25 ತಿಂಗಳ ಬಿಲ್ ಬಾಕಿ ನೀಡಲು ಆಗ್ರಹಿಸಿ ಬಿಬಿಎಂಪಿ ವಿರುದ್ಧ ಗುತ್ತಿಗೆದಾರರ ಸಂಘದಿಂದ ಅಹೋರಾತ್ರಿ ಧರಣಿ
ಬೆಂಗಳೂರು, ಜನವರಿ 09: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಗುತ್ತಿಗೆದಾರರು ಕಳೆದ 25 ತಿಂಗಳ ಬಾಕಿ ಬಿಲ್ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿ ಮುಂದೆ ಸೋಮವಾರ ಬೆಳಗ್ಗೆಯಿಂದಲೇ 'ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ'ದ ನೇತೃತ್ವದಲ್ಲಿ ಗುತ್ತಿಗೆದಾರರು ಧರಣಿ ಆರಂಭಿಸಿದ್ದಾರೆ. ಬಾಕಿ ಹಣ ಪಾವತಿಯಾಗಬೇಕು. ನಮಗಾದ ಅನ್ಯಾಯ ಸರಿಪಡಿಸಬೇಕು. ಅಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಇದರಿಂದ ನಾಲ್ಕು ಸಾವಿರ ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಕಾಮಗಾರಿ ಕೆಲಸ ನಿಲ್ಲಲಿವೆ ಎನ್ನಲಾಗಿದೆ.
ಒಂದೇ ತಿಂಗಳಲ್ಲಿ ಬಿರುಕು ಬಿಟ್ಟ ದೇಶದ ಪ್ರಥಮ 'ರ್ಯಾಪಿಡ್ ರಸ್ತೆ': ಬೆಂಗಳೂರಿನಲ್ಲಿ ಬಿಬಿಎಂಪಿ ಆವಾಂತರ
ಪ್ರತಿಭಟನೆ ವೇಳೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ವೆಂಕಟೇಶ್, 25 ತಿಂಗಳಿನಿಂದ ಗುತ್ತಿಗೆದಾರರಿಗೆ ಬಿಲ್ ಬಿಲ್ ಹಣ ನೀಡಿಲ್ಲ. ಸಾಲ ಮಾಡಿ ತಂದು ಕಾಮಗಾರಿ ಮಾಡಿದ್ದಾರೆ. ಹಣ ಪಾವತಿಸದ ಹಿನ್ನೆಲೆಯಲ್ಲಿ ಬಡ್ಡಿ ಕಟ್ಟಲಾಗದೇ ನಾವೆಲ್ಲರೂ ಸಂಕಷ್ಟ ಎದುರಿಸುತ್ತಿದ್ದೇವೆ. ಹಲವು ಬಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಪ್ರತಿಭಟನೆ ಹಾದಿ ತುಳಿದಿದ್ದೇವೆ ಎಂದರು.
ಗುತ್ತಿಗೆದಾರರಿಗೆ ಪೂರಕವಾದ ಟೆಂಡರ್ಗೆ ಮನವಿ
ಹಣಕಾಸು ಇಲಾಖೆಯಿಂದ ಗುತ್ತಿಗೆದಾರರಿಗೆ ಬರಬೇಕಿದ್ದ ಸುಮಾರು ಎರಡು ವರ್ಷ ಹಣ ಬಂದಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರ ಬಿಬಿಎಂಪಿ ನೀಡುವ ನಗರೋತ್ಥಾನ ಮತ್ತಿತರ ಅನುದಾನಗಳಿಗೆ ಪ್ಯಾಕೇಟ್ ಟೆಂಡರ್ ಕರೆಯುವ ಮೂಲಕ ಅನ್ಯಾಯ ಮಾಡುತ್ತಿದೆ. ಗುತ್ತಿಗೆಗೆ ನೋಂದಣಿ ಮಾಡಿಕೊಂಡ ಎಲ್ಲ ವರ್ಗದ ಗುತ್ತಿಗೆದಾರಿಗೆ ಪೂರಕವಾದ ಟೆಂಡರ್ ಆಹ್ವಾನಿಸಬೇಕು ಎಂದು ಅವರು ಒತ್ತಾಯಿಸಿದರು.
ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳಲ್ಲಿ ತನಿಖೆ ನೆಪದಲ್ಲಿ ಕೆಲಸ ವಿಳಂಬವಾಗುತ್ತಿದೆ, ಅದನ್ನು ತಪ್ಪಿಸಬೇಕು. ತನಿಖೆ ರೂಪವನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು. ಇವು ಸೇರಿದಂತೆ ನಮ್ಮೆಲ್ಲ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಒಂದು ವೇಳೆ ಸರ್ಕಾರ, ಬಿಬಿಎಂಪಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಪ್ರತಿಭಟನಾನಿರತ ನೂರಾರು ಗುತ್ತಿಗೆದಾರರನ್ನು ಮನವೊಲಿಸಲು ಯತ್ನಿಸಿದರು. ಸಂಘದ ಅಹವಾಲುಗಳನ್ನು ಆಲಿಸಿದ ಅವರು ಈಡೇರಿಸುವುದಾಗಿ ಭರವಸೆ ನೀಡಿದರು. ಆದರೆ ಇಷ್ಟಕ್ಕೆ ಸಮಾಧಾನಗೊಳ್ಳದ ಗುತ್ತಿಗೆದಾರರು ಅನಿರ್ದಿಷ್ಟಾವಧಿ ಧರಣಿ ಮುಮದುವರಿಸುವುದಾಗಿ ಒಕ್ಕೋರಲಿನಿಂದ ತಿಳಿಸಿದರು.