Bengaluru Rain: ಬೆಂಗಳೂರಿನಲ್ಲಿ ಮುಂದುವರೆದ ಮಳೆ- ಮುಂದಿನ 3-4 ದಿನ ವರುಣನ ಅಬ್ಬರ
ಬೆಂಗಳೂರು ಮೇ 24: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಿಳಿಯೋದು ಕಷ್ಟ, ಮನೆಯಲ್ಲಿರೋದು ಕಷ್ಟ ಎನ್ನುವಂತಾಗಿದೆ ಜನರ ಸ್ಥಿತಿ. ಬಲವಾದ ಗಾಳಿ, ಗುಡುಗು ಸಮೇತ ಅನೆಕಲ್ಲು ಮಳೆ ಬೀಳುತ್ತಿದ್ದು ಆತಂಕದಲ್ಲೇ ಜನ ಜೀವನ ನಡೆಸುವಂತಾಗಿದೆ. ಕಳೆದ ದಿನ ಸಂಜೆ ಮತ್ತೆ ಬೆಂಗಳೂರಿನಲ್ಲಿ ವರುಣ ಅರ್ಭಟಿಸಿದ್ದಾನೆ.
ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ರಸ್ತೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ, ವೇಗವಾಗಿ ಬೀಸಿದ ಗಾಳಿಯಿಂದಾಗಿ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಕಳೆದ ದಿನ ಸಂಜೆಯಿಂದ ಮತ್ತೆ ಮಳೆಯಾಗುತ್ತಿದ್ದು ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ನಿಗಧಿತ ಸಮಯಕ್ಕೆ ಜನ ಪ್ರಯಾಣಿಸಲು ಸಾಧ್ಯವಾಗದೆ ಮಳೆಯಲ್ಲಿ ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯ ರಾಜಧಾನಿಯಲ್ಲಿ ಮುಂದಿನ ನಾಲ್ಕು ದಿನ ಮಿಂಚು, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಸಾರ್ವಜನಿಕರು ಅಗತ್ಯ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕೆಂದು ಹವಾಮಾನ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಅಂಡರ್ಪಾಸ್ನಲ್ಲಿ ಓರ್ವ ಯುವತಿ ಮೃತಪಟ್ಟ ಬೆನ್ನಲ್ಲೇ ಬಿಬಿಎಂಪಿ ಪ್ರಮುಖ ನಿರ್ಧಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಅಂಡರ್ಪಾಸ್ನಿಂದ ಯಾವುದೇ ಹಾನಿ ಉಂಟಾಗಬಾರದು ಎಂದು ಬಿಬಿಎಂಪಿ ತೀರ್ಮಾನಿಸಿದೆ.
ರಾಜ್ಯದಲ್ಲಿ ಮಳೆ ಹಾನಿಯ ಬಗ್ಗೆ ಜನರಿಗೆ ಸೂಕ್ತ ಸಮಯಕ್ಕೆ ಸ್ಪಂದಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ನಿನ್ನೆ ನಡೆದ ಸಭೆಯಲ್ಲಿ ಖಡಕ್ ಸೂಚನೆ ನೀಡಿದ್ದಾರೆ. ಶಿಥಿಲಗೊಂಡ ಸೇತುವೆ, ಶಾಲೆ ಕಟ್ಟಡ ಮೇಲೆ ನಿಗಾ ಇಡಲು ಸೂಚಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರ ಬಂದಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.
ಜೊತೆಗೆ ಮಳೆ ನೀರು ತುಂಬಿದ ಅಂಡರ್ ಪಾಸ್ ಗಳನ್ನು ಕ್ಲೂಸ್ ಮಾಡಲು, ವೈಜ್ಞಾನಿಕವಾಗಿ ಅಂಡ್ ಪಾಸ್ಗಳನ್ನು ನಿರ್ಮಾಣ ಮಾಡಲು ತಿಳಿಸಿದ್ದಾರೆ. ಜೊತೆಗೆ ಮುಂಗಾರು ಪೂರ್ವ ಮಳೆ ಹಾನಿಗೆ ತಕ್ಷಣ ಪರಿಹಾರ ಕ್ರಮಕ್ಕೆ ಸಿಎಂ ಆದೇಶಿಸಿದ್ದಾರೆ.

ಇನ್ನೂ ರಾಜ್ಯದ ರಾಮನಗರ, ಚಾಮರಾಜನಗರ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ರಾಯಚೂರು, ಯಾದಗಿರಿ, ವಿಜಯಪುರ, ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಹಾವೇರಿ ಅಧಿಕ ಮಳೆ ಹಾಗೂ ಸಿಡಿಲಿಗೆ ಕುರಿಗಾಹಿ ಸಾವನ್ನಪ್ಪಿದ್ದಾನೆ. ಹುಬ್ಬಳ್ಳಿಯಲ್ಲಿ ಆನೆಕಲ್ಲು ಮಳೆಯಾಗಿದೆ. ಬಳ್ಳಾರಿಯಲ್ಲಿ ಮನೆಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರಿನ ಮಲೆನಾಡಿನ ಭಾಗದಲ್ಲಿ ಭಾರಿ ಮಳೆ ಗಾಳಿಗೆ ಜನ ಮನೆಬಿಟ್ಟು ಹೊರಬಾರದಂತ ಸ್ಥಿತಿ ಎದುರಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸಹ ಸೋಮವಾರ ವರುಣ ಆರ್ಭಟಿಸಿದ್ದು, ಕೆಲ ಸಾವು ನೋವುಗಳು ಸಂಭವಿಸಿವೆ. ಜೊತೆಗೆ ಮನೆಗಳು ಮೇಲೆ ಬೃಹತ್ ಗಾತ್ರದ ಮರಗಳು ಬಿದ್ದು, ವಾಹನಗಳು ಜಖಂ ಆಗಿವೆ. ಹಲವೆಡೆ ಬೆಳೆದ ಬೆಳೆ ನಾಶವಾಗಿದ್ದು ಪರಿಹಾರಕ್ಕಾಗಿ ರೈತಾಪಿ ವರ್ಗ ವಿಧಾನಸೌಧದತ್ತ ನೋಡುತ್ತಿದೆ. ಚಿಕ್ಕಮಗಳೂರು, ಹುಬ್ಬಳ್ಳಿ, ಹಾವೇರಿಯಲ್ಲಿ ಮಳೆ ಅಬ್ಬರಕ್ಕೆ ಬೆಳೆ ನಾಶವಾಗಿದೆ. ಬಾಗಲಕೋಟೆ ಬಾದಾಮಿಯಲ್ಲಿ ಮರಗಳು ನೆಲಕ್ಕಚ್ಚಿವೆ. ಬೆಳೆದ ಬೆಳೆ ನಾಶವಾಗಿದೆ.












Click it and Unblock the Notifications