Namma Metro New Line: ಹೊಸ ಲೈನ್ ಕಾಮಗಾರಿ ಸ್ಥಳದಲ್ಲಿ 20ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳ ಕಳ್ಳತನ
ಬೆಂಗಳೂರು, ಡಿಸೆಂಬರ್ 26: ಬೆಂಗಳೂರಿನ ನಾಗರಿಕರಿಗೆ ವೇಗದ ಸಂಚಾರ ಒದಗಿಸಲು ಕೆಲವೆಡೆ ಮೆಟ್ರೋ ಹೊಸ ಮಾರ್ಗ ನಿರ್ಮಿಸಲಾಗುತ್ತಿದೆ. ಇದೀಗ ಕಾಮಗಾರಿ ನಡೆಯುವ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ನಿರ್ಮಾಣದ ವಸ್ತುಗಳು ಕಳ್ಳತನವಾದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಎಫ್ಐಆರ್ ಸಹ ದಾಖಲಾಗಿದೆ.
ಬೆಂಗಳೂರು ನಗರದಿಂದ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಲೈನ್ನ ವೀರಣ್ಣಪಾಳ್ಯ ಮೆಟ್ರೊ ನಿಲ್ದಾಣದಲ್ಲಿ ಇತ್ತೀಚೆಗೆ ಗ್ಯಾಸ್ ಪೈಪ್ಲೈನ್ ಸಾಮಗ್ರಿ ಕಳ್ಳತನವಾಗಿದೆ. ನಗರದ ಹಲವೆಡೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸಾಮಗ್ರಿ ಕಳ್ಳತನವಾಗಿದ್ದು, ಗುತ್ತಿಗೆದಾರರಿಗೆ ಅಪಾರ ನಷ್ಟ ಉಂಟಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಕಳ್ಳತನಗಳು ನಡೆಯುತ್ತಿವೆ ಎಂದು ಶಂಕಿಸಲಾಗಿದೆ.
ಹುಸಮಾರನಹಳ್ಳಿ ಮತ್ತು ದೊಡ್ಡ ಜಾಲ ನಿಲ್ದಾಣಗಳ ಮಧ್ಯ ವಿಮಾಣ ನಿಲ್ದಾಣ ಮಾರ್ಗದಲ್ಲಿ ಕಾಮಗಾರಿ ಸ್ಥಳದಲ್ಲಿ ಕೆಲಸಕ್ಕಿದ್ದ ಭದ್ರತಾ ಸಿಬ್ಬಂದಿಯನ್ನು ಥಳಿಸಿ, ನಿರ್ಮಾಣ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಪಿಯರ್ಗಳ ನಿರ್ಮಾಣಕ್ಕೆ ಅಗತ್ಯವಿರುವ ಪೈಪ್ಗಳು, ಬಲವರ್ಧನೆ ಸಾಮಗ್ರಿಗಳು ಮತ್ತು ಸ್ಟೇಜಿಂಗ್ ಪೈಪ್ಗಳು ಕಳ್ಳತನವಾಗಿವೆ. ಕಳ್ಳತನವಾದ ವಸ್ತುಗಳನ್ನು ಎಲ್ಲವನ್ನು ಲೆಕ್ಕ ಹಾಕಿದರೆ ಗುತ್ತಿಗೆದಾರರಿಗೆ ಸುಮಾರು 10 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.

ಈ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಯಾರಿಗೂ ತೊಂದರೆ ಆಗದಂತೆ ಬ್ಯಾರಿಕೇಡ್ ಅಳವಡಿಸಿರಲಾಗುತ್ತದೆ. ಅವುಗಳನ್ನು ತೆಗೆದುಹಾಕಲಾಗಿದೆ. 172 ಕೆಜಿ ಭಾರೀ ತೂಕದ ಬ್ಯಾರಿಕೇಡ್ ಬೋರ್ಡ್ ರಸ್ತೆಯ ಮೂಲಕ ಹಾದುಹೋಗುವ ವಾಹನ ಚಾಲಕ ಅಥವಾ ಪಾದಚಾರಿಗಳ ಮೇಲೆ ಬಿದ್ದರೆ ದೊಡ್ಡ ಅಪಘಾತವಾಗಲಿದೆ. ಈ ರೀತಿಯಾವುದೇ ಅವಘಡ ಆಗದಂತೆ ಮತ್ತು ನಿರ್ಮಾಣ ಸಾಮಗ್ರಿಗಳ ರಕ್ಷಣೆಗೆ ಎರಡು ಪಾಳಿಯಲ್ಲಿ ಅಧಿಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
12ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಾಪತ್ತೆ
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಇದೇ ರೀತಿ ಆಗಿದೆ. ಟಿನ್ ಫ್ಯಾಕ್ಟರಿ ಮತ್ತು ಮಹದೇವಪುರ ಎರಡು ನಿಲ್ದಾಣಗಳಲ್ಲಿ ವೆಲ್ಡಿಂಗ್ ಸಾಮಗ್ರಿಗಳು, 4,000 ರಿಂದ 5,000 ರೂ.ವರೆಗಿನ ಮಾರುಕಟ್ಟೆ ಮೌಲ್ಯದ ಡೀಸೆಲ್-ಜನರೇಟರ್ ಬ್ಯಾಟರಿಗಳು, ಸಾಮಗ್ರಿಗಳು ಕಳ್ಳತನವಾಗಿವೆ. ಸುಮಾರು 12ಲಕ್ಷಕ್ಕೂ ಹೆಚ್ಚು ಮೌಲ್ಯ ವಸ್ತುಗಳು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಯಾವುದೇ ಪರಿಹಾರ ನೀಡುವುದಿಲ್ಲ. ವಸ್ತುಗಳ ಸಂರಕ್ಷಣೆ ಗುತ್ತಿಗೆದಾರರ ಜವಾಬ್ದಾರಿ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ತಿಳಿಸಿದೆ.

ಕಾಮಗಾರಿ ಸ್ಥಳದಲ್ಲಿ ಮಹಿಳೆಯರ ಗುಂಪು ನಿರ್ಮಾಣದ ವಸ್ತುಗಳನ್ನು ಮುಚ್ಚಿಡುತ್ತಾರೆ. ಈ ಬಗ್ಗೆ ಹಿಂದೊಮ್ಮೆ ಗೊತ್ತಾಗುತ್ತಿದ್ದಂತೆ ಎಚ್ಚರಿಕೆ ನೀಡಲಾಗಿದೆ. ದುಷ್ಕರ್ಮಿಗಳು ಬೈಕ್ಗಳಲ್ಲಿ ಬಂದು ಡ್ರ್ಯಾಗರ್ ಹಿಡಿದು ಹೆದರಿಸಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಇದು ರಾತ್ರಿ ಶಿಫ್ಟ್ ಕೆಲಸದ ಸಿಬ್ಬಂದಿ ಜೀವಕ್ಕೆ ಕುತ್ತು ತರಬಹುದು ಈ ಬಗ್ಗೆ ತಮ್ಮ ಗಮನಕ್ಕೂ ಬಂದಿರುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದರು.












Click it and Unblock the Notifications