ಟೆಂಡರ್ನಲ್ಲಿ ತಪ್ಪು ಮಾಹಿತಿ: ಮೆಟ್ರೋ ಗುತ್ತಿಗೆ ಕಂಪನಿಗೆ 1 ವರ್ಷ ನಿಷೇಧ
ಬೆಂಗಳೂರು, ಜನವರಿ 8: ಟೆಂಡರ್ನಲ್ಲಿ ತಪ್ಪು ಮಾಹಿತಿ ನೀಡಿದ ಮೆಟ್ರೋ ಗುತ್ತಿಗೆ ಕಂಪನಿಗೆ ಒಂದು ವರ್ಷ ನಿಷೇಧ ಹೇರಲಾಗಿದೆ.
ಹೊರವರ್ತುಲ ರಸ್ತೆಯಲ್ಲಿ ನಿರ್ಮಾಣವಾಗಲಿರುವ ಕೆಆರ್ ಪುರ -ಸಿಲ್ಕ್ ಬೋರ್ಡ್ ಮೆಟ್ರೋ ಮಾರ್ಗ ನಿರ್ಮಾಣದ ಟೆಂಡರ್ ಗೆ ಸುಳ್ಳು ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿದ್ದ ಸದ್ಭವ್ ಎಂಜಿನಿಯರ್ ಕಂಪನಿಗೆ ಒಂದು ವರ್ಷ ಟೆಂಡರ್ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್ಟಿಪಿಸಿ ಲಿಮಿಟೆಡ್ ಕಳೆದ ವರ್ಷ ಯೋಜನೆಯೊಂದಕ್ಕೆ ಟೆಂಡರ್ ಆಹ್ವಾನಿಸಿತ್ತು. ಅದರಲ್ಲಿ ಭಾಗವಹಿಸಿದ್ದ ಸದ್ಭವ್ ಕಂಪನಿ ಷರತ್ತುಗಳನ್ನು ಉಲ್ಲಂಘಿಸಿತ್ತು. ಇದರ ವಿರುದ್ಧ ಕ್ರಮ ಕೈಗೊಂಡ ಎನ್ಪಿಸಿ 2018ರ ಜ.14ರಂದು ಕಂಪನಿಯು ಮೂರು ವರ್ಷಗಳವರೆಗೆ ಎನ್ಪಿಸಿಯ ಯಾವುದೇ ಟೆಂಡರ್ನಲ್ಲಿ ಭಾಗವಹಿಸದಂತೆ ನಿಷೇಧ ಹೇರಿತ್ತು.

17 ಕಿ.ಮೀ ಉದ್ದದಲ್ಲಿ 4,200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೆಆರ್ ಪುರ-ಸಿಲ್ಕ್ ಬೋರ್ಡ್ ಮಾರ್ಗಕ್ಕೆ ಅರ್ಜಿ ಸಲ್ಲಿಸಲು ಕೆಲವೇ ಕಂಪನಿಗಳು ಮುಂದೆ ಬಂದಿತ್ತು. ಐಎಲ್ ಅಂಡ್ ಎಫ್ಎಸ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿದ್ದ ಮೊತ್ತವೇ ಕಡಿಮೆಯದ್ದಾಗಿತ್ತು.
ಆದರೆ ಇದು ಅಂದಾಜು ಮೊತ್ತಕ್ಕಿಂತ ಅಧಿಕವಾಗಿತ್ತು. ಜೊತೆಗೆ ಕಂಪನಿಯು ಆರ್ಥಿಕ ನಷ್ಟದಲ್ಲಿರುವುದರಿಂದ ಟೆಂಡರ್ ನೀಡಲು ಸಾಧ್ಯವಾಗಲಿಲ್ಲ. ಈಗ ಮತ್ತೊಮ್ಮೆ ಟೆಂಡರ್ ಆಹ್ವಾನಿಸಲಾಗುತ್ತಿದೆ. ಷರತ್ತುಗಳನ್ನು ಕಡಿಮೆ ಮಾಡಿ ಸರಳವಾಗಿಸಿ ಕಂಪನಿಗಳು ಸುಲಭವಾಗಿ ಅರ್ಜಿ ಸಲ್ಲಿಸುವಂತೆ ಮಾಡಲಾಗುತ್ತಿದೆ.












Click it and Unblock the Notifications