ಬೆಂಗಳೂರಿನಲ್ಲಿ ಬಡವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಫ್ರೀ.. ಫ್ರೀ.. ಫ್ರೀ..!
ಬೆಂಗಳೂರು, ಜೂನ್.01: ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಡಿಜಿಟಲ್ ರೂಪ ಕೊಟ್ಟು ಮೇಲ್ದರ್ಜೆಗೇರಿಸುವುದು ಸೇರಿದಂತೆ 65 ವಾರ್ಡ್ ಗಳಲ್ಲಿ ಹೊಸ ಆರೋಗ್ಯ ಕೇಂದ್ರ ಸ್ಥಾಪಿಸಲು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೇಯರ್ ಗೌತಮಕುಮಾರ್, ಉಪ ಮೇಯರ್ ಮೋಹನರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಪಾಲಿಕೆ ಆಯುಕ್ತ ಅನಿಲಕುಮಾರ್ ಸೇರಿದಂತೆ ಆರೋಗ್ಯ ವಿಭಾಗದ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.
ನಗರದ ಒಟ್ಟು 198 ವಾರ್ಡ್ ಗಳ ಪೈಕಿ 65 ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇಲ್ಲ. ಹೀಗಾಗಿ ತಕ್ಷಣ ಈ ವಾರ್ಡ್ ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಜಾಗ ಸಿಗದಿದ್ದರೆ ಬಾಡಿಗೆ ಕಟ್ಟಡಗಳಲ್ಲಿ ಆರಂಭಿಸುವುದಕ್ಕೆ ಉಪ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಕೂಡಾ ಒಪ್ಪಿದ್ದು, ತಕ್ಷಣ ಆ ಕೆಲಸ ಮಾಡುವ ಭರವಸೆ ನೀಡಿದರು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯದ ಅನೇಕ ಯೋಜನೆಗಳು ನಗರದಲ್ಲಿ ಚಾಲನೆಯಲ್ಲಿದ್ದು, ಒಂದೊಂದು ಯೋಜನೆಯ ಮಾಹಿತಿಯನ್ನೂ ಒಂದೊಂದು ರೀತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ರೋಗಿಗಳ ಮಾಹಿತಿ ಒಂದಕ್ಕೊಂದು ಜೋಡಣೆಯಾಗುತ್ತಿಲ್ಲ. ಹೀಗಾಗಿ ಎಲ್ಲ ಯೋಜನೆಗಳ ಮಾಹಿತಿಯನ್ನು ಒಂದೇ ಡಿಜಿಟಲ್ ವೇದಿಕೆಗೆ ತಂದು, ಆ ಪ್ರಕಾರ ಚಿಕಿತ್ಸೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಇನ್ನೊಂದು ತಿಂಗಳಿನಲ್ಲೇ ಡಿಜಿಚಟಲ್ ವ್ಯವಸ್ಥೆ
ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ತಂತ್ರಜ್ಞಾನದ ನೆರವು ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸ್ಟಾರ್ಟ್ ಅಪ್ ವಿಜನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ ಪ್ರಕಾಶ್ ನೇತೃತ್ವದ ತಂಡ ಮುಂದೆ ಬಂದಿದ್ದು, ಒಂದು ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.

ರೋಗಿಗಳ ಮಾಹಿತಿಯ ಕುರಿತು ಏಕರೂಪದ ಡ್ಯಾಷ್ ಬೋರ್ಡ್
ಬೆಂಗಳೂರು ನಗದಲ್ಲಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ರೋಗಿಯ ಮಾಹಿತಿಯನ್ನು ಸಂಗ್ರಹಿಸಿ, ಏಕರೂಪದ ಡ್ಯಾಷ್ ಬೋರ್ಡ್ ರೂಪಿಸಲಾಗುತ್ತದೆ. ಇದರಿಂದ ಯಾವ ಭಾಗದಲ್ಲಿ ಯಾವ ರೀತಿ ರೋಗಿಗಳು ಇದ್ದಾರೆ. ಅದಕ್ಕೆ ತಕ್ಷಣ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದಕ್ಕೂ ನೆರವಾಗಲಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಯಗಳ ಮಾಹಿತಿ ಕೂಡ ಬಿಬಿಎಂಪಿ ಡ್ಯಾಶ್ ಬೋರ್ಡ್ಗೆ ಸಿಗುವ ಹಾಗೆ ಮಾಡುತ್ತಿದ್ದು, ಕೋವಿಂಡ್-19ನಂತ ಸಾಂಕ್ರಾಮಿಕ ರೋಗಗಳು ಬಂದಾಗ ತಕ್ಷಣ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ ಎಂದು ಡಿಸಿಎಂ ತಿಳಿಸಿದರು.

ಆರೋಗ್ಯ ಸಂಬಂಧಿ ಮಾಹಿತಿ ಸಂಗ್ರಹಕ್ಕೆ ಟ್ಯಾಬ್
ಬೆಂಗಳೂರಿನಾದ್ಯಂತ ತ್ಯಾಜ್ಯ ನಿರ್ವಹಣೆಯ ಆರೋಗ್ಯ ಕಾರ್ಯಕರ್ತರನ್ನೂ ಕೂಡಾ ಆಶಾ ಕಾರ್ಯಕರ್ತರ ಹಾಗೆ ಆರೋಗ್ಯ ಸಂಬಂಧಿ ಮಾಹಿತಿ ಸಂಗ್ರಹಿಸಲು ಬಳಸಿಕೊಳ್ಳಲಾಗುವುದು. ಇದಕ್ಕಾಗಿ ಅಗತ್ಯ ವ್ಯವಸ್ಥೆಗಳ ಜೊತೆಗೆ ಟ್ಯಾಬ್ಗಳನ್ನೂ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.

ನಗರದ ಐದು ಕಡೆ ಕೇಂದ್ರೀಕೃತ ಆರೋಗ್ಯ ಕೇಂದ್ರ ಸ್ಥಾಪನೆ
ತಜ್ಞ ವೈದ್ಯರ ಚಿಕಿತ್ಸೆಯು ಬಡವರಿಗೂ ಸಿಗಬೇಕು ಎನ್ನುವ ಉದ್ದೇಶದಿಂದ ನಗರದ ಐದು ಕಡೆಗಳಲ್ಲಿ ಕೇಂದ್ರೀಕೃತ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರಗಳಲ್ಲಿನ ತಜ್ಞ ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಇ-ಕ್ಲಿನಿಕ್ಗಳ ಮೂಲಕ ರೋಗಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಿದ್ದಾರೆ. ಈ ಎಲ್ಲ ಆಧುನಿಕ ತಂತ್ರಜ್ಞಾನ ಮತ್ತು ವಿವಿಧ ರೀತಿಯ ತಜ್ಞರಿಂದ ಚಿಕಿತ್ಸೆ ಕೊಡುವ ಈ ಯೋಜನೆಗೆ ಬಿಬಿಎಂಪಿ ಹೆಲ್ತ್ ಕೇರ್ ಎಂದು ಹೆಸರಿಟ್ಟು, ಅದನ್ನೇ ಬ್ರ್ಯಾಂಡ್ ಮಾಡುವಂತೆ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸೂಚಿಸಿದರು. ಇದಕ್ಕೆ ಸಿಎಸ್ಆರ್ ನಿಧಿಯನ್ನೂ ಪಡೆದು, ಮತ್ತಷ್ಟು ಉತ್ಕೃಷ್ಟವಾದಂತಹ ಚಿಕಿತ್ಸಾ ಸೌಲಭ್ಯಗಳನ್ನು ಬಡವರಿಗೆ ಒದಗಿಸಬಹುದು ಎಂದರು.












Click it and Unblock the Notifications