ಕೊರೊನಾದಿಂದ ದೇವಾಲಯಗಳಿಗೆ ಬೀಗ: ಸಂಕಟ ಬಂದರೂ ವೆಂಕಟರಮಣ ಅನ್ನಂಗಿಲ್ಲ!
ಬೆಂಗಳೂರು, ಮಾರ್ಚ್ 11: 'ಸಂಕಟ ಬಂದಾಗ ವೆಂಕಟರಮಣ' ಎಂಬ ಗಾದೆ ಮಾತಿದೆ. ಕಷ್ಟ ಕಾಲ ಬಂದಾಗಲೇ ಜನರಿಗೆ ದೇವರ ನೆನಪಾಗುವುದು ಎಂಬುದು ಈ ಗಾದೆಯ ಅರ್ಥ. ಆದ್ರೀಗ, ಇಡೀ ವಿಶ್ವದಲ್ಲಿ ಕೊರೊನಾ ಕಾರ್ಮೋಡ ಕವಿದಿದೆ. ಭಾರತದಲ್ಲೂ ಕೊರೊನಾ ಕರಿನೆರಳು ಆವರಿಸಿದೆ.
ಕರ್ನಾಟಕದ ನಾಲ್ಕು ಮಂದಿಗೆ ಕೊರೊನಾ ಸೋಂಕು ತಗುಲಿದೆ. ''ಹೇಗಾದರೂ ಮಾಡಿ ಈ ಕೊರೊನಾ ಸೋಂಕನ್ನು ದಯವಿಟ್ಟು ತೊಲಗಿಸಪ್ಪಾ'' ಅಂತ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದು ಹರಕೆ ಕಟ್ಟೋಣ ಅಂದ್ರೆ.. ಈಗ ಅದೂ ಸಾಧ್ಯವಾಗುತ್ತಿಲ್ಲ.!
ಕೊರೊನಾ ಸಂಕಟ ಬಂದಿದ್ದರೂ, ಜನರು ವೆಂಕಟರಮಣ ಅಂತ ಹೇಳಲು ಆಗುತ್ತಿಲ್ಲ. ಕಾರಣ ಕೊರೊನಾ ಕಂಟಕದಿಂದಾಗಿ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ಬೀಗ ಬಿದ್ದಿದೆ. ದೇವರ ದರ್ಶನವನ್ನು ನಿಷೇಧಿಸಲಾಗಿದೆ. ಸಿಲಿಕಾನ್ ಸಿಟಿಯ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ, ಹೋಮ-ಹವನ, ಪ್ರಸಾದ ವಿತರಣೆಗೆ ಬ್ರೇಕ್ ಬಿದ್ದಿದೆ.

ಭಕ್ತಾದಿಗಳಿಗೆ ದೇವರ ದರ್ಶನ ಇಲ್ಲ!
ಕರ್ನಾಟಕದಲ್ಲಿ ಕೊರೊನಾದಿಂದ ಆತಂಕ ಹೆಚ್ಚಾಗಿರುವ ಕಾರಣ, ಬೆಂಗಳೂರಿನ ಬಹುತೇಕ ದೇವಸ್ಥಾನಗಳನ್ನು ಮುಚ್ಚಲಾಗಿದೆ. ಕೊರೊನಾ ಭಯದಿಂದಾಗಿ ದೇವಾಲಯಗಳಿಗೆ ಬೇಗ ಹಾಕಿರುವುದರಿಂದ, ಭಕ್ತಾದಿಗಳಿಗೆ ದೇವರ ದರ್ಶನದ ಭಾಗ್ಯ ಸಿಗುತ್ತಿಲ್ಲ.

ಯಾವ್ಯಾವ ದೇಗುಲಗಳಿಗೆ ಬಾಗಿಲು?
ಬೆಂಗಳೂರಿನ ಬನಶಂಕರಿ ದೇವಸ್ಥಾನ, ಯಡಿಯೂರು ದೇವಾಲಯ, ಗವಿಗಂಗಾಧರೇಶ್ವರ ದೇಗುಲ, ಕಾಡು ಮಲ್ಲೇಶ್ವರ ಸನ್ನಿಧಿ ಸೇರಿದಂತೆ ಪ್ರತಿ ನಿತ್ಯ ಹೆಚ್ಚು ಭಕ್ತಾದಿಗಳು ಭೇಟಿ ಕೊಡುವ ಬಹುತೇಕ ಎಲ್ಲಾ ದೇವಾಲಯಗಳಿಗೂ ಬಾಗಿಲು ಹಾಕಲಾಗಿದೆ.

ಪ್ರಸಾದ ವಿತರಣೆ ಇಲ್ಲ
ದೇವಸ್ಥಾನಗಳಲ್ಲಿ ಜನಸಂದಣಿ ಜಾಸ್ತಿ ಇರುವ ಕಾರಣ, ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಹಲವು ದೇವಾಲಯಗಳಲ್ಲಿ ಅನ್ನ ಸಂತರ್ಪಣೆ, ಪ್ರಸಾದ ವಿತರಣೆಯನ್ನೂ ಸ್ಥಗಿತಗೊಳಿಸಲಾಗಿದೆ.

ಅಯ್ಯಪ್ಪ ದೇವಾಲಯಕ್ಕೆ ದಯವಿಟ್ಟು ಬರಬೇಡಿ
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವು ಪ್ರತಿ ತಿಂಗಳು ಪೂಜೆಗೆಂದು ತೆರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಕೊರೊನಾ ವೈರಸ್ ಹರಡುವ ಭೀತಿಯಿಂದ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯು ಸಂದೇಶವನ್ನು ರವಾನಿಸಿದೆ. ಈ ಬಾರಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಪೂಜೆಗೆ ಭಕ್ತರು ಆಗಮಿಸದಂತೆ ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್.ವಾಸು ತಿಳಿಸಿದ್ದಾರೆ.

ಕಾಶಿ ವಿಶ್ವನಾಥನಿಗೂ ಮಾಸ್ಕ್!
ಕೊರೊನಾ ವೈರಸ್ ಎಲ್ಲೆಡೆ ಹಬ್ಬುತ್ತಿರುವುದರಿಂದ, ದೇವರ ಮೂರ್ತಿಯನ್ನು ಯಾರೂ ಕೈಯಲ್ಲಿ ಮುಟ್ಟಬಾರದು ಎನ್ನುವ ಕಾರಣಕ್ಕೆ ಪೂಜಾರಿಯೊಬ್ಬರು ವಾರಾಣಸಿಯ ಕಾಶಿ ವಿಶ್ವನಾಥ ದೇವರ ಮೂರ್ತಿಗೂ ಮಾಸ್ಕ್ ಹಾಕಿದ್ದಾರೆ.

ತಿರುಪತಿಗೆ ಬರುವ ಭಕ್ತಾದಿಗಳಿಗೆ ಸೂಚನೆ
ಜ್ವರ, ನೆಗಡಿ, ಕೆಮ್ಮು ಇರುವ ಭಕ್ತಾದಿಗಳು ಸದ್ಯಕ್ಕೆ ತಿರುಪತಿ ದೇವಸ್ಥಾನಕ್ಕೆ ಬರುವುದು ಬೇಡ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ತಿಳಿಸಿದೆ. ತಿರುಪತಿಯಲ್ಲಿ ಪ್ರತಿ ದಿನ ಸಾವಿರಾರೂ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಾರೆ. ಹೀಗಾಗಿ, ಒಬ್ಬರಿಂದ ಒಬ್ಬರಿಗೆ ವೈರಸ್ ಹರಡಿದರೆ ಕಷ್ಟ ಎಂದು ಈ ನಿಯಮ ಪಾಲಿಸಲಾಗುತ್ತಿದೆ.

ಗೋಕರ್ಣ, ಮುರ್ಡೇಶ್ವರದಲ್ಲಿ ಜನರೇ ಇಲ್ಲ.!
ಕೊರೊನಾ ಕರಿಛಾಯೆಯಿಂದಾಗಿ ಗೋಕರ್ಣ ಮತ್ತು ಮುರ್ಡೇಶ್ವರ ದೇವಾಲಯಗಳಿಗೂ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಮಾರ್ಚ್ ತಿಂಗಳಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಗೋಕರ್ಣ ಮತ್ತು ಮುರ್ಡೇಶ್ವರದಲ್ಲಿ ಈ ಬಾರಿ ಜನರೇ ಇಲ್ಲ.












Click it and Unblock the Notifications