು. ಅಲ್ಲದೇ ಹತ್ತು ಸಾವಿರ ಹಣವನ್ನು ಎಟಿಎಂ ನಲ್ಲಿ ಡ್ರಾ ಮಾಡಿದ್ದರು. ಈ ಕುರಿತ ಮಾಹಿತಿ ಕಲೆ ಹಾಕಿದ ಕೆಂಗೇರಿ ಪೊಲೀಸರು ಎಟಿಎಂ ಸೆಂಟರ್ ಸಿಸಿಟಿವಿ ಫೂಟೇಜ್ ತೆಗೆದು ಪರಿಶೀಲನೆ ನಡೆಸಿದ್ದರು. ಆಗ ನಾಲ್ವರು ಆರೋಪಿಗಳ ಭಾವಚಿತ್ರಗಳು ಸಿಕ್ಕಿತ್ತು.
ಇದರ ಜಾಡು ಹಿಡಿದು ಆರೋಪಿತರ ಬ್ಯಾಂಕ್ ಖಾತೆ ವಿವರ ಪಡೆದು ಪರಿಶೀಲಿಸಿದಾಗ ಬಸವೇಶ್ವರ ನಗರದ ಸಿವಿಎಲ್ ಇಂಜಿನಿಯರ್ ಶರತ್ ಶೆಟ್ಟಿ ವಿವರ ಸಿಕ್ಕಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.
Recommended Video
ತಪನ್ ಬಿಸ್ವಾಸ್ ಜತೆಗಿದ್ದ ತಪನ್ ರಾಯ್ ಎಂಬಾತನೇ ಸಂಚು ರೂಪಿಸಿದ್ದ. ಬಿಸ್ವಾಸ್ ಬಳಿ ಹಣ ಇರುವುದನ್ನು ತಿಳಿದಿದ್ದ ರಾಯ್, ಅದನ್ನು ಎಗರಿಸುವ ಸಲುವಾಗಿ ತನಗೆ ಪರಿಚಿತ ಶರತ್ ಗೆ ವಿವರ ನೀಡಿದ್ದ. ಇದಕ್ಕಾಗ ನಕಲಿ ಪೊಲೀಸರ ಸೋಗಿನಲ್ಲಿ ಕಾರ್ಯಾಚರಣೆ ಮಾಡುವ ಪ್ಲಾನ್ ರೂಪಿಸಿ ಕಾರ್ಯಗತಗೊಳಿಸಿದ್ದಾರೆ. ತನಗೇನು ಗೊತ್ತೇ ಇಲ್ಲ ಎಂಬಂತೆ ಬಿಸ್ವಾಸ್ ಜತೆಗೆ ಇದ್ದ ತಪನ್ ರಾಯ್ ಈ ಕೃತ್ಯದ ಸಂಚು ರೂಪಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಾಲ್ವರು ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ತನ್ನ ಜತೆಗೆ ಇದ್ದ ಆಪ್ತ ಗೆಳೆಯನೇ ಸಂಚು ರೂಪಿಸಿ ಕಾರ್ಯಗತ ಗೊಳಿಸಿರುವುದು ಬೆಚ್ಚಿ ಬೀಳಿಸುವಂತಿದೆ. ಬಿಸ್ವಾಸ್ ನೀಡಿದ ದೂರಿನ ಮೇರೆಗೆ ಎಲ್ಲರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರು ಮುಂದಾಗಿದ್ದಾರೆ.