ಎಚ್ಡಿ ಕುಮಾರಸ್ವಾಮಿಗೆ ದೀಪಾವಳಿ ಗೀಫ್ಟ್: ಪ್ರಕರಣದಿಂದ ಬಿಗ್ ರಿಲೀಫ್
ಬೆಂಗಳೂರು, ನವೆಂಬರ್ 13: ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರಿಗೆ ದೀಪಾವಳಿ ಹಬ್ಬದಂದು ಶುಭ ಸುದ್ದಿ ಸಿಕ್ಕಿದೆ. ಅವರ ವಿರುದ್ಧ ಪ್ರಕರಣದಿಂದ ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಚುನಾವಣಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದರೆ ಎಂದು ಎಚ್ಡಿ ಕುಮಾರಸ್ವಾಮಿ ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪ್ರಕರಣದ ದೂರನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿ ಆದೇಶಿಸಿದೆ.

ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿದ್ದ ಎಸ್.ಆನಂದ ಎಂಬುವವರು ಕುಮಾರಸ್ವಾಮಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಅವರ ದೂರನ್ನು ನ್ಯಾಯಾಲಯ ರದ್ದುಗೊಳಿಸುವ ಮೂಲಕ ಬಿಗ್ ರಿಲಿಫ್ ನೀಡಿದೆ.
ಚುನಾವಣಾಧಿಕಾರಿಗಳಿಗೆ ಎಚ್ಡಿ ಕುಮಾರಸ್ವಾಮಿ ಅವರು ತಮ್ಮ ಎರಡನೇ ಪತ್ನಿ ವಿವರಗಳನ್ನು ಮತ್ತು ಮಕ್ಕಳ ಮಾಹಿತಿಯನ್ನು ಚುನಾವಣಾ ಪ್ರಮಾಣದಲ್ಲಿ ಪತ್ರದಲ್ಲಿ ತಿಳಿಸಿಲ್ಲವೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಕಾಯ್ದೆಯ ಉಲ್ಲಂಘನೆ ಆಗಿಲ್ಲ: ಕೋರ್ಟ್
ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಮೊದಲ ಪತ್ನಿ ಜೀವಿತಾವಧಿಯಲ್ಲಿ ಎರಡನೇ ಪತ್ನಿಯ ವಿವಾಹಕ್ಕೆ ಅವಕಾಶ ಇಲ್ಲ. ಅಲ್ಲದೇ ಚುನಾವಣೆ ಪತ್ರದಲ್ಲಿ ಮಕ್ಕಳ ಮಾಹಿತಿ ನೀಡಲೇಬೆಂಬ ನಿಯಮವು ಇಲ್ಲ.ಹೀಗಾಗಿ ಪ್ರಕರಣದಲ್ಲಿ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125ಎ ಉಲ್ಲಂಘನೆ ಆಗಿಲ್ಲ ಎಂದು ತಿಳಿಸಿ ಕೋರ್ಟ್ ದೂರನ್ನು ರದ್ದು ಮಾಡಿತು ಎಂದು ಟಿವಿ ನೈನ್ ವರದಿ ಮಾಡಿದೆ.
ಸದ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಎಚ್ಡಿ ಕುಮಾರಸ್ವಾಮಿ ಅವರು ಕರ್ನಾಟಕ ಮುಖ್ಯಮಂತ್ರಿಗಳು ನೋಟಿಸ್ ಪಿರಿಯಡ್ ನಲ್ಲಿದ್ದಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಈ ಸ್ಥಾನದಲ್ಲಿ ಮುಂದುವರಿಯಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಸಿಎಂ ಟೆಂಪರರಿ, ಡಿಸಿಎಂ ಡೂಪ್ಲಿಕೇಟ್ ಎಂದು ಅವರು ಕಿಡಿ ಕಾರಿದ್ದರು.

ಕಾಂಗ್ರೆಸ್ ಸರ್ಕಾರ ಪಂಚ ರಾಜ್ಯ ಚುನಾವಣೆಗಳಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಹಿಡಿಯಲು ಹೊರಟಿದೆ. ಕರ್ನಾಟಕದಲ್ಲಿಯೇ ಇವರ ಗ್ಯಾರಂಟಿಗಳು ಯಶಸ್ವಿಯಾಗಿಲ್ಲ, ವಿಫಲಗೊಂಡಿವೆ ಎಂದು ಆರೋಪಿಸಿದ್ದರು.
ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಕುಮಾರಸ್ವಾಮಿವರಿಗೂ ಗ್ಯಾರೆಂಟಿಗಳಿಗೂ ಸಂಬಂಧವಿಲ್ಲ. ಅವರು ತಮ್ಮ ಪಂಚರತ್ನ ಯೋಜನೆ ಜಾರಿಗೆ ಸಾಧ್ಯವಾಗದಿದ್ದಕ್ಕೆ ಹತಾಶರಾಗಿ ಹೀಗೆ ಮಾತನಾಡುತ್ತಿದ್ದಾರೆ. ನಮ್ಮ ಉಚಿತ ಯೋಜನೆಗಳ ಬಗ್ಗೆ ಚೆನ್ನಪಟ್ಟಣ ಜನರನ್ನು ಕೇಳಿ ಎಂದು ಸವಾಲು ಹಾಕಿದರು.
ಯೋಜನೆ ಜಾರಿಗೆ ಕೆಲವು ತಾಂತ್ರಿಕ ಅಡಚಣೆಗಳು ಎದುರಾಗಿದ್ದು, ಅವುಗಳನ್ನು ಸರಿಪಡಿಸಿ ಯೋಜನೆಗಳನ್ನು ಜನರಿಗೆ ಮುಟ್ಟಿಸುತ್ತೇವೆ ಎಂದು ಡಿಕೆಶಿ ಗುಡುಗಿದರು.












Click it and Unblock the Notifications