ಕೊರೊನಾ ಕಳವಳದ ನಡುವೆ ಬಿಬಿಎಂಪಿ ಅಧಿಕಾರಿಗಳಲ್ಲಿ ಇದೆಂಥಾ ಕಿತ್ತಾಟ?
ಬೆಂಗಳೂರು, ಮಾರ್ಚ್.13: ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಅನ್ನೋ ಗಾದೆಮಾತುನ್ನು ಕೇಳಿದ್ದೀರಿ ಅಲ್ಲವೇ. ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಇದೀಗ ಬೆಕ್ಕಿನ ಚೆಲ್ಲಾಟವಾಗಿ ಬಿಟ್ಟಿದೆ. ಇಡೀ ರಾಜ್ಯವೇ ಕೊರೊನಾ ವೈರಸ್ ಕಾಟಕ್ಕೆ ಬೆಚ್ಚಿ ಬಿದ್ದಿದ್ದರೆ ಅಧಿಕಾರಿಗಳದ್ದು ಮಾತ್ರ ಆಡಿದ್ದೇ ಆಟ.
ರಾಜ್ಯ ಸರ್ಕಾರ ಈಗಾಗಲೇ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು ಆಗಿದೆ. ಅಂಗಡಿ ಮುಂಗಟ್ಟು, ಮಾಲ್, ಹೋಟೆಲ್, ಪಬ್ ಗಳನ್ನೆಲ್ಲ ಬಂದ್ ಮಾಡುವಂತೆ ಸ್ವತಃ ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶಿದ್ದು ಆಗಿದೆ.
Coronavirus Effect: ಕಲಬುರಗಿಯಲ್ಲಿ 46ಕ್ಕೂ ಅಧಿಕ ಮಂದಿ ಮೇಲೆ ನಿಗಾ
ಸಾರ್ವಜನಿಕ ಸಭೆ ಸಮಾರಂಭಗಳು, ಶಾದಿ ಮಾಲ್ ಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕೇ ಬೇಡವೇ ಎನ್ನುವುದು ಇದೀಗ ಬಿಬಿಎಂಪಿ ಹಾಗೂ ಆರೋಗ್ಯ ವಿಭಾಗದ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿ ಬಿಟ್ಟಿದೆ.
ಮೊದಲು ಬಿಬಿಎಂಪಿಯಿಂದ ನೋಟಿಸ್ ಜಾರಿ
ಬೆಂಗಳೂರಿನ ಹೋಟೆಲ್, ಶಾದಿ ಮಾಲ್, ಸ್ಟಾರ್ ಹೋಟೆಲ್ ಗಳಲ್ಲಿ ಯಾವುದೇ ರೀತಿ ಸಭೆ, ಸಮಾರಂಭ, ಮದುವೆಗಳಿಗೆ ಅವಕಾಶ ನೀಡುವಂತಿಲ್ಲ. ಅತಿಹೆಚ್ಚು ಜನರು ಸೇರುವಂತಾ ಯಾವುದೇ ಕಾರ್ಯಕ್ರಮಗಳು ಹೋಟೆಲ್ ಗಳಲ್ಲಿ ನಡೆಸಲು ಅನುಮತಿ ನೀಡಬಾರದು ಎಂದು ಬಿಬಿಎಂಪಿ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಅಂಗಡಿ ತೆರೆದರೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ
ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಸ್ಟಾರ್ ಹೋಟೆಲ್ ಗಳು ಮತ್ತು ಶಾದಿ ಮಾಲ್ ಗಳನ್ನು ತೆರೆಯಕೂಡದು. ಒಂದು ವೇಳೆ ಬಿಬಿಎಂಪಿ ಆದೇಶವನ್ನು ಉಲ್ಲೇಖಿಸಿದರೆ, ಮದುವೆ ಮತ್ತು ಸಭೆ ಸಮಾರಂಭಗಳಿಗೆ ಅವಕಾಶ ಕಲ್ಪಿಸಿಕೊಟ್ಟರೆ, ಅಂಶ ಹೋಟೆಲ್ ಗಳಿಗೆ ನೀಡಿದ ವಾಣಿಜ್ಯ ಪರವಾನಗಿ ಪತ್ರವನ್ನು ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ.
ಬಿಬಿಎಂಪಿ ಆಯುಕ್ತರಿಂದ ಉಲ್ಟಾ ನೋಟಿಸ್ ಜಾರಿ
ರಾಜ್ಯ ರಾಜಧಾನಿಯಲ್ಲಿ ಯಾವುದೇ ಸಭೆ ಸಮಾರಂಭಗಳನ್ನು ನಡೆಸದಿರಲು ಸೂಚಿಸುವ ಅಧಿಕಾರ ವೈದ್ಯಕೀಯ ಅಧಿಕಾರಿಗೆ ಇರುವುದಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯು ಯಾವುದೇ ಹೋಟೆಲ್, ಮಾಲ್ ಗಳಲ್ಲಿ ಕಾರ್ಯಕ್ರಮ ಮತ್ತು ಸಭೆ ಸಮಾರಂಭ ನಡೆಸದಂತೆ ಸೂಚನೆ ನೀಡಿಲ್ಲ ಎಂದು ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ.
ಬಿಬಿಎಂಪಿ ಮತ್ತು ವೈದ್ಯಕೀಯ ಅಧಿಕಾರಿ ನಡುವೆ ಕಿತ್ತಾಟ
ಬೆಂಗಳೂರು ಮಹಾನಗರ ಪಾಲಿಕೆಯು ಯಾವುದೇ ಹೋಟೆಲ್ ಮತ್ತು ಶಾದಿ ಮಾಲ್ ಗಳಲ್ಲಿ ಕಾರ್ಯಕ್ರಮಗಳನ್ನು ನಡೆಸದಂತೆ ನೋಟಿಸ್ ಜಾರಿಗೊಳಿಸಿಲ್ಲ. ಒಂದು ವೇಳೆ ಅಂಥ ಪರಿಸ್ಥಿತಿ ಎದುರಾದಲ್ಲಿ ಪಾಲಿಕೆಯೇ ಸೂಚನೆಯನ್ನು ನೀಡುತ್ತದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.