ತಾರಾಲಯಕ್ಕೂ ಕೊವಿಡ್ 19 ನಿರ್ಬಂಧ, Live Web Castಗೆ ಮೊರೆ
ಬೆಂಗಳೂರು, ಜೂನ್ 21: ಸೌರವ್ಯೂಹ ಅಪರೂಪದ ವಿದ್ಯಮಾನಕ್ಕಾಗಿ ಕಾದಿದ್ದ ಬೆಂಗಳೂರಿಗರಿಗೆ ಕೊಂಚ ನಿರಾಶೆಯಾಗಿದೆ. ಖಗೋಳವಿಜ್ಞಾನ ಆಸಕ್ತರು ಎಂದಿನಂತೆ ನೆಹರೂ ತಾರಾಲಯಕ್ಕೆ ಆಗಮಿಸಿ ಟೆಲಿಸ್ಕೋಪ್ ಮೂಲಕ ಗ್ರಹಣ ನೋಡಲು ಉತ್ಸುಕರಾಗಿದ್ದರು. ಆದರೆ, ಕೊರೊನಾವೈರಸ್ ಸೋಂಕು ಭೀತಿ, ನಿರ್ಬಂಧದಿಂದಾಗಿ ತಾರಾಲಯದ ಆವರಣದಲ್ಲಿ ಈ ಬಾರಿ ಗ್ರಹಣ ವೀಕ್ಷಣೆ ಸೌಲಭ್ಯವಿರಲಿಲ್ಲ. ಇದರ ಬದಲಿಗೆ ಲೈವ್ webcast ಮಾಡಲಾಗಿದೆ.
ಜೂನ್ 21ರಂದು ಸೂರ್ಯಗ್ರಹಣ ಸಂಭವಿಸಿದ್ದು, ಬೆಂಗಳೂರಿನ ಅನೇಕ ಕಡೆಗಳಲ್ಲಿ ಚೆನ್ನಾಗಿ ಕಾಣಿಸಿದೆ. ಕೆಲವೆಡೆ ಮೋಡದ ಕಾರಣ ಸ್ಪಷ್ಟವಾಗಿ ಗೋಚರಿಸಿಲ್ಲ. ದೇಶದ ಹಲವೆಡೆ ರಿಂಗ್ ಆಫ್ ಫೈರ್ ಕಾಣಸಿಕ್ಕಿರುವುದು ಸಂತೋಷದ ವಿಷಯ ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ತಿಳಿಸಿದರು.
ಜೂನ್ 21, 2020ಕ್ಕೆ ಜಗತ್ತೇ ನಾಶ-ಮಾಯನ್ ಕ್ಯಾಲೆಂಡರ್ ಭವಿಷ್ಯ!
ಬೆಂಗಳೂರಿನಲ್ಲಿ ಜೂನ್ 21ರಂದು ಬೆಳಗ್ಗೆ 10.12 ರಿಂದ 1.31ರ ಅವಧಿಯಲ್ಲಿ ಗ್ರಹಣ ಗೋಚರಿಸಿದೆ. ಬೆಂಗಳೂರಿಗೆ 36 ರಿಂದ 40% ಗ್ರಹಣದ ಚಿತ್ರ ಲಭಿಸಿದೆ. ನೈಋತ್ಯ ಮಾರುತಗಳ ಕೃಪೆ ಇದ್ದಿದ್ದರಿಂದ ಸೂರ್ಯನ ಪ್ರಖರತೆ ಸ್ಪಷ್ಟವಾಗಿ ಗೋಚರಿಸಿದೆ. ಗ್ರಹಣ ವೀಕ್ಷಕರ ಅನುಕೂಲಕ್ಕಾಗಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಸೂರ್ಯ, ಚಂದ್ರ ಹಾಗೂ ಭೂಮಿ ನಡುವಿನ ಈ ನೆರಳು ಬೆಳಕಿನಾಟ ಹೇಗಿತ್ತು ಎಂಬುದನ್ನು ಲೈವ್ ವೆಬ್ ಕಾಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಸಂಪೂರ್ಣ ಅವಧಿಯಲ್ಲಿ ಹೇಗೆಲ್ಲ ಕಾಣಿಸಿತು ಎಂಬುದನ್ನು ನೋಡಬಹುದು ಎಂದು ನಿರ್ದೇಶಕ ಗಲಗಲಿ ಹೇಳಿದರು.
ಉಂಗುರಾಕಾರದಲ್ಲಿ ಸೂರ್ಯನನ್ನು ಗೋಚರಿಸುವಂತೆ ಮಾಡುವ ಗ್ರಹಣವನ್ನು 'ರಿಂಗ್ ಆಫ್ ಫೈರ್' ಎಂದೂ ಕರೆಯಲಾಗುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆಗ ಸೂರ್ಯನ ಸುತ್ತಲೂ ಉಂಗುರಾಕಾರದ ಬೆಳಕು ಕಾಣಿಸುತ್ತದೆ. ಸೂರ್ಯಗ್ರಹಣ ಆಗಾಗ್ಗೆ ಸಂಭವಿಸುತ್ತಿದ್ದರೂ, ಸೂರ್ಯನಿಗಿಂತ ತುಸು ಸಣ್ಣನೆ ಎದುರಾಗುವ ಚಂದ್ರನ ಸುತ್ತಲಿನಿಂದ ಬರುವ ಬೆಳಕು ಉಂಗುರವನ್ನು ಸೃಷ್ಟಿಸುತ್ತದೆ. ಈ ವಿದ್ಯಮಾನವನ್ನು ಬರಿಗಣ್ಣಿನಿಂದ ವೀಕ್ಷಿಸುವುದು ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗಿದೆ.
ಸೂರ್ಯಗ್ರಹಣದಲ್ಲಿ ಖಗ್ರಾಸಗ್ರಹಣ (ಪೂರ್ಣ ಪ್ರಮಾಣದ ಗ್ರಹಣ) ಹಾಗೂ ಕಂಕಣಗ್ರಹಣ (ಭಾಗಶಃ ಗ್ರಹಣ) ಎಂಬ ಎರಡು ಬಗೆ ಇವೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ ಪೂರ್ಣ ಆವರಿಸಿದ ಬಳಿಕ ರಿಂಗ್ ಆಫ್ ಫೈರ್ ಕಾಣಿಸುತ್ತದೆ. ಪ್ರಖರಿಸುವ ಗುಂಡನೆಯ ಸೂರ್ಯ, ಗ್ರಹಣ ಆವರಿಸಿದ ಸಂದರ್ಭದಲ್ಲಿ ಚಿನ್ನದ ಹೊಳಪಿನ ಉಂಗುರದಂತೆ ಗೋಚರಿಸುತ್ತಾನೆ. ಈ ಬಾರಿ ಪೂರ್ಣ ಪ್ರಮಾಣದ ಉಂಗುರಾಕಾರದ(annulus) ಗ್ರಹಣ ಗೋಚರಿಸಲಿದೆ.