ಬೇಲೇಕೇರಿ ಕೇಸ್: ವಿಶೇಷ ಕೋರ್ಟಿಗೆ ಹಾಜರಾದ ನಾಗೇಂದ್ರ, ಆನಂದ್ ಸಿಂಗ್
ಬೆಂಗಳೂರು, ಜನವರಿ 17: ಆಪರೇಷನ್ ಕಮಲ ಹೈಡ್ರಾಮಾದಲ್ಲಿ ಭಾಗಿಯಾಗಿದ್ದ ಬಳ್ಳಾರಿಯ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರು ಇಂದು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಶಾಸಕ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರು ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ವಿಚಾರಣೆಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಗಾಲಿ ಜನಾರ್ದನ ರೆಡ್ಡಿ ಅವರು ಕೋರ್ಟಿಗೆ ಹಾಜರಾಗಿಲ್ಲ ಅವರ ಆಪ್ತ ಸಹಾಯಕ ಮೆಹಫೂಜ್ ಅಲಿಖಾನ್ವಿಚಾರಣೆಗೆ ಹಾಜರಾದರು. ಈ ಪ್ರಕರಣದ ವಿಚಾರಣೆ ಶುಕ್ರವಾರ ಕೂಡಾ ನಡೆಯಲಿದ್ದು, ಕೋರ್ಟಿಗೆ ಹಾಜರಾಗಬೇಕಿರುವ ಕಾರಣ, ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ನಾಗೇಂದ್ರ ಸ್ಪಷ್ಪಪಡಿಸಿದ್ದಾರೆ.
ಭಿನ್ನಮತೀಯರಿಗೆ ಖಡಕ್ ಎಚ್ಚರಿಕೆ ನೀಡಿರುವ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕಾಂಗ ಸಭೆಗೆ ಗೈರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಲಾಗುವುದು ಎಂದಿದ್ದಾರೆ.

ಸತತವಾಗಿ ವಿಚಾರಣೆಗೆ ಗೈರು ಹಾಜರಾಗಿದ್ದ ಹಿನ್ನಲೆಯಲ್ಲಿ ನಾಗೇಂದ್ರ ಹಾಗೂ ಆನಂದ್ ಸಿಂಗ್ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವಿ.ಪಾಟೀಲ್ ಅವರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿತ್ತು.
ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ನಾಗೇಂದ್ರ ಅವರು ಕೋರಿದ್ದರು.ಆದರೆ, ಅರ್ಜಿ ತಿರಸ್ಕೃತಗೊಂಡಿದ್ದರಿಂದ ಗುರುವಾರ(ಜನವರಿ 17)ದಂದು ಕೋರ್ಟಿಗೆ ಹಾಜರಾಗಿದ್ದಾರೆ.
2009ರಲ್ಲಿ ಆನಂದ್ಸಿಂಗ್ ಒಡೆತನದ ವೈಷ್ಣವಿ ಮಿನರಲ್ಸ್ ಕಂಪನಿಯಿಂದ ಅದಿರನ್ನು ಸಿಂಗಪುರ ಮತ್ತು ಚೀನಾಕ್ಕೆ ಅಕ್ರಮವಾಗಿ ಸಾಗಿಸಿದ ಆರೋಪವಿದೆ. ಎಸ್ ಐಟಿ ತನಿಖೆ, ಸಿಬಿಐ ತನಿಖೆಯಲ್ಲೂ ಆರೋಪ ಸಾಬೀತಾಗಿದ್ದು, ಇಬ್ಬರ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ.












Click it and Unblock the Notifications