ಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರೊನಾ: ಇನ್ನು 2 ತಿಂಗಳು ಇರಲಿ ಎಚ್ಚರ
ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದ ವಿವಿಧೆಡೆ ಪ್ರತಿದಿನವೂ ಅಧಿಕ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಮುಖ್ಯವಾಗಿ ರಾಜಧಾನಿ ಬೆಂಗಳೂರು ಕೋವಿಡ್ ಸೋಂಕಿನ ಹಾಟ್ಸ್ಪಾಟ್ ಆಗಿದೆ. ಪ್ರತಿನಿತ್ಯ 3,500ಕ್ಕೂ ಅಧಿಕ ಪ್ರಕರಣಗಳು ರಾಜಧಾನಿಯಲ್ಲಿ ವರದಿಯಾಗುತ್ತಿವೆ. ಅತಿ ವೇಗದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಬೆಂಗಳೂರು, ಅತ್ಯಂತ ಹೆಚ್ಚು ಕೋವಿಡ್ ಪ್ರಕರಣಗಳಿರುವ ಭಾರತದ ನಗರಗಳಲ್ಲಿ ದೆಹಲಿ ನಂತರದ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಶೇ 14ರಷ್ಟಿದೆ. ಇದು ದೆಹಲಿಯ ಶೇ 6.8ರ ಎರಡು ಪಟ್ಟಿದೆ. ಹಾಗೆಯೇ ದೇಶದ ಸರಾಸರಿ ಕೋವಿಡ್ ಪ್ರಕರಣಗಳಲ್ಲಿ ಶೇ 9ಕ್ಕಿಂತ ಹೆಚ್ಚಿದೆ. ದೆಹಲಿಯಲ್ಲಿ ಒಟ್ಟು 2,42,899 ಪಾಸಿಟಿವ್ ಪ್ರಕರಣಗಳಿದ್ದರೆ, 2,05,890 ಚೇತರಿಸಿಕೊಂಡಿದ್ದಾರೆ. 4945 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 1,94,760 ಪ್ರಕರಣಗಳು ವರದಿಯಾಗಿದ್ದು, 1,50,348 ಮಂದಿ ಚೇತರಿಸಿಕೊಂಡಿದ್ದಾರೆ. 2,658 ಮಂದಿ ಮರಣ ಹೊಂದಿದ್ದಾರೆ. ಮುಂಬೈ, ಚೆನ್ನೈ ಮತ್ತು ಕೋಲ್ಕತಾ ನಂತರದ ಸ್ಥಾನಗಳಲ್ಲಿವೆ. ಮುಂದೆ ಓದಿ...

ಇನ್ನೂ ಎರಡು ತಿಂಗಳು ಏರಿಕೆ
ಸೋಂಕು ತಜ್ಞರು ಮತ್ತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಪ್ರಕಾರ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಪ್ರಕರಣಗಳ ಏರಿಕೆ ಇನ್ನೂ ಕನಿಷ್ಠ ಎರಡು ತಿಂಗಳು ಮುಂದುವರಿಯಲಿದೆ. ಬೆಂಗಳೂರಿನಲ್ಲಿ ರೋಗ ನಿಯಂತ್ರಣ ಮಾಡುವುದು ಬಹಳ ದೊಡ್ಡ ಸವಾಲು. ಅದು ಅತ್ಯಂತ ವೇಗವಾಗಿ ಹರಡುತ್ತಿದೆ. ಕಳೆದ ಹತ್ತು ದಿನಗಳಲ್ಲಿ ನಗರದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 25,722 ಮಂದಿಯನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 21 ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಪ್ರಶಂಸೆಗೆ ಒಳಗಾಗಿದ್ದ ಬೆಂಗಳೂರು
ಆರಂಭದ ದಿನಗಳಲ್ಲಿ ಕೋವಿಡ್ ಸೋಂಕು ತಡೆಯುವ ವಿಚಾರದಲ್ಲಿ ಬೆಂಗಳೂರು ಬಹಳ ಪ್ರಶಂಸೆಗೆ ಒಳಗಾಗಿತ್ತು. ಆದರೆ, ಪರಿಸ್ಥಿತಿ ಬದಲಾಗಿದೆ. ಮುಖ್ಯವಾಗಿ ನಾಗರಿಕರು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
'ನಗರವು ತನ್ನ ಗುರಿಯನ್ನು ಕಳೆದುಕೊಳ್ಳುತ್ತಿರುವುದಕ್ಕಿಂತಲೂ ಹೆಚ್ಚಾಗಿ ವಿಭಿನ್ನ ವಲಯಗಳಲ್ಲಿ ವಿಭಿನ್ನ ಅವಧಿಗಳಲ್ಲಿ ಪ್ರಕರಣಗಳ ತುತ್ತತುದಿಗೆ ಹೋಗುತ್ತಿದೆ. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಬೆಂಗಳೂರಿನಲ್ಲಿನ ಪ್ರಕರಣಗಳು ಹೆಚ್ಚಾಗಲಿವೆ. ಮರಣ ಪ್ರಮಾಣವನ್ನು ಶೇ 1ಕ್ಕಿಂತ ಕಡಿಮೆಗೆ ತರುವುದು ಹೆಚ್ಚು ಸಮಸ್ಯೆಯ ಸಂಗತಿಯಾಗಿದೆ' ಎಂದು ಕೋವಿಡ್ ಕಾರ್ಯಪಡೆಯ ಸದಸ್ಯರಾಗಿರುವ ಡಾ. ಪಿ.ಜಿ. ಗಿರೀಶ್ ಹೇಳಿದ್ದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಚೆನ್ನೈ, ಮುಂಬೈ ಹಿಂದಿಕ್ಕಿದ ಬೆಂಗಳೂರು
ದೇಶದ ಇತರೆ ನಗರಗಳಲ್ಲಿ ಮೇ ಮಧ್ಯಭಾಗದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿದ್ದರೆ, ಬೆಂಗಳೂರಿನಲ್ಲಿ ಜುಲೈ ಮೂರನೇ ವಾರದಿಂದ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅದು ಈಗಾಗಲೇ ಚೆನ್ನೈ ಮತ್ತು ಮುಂಬೈಗಳನ್ನು ಹಿಂದಿಕ್ಕಿದೆ. ಜೂನ್ 30ರಂದು 4,904ರಷ್ಟಿದ್ದ ಬೆಂಗಳೂರಿನ ಪ್ರಕರಣ ಸೆ. 21ರ ವೇಳೆಗೆ 1.97ಲಕ್ಷಕ್ಕೆ ಏರಿದೆ.

ಗಂಭೀರತೆ ಮರೆತ ಜನರು
'ನಗರದಲ್ಲಿ ಜನರ ಓಡಾಟ ಹೆಚ್ಚಾಗಿದೆ. ಕೊರೊನಾ ವೈರಸ್ ಬಗ್ಗೆ ನಾವು ಇನ್ನೇನೂ ತಲೆಕೆಡಿಸಿಕೊಳ್ಳುವುದು ಇಲ್ಲ ಎಂಬ ಭಾವನೆ ಜನರಲ್ಲಿ ಮೂಡಿರುವಂತೆ ಅನಿಸುತ್ತಿದೆ. ಈ ಅವಧಿ ಬೆಂಗಳೂರಿಗೆ ಅತ್ಯಂತ ಮಹತ್ವದ್ದು. ಜನರು ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆಗಳನ್ನು ಗಂಭೀರವಾಗಿ ಅನುಸರಿಸುತ್ತಿಲ್ಲ ಎಂಬುದನ್ನು ನೋಡಿದಾಗ ಆತಂಕ ಮೂಡುತ್ತದೆ. ಹೆಚ್ಚಿನವರು ಸರಿಯಾಗಿ ಮಾಸ್ಕ್ಗಳನ್ನು ಧರಿಸುತ್ತಿಲ್ಲ. ದೊಡ್ಡ ಗುಂಪುಗಳಲ್ಲಿ ಸೇರುತ್ತಿದ್ದಾರೆ. ಸಣ್ಣ ಜಾಗಗಳಲ್ಲಿ ಸೇರಿಕೊಳ್ಳುತ್ತಿದ್ದಾರೆ. ಇದು ಸಾಮಾನ್ಯವೆನಿಸಿದೆ' ಎಂದು ಐಸಿಎಂಆರ್ ಕಾರ್ಯಪಡೆ ಸದಸ್ಯ ಡಾ. ಗಿರಿಧರ ಬಾಬು ಹೇಳಿದ್ದಾರೆ.
Recommended Video

ಜನರು ಎಚ್ಚರ ವಹಿಸಬೇಕು
ಶಾಲೆಗಳು ಮತ್ತು ಚಿತ್ರಮಂದಿರಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳೂ ನಡೆಯುತ್ತಿರುವುದರಿಂದ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ. ಸರ್ಕಾರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಜನರು ಮಾಸ್ಕ್ ಧರಿಸದೆ ಅಡ್ಡಾಡುತ್ತಿದ್ದಾರೆ.
ಜನರು ಸಕ್ರಿಯವಾಗಿ ಪರೀಕ್ಷೆಗೆ ಒಳಪಡಬೇಕು. ಯಾರಾದರೂ ಪಾಸಿಟಿವ್ ಎಂದು ಕಂಡುಬಂದಾಗ ಅವರ ಕುಟುಂಬದ ಸದಸ್ಯರು ಮತ್ತು ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಪಡಬೇಕು. ಅದನ್ನು ಮರೆಮಾಚಬಾರದು. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ನಿರಂತರವಾಗಿ ತೊಳೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.












Click it and Unblock the Notifications