ಗ್ರಾಮೀಣಾಭಿವೃದ್ಧಿ ಇಲಾಖೆ: 4ನೇ ಬಾರಿ ರಾಷ್ಟ್ರೀಯ ಇ-ಪುರಸ್ಕಾರ
ಬೆಂಗಳೂರು, ಜನವರಿ 22: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾಧನೆಗೆ ಸತತ ನಾಲ್ಕನೇ ಬಾರಿಗೆ ರಾಷ್ಟ್ರೀಯ ಇ-ಪುರಸ್ಕಾರ ಲಭ್ಯವಾಗಿದೆ.
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪ್ರಸ್ತುತ ಸರಕಾರದ ಅವಧಿಯಲ್ಲಿ ನಾಲ್ಕನೆಯ ಬಾರಿ ಪ್ರಶಸ್ತಿ ದೊರಕಿರುವುದರಿಂದ ಪ್ರಶಸ್ತಿಯ ಗರಿಮೆಗೆ ಕರ್ನಾಟಕ ಪಾತ್ರವಾಗಿದೆ.
ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಮೂಲಕ ಪಂಚಾಯಿತಿಗಳ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆಗಳನ್ನು ಸಾಧಿಸುವಲ್ಲಿ ಮಾಡಿರುವ ಉನ್ನತ ಪ್ರಯತ್ನಗಳನ್ನು ಗುರುತಿಸಿ, ವಾರ್ಷಿಕ ಇ-ಪುರಸ್ಕಾರ್ ನೀಡುವ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಕರ್ನಾಟಕ ಮೊದಲ ಬಹುಮಾನ ಪಡೆದಿದೆ.
ಪ್ರಸ್ತುತ ಕರ್ನಾಟಕ ಸರಕಾರದ ಕಾರ್ಯಾರಂಭದ ಮೊದಲ ವರ್ಷ ದ್ವೀತಿಯ ಪ್ರಶಸ್ತಿ ಪಡೆದಿತ್ತು. ಈ ಕುರಿತು ಕೇಂದ್ರ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಿಬ ಪತ್ ಜೋಶಿ ರವರು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್ ನಾಗಾಂಬಿಕಾದೇವಿ ಯವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಪಂಚಾಯಿತಿಗಳಿಗೆ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಮೂಲಕ ಪಂಚಾಯಿತಿಗಳ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆಗಳನ್ನು ಸಾಧಿಸುವಲ್ಲಿ ಕರ್ನಾಟಕದ ತಂತ್ರಾಂಶವನ್ನು ಅತ್ಯುನ್ನತ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ಧಿಪಡಿಸಿ ಕಳೆದ ನಾಲ್ಕೂವರೆ ವರ್ಷಗಳಿಂದ ಅನುಷ್ಠಾನಗೊಳಿಸುತ್ತಿರುವ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದ ಮಹತ್ವ ಪೂರ್ಣವಾದ ಕಾರ್ಯತತ್ಪರತೆ ಮತ್ತು ದಕ್ಷತೆಗೆ ಕೇಂದ್ರ ಸರಕಾರ ಮಾನ್ಯತೆ ನೀಡಿದೆ.
ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಆರೋಹಣ ಮಾಡದೇ ಈಗ ಯಾವುದೇ ಬಿಲ್ಲುಗಳು ಪಾವತಿಯಾಗದ ವ್ಯವಸ್ಥೆ ಸೃಷ್ಟಿ ಮಾಡಿರುವುದರಿಂದ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅತ್ಯಂತ ಹೆಚ್ಚು ಪಾರದರ್ಶಕ ವ್ಯವಸ್ಥೆಯನ್ನು ಹೊಂದಿರುವುದನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಕೇಂದ್ರ ಸರಕಾರ ಮೆಚ್ಚುಗೆಯ ಮಾತುಗಳನ್ನು ಹೇಳಿದೆ.