ಕಾಂಗ್ರೆಸ್ ಮುಖಂಡರ ನಡುವೆ ಸಭೆಯಲ್ಲೇ ಮಾರಾಮಾರಿ
ಬೆಂಗಳೂರು, ಸೆಪ್ಟೆಂಬರ್ 12: ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹೊಣೆಗಾರಿಕೆಯಲ್ಲಿ ಸಂಪೂರ್ಣ ಬದಲಾವಣೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಮಾರಾಮಾರಿ ನಡೆದಿದೆ. ಕಾಂಗ್ರೆಸ್ನ ಕಾರ್ಮಿಕ ಘಟಕ ಹಾಗೂ ಐಎನ್ ಟಿಯುಸಿ ಅಧ್ಯಕ್ಷರ ನಡುವೆ ತೀವ್ರ ಜಗಳ ನಡೆದಿದೆ.
ಕೆಪಿಸಿಸಿ ಲೇಬರ್ ಸೆಲ್ ಅಧ್ಯಕ್ಷ ಪ್ರಕಾಶಂ ಮತ್ತು ಐಎನ್ಟಿಯುಸಿ ಅಧ್ಯಕ್ಷ ರಾಕೇಶ್ ಮಲ್ಲಿ ನಡುವೆ ವಾಕ್ಸಮರ ನಡೆದಿದ್ದು, ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರಿ ಬದಲಾವಣೆ
ಈ ಬಗ್ಗೆ ಹೇಳಿಕೆ ನೀಡಿರುವ ಕೆಪಿಸಿಸಿ ಲೇಬರ್ ಸೆಲ್ ಅಧ್ಯಕ್ಷ ಪ್ರಕಾಶಂ, 'ನಾನು 40 ವರ್ಷಗಳಿಂದ ಕಾಂಗ್ರೆಸ್ನ ಶಿಸ್ತಿನ ಸಿಪಾಯಿ. ಡಿಕೆ ಶಿವಕುಮಾರ್ ಅವರ ಕೈ ಬಲಪಡಿಸೋಕೆ ಬದ್ಧನಾಗಿರುವವನು. ನಾನು ಒಬ್ಬ ಲೀಡರ್ ಆಗಿರೋದ್ರಿಂದ ಏನು ಹೇಳೋಕೆ ಆಗಲ್ಲ. ಆದರೆ ಇವತ್ತಿನ ಘಟನೆ ನನಗೆ ಬೇಸರ ಆಗಿದೆ. ಕಾರ್ಮಿಕ ಘಟಕದಲ್ಲಿ 25 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಲೇಬರ್ ಸೆಲ್ ಅನ್ನು ನಾನೇ ಕಟ್ಟಿ ಬೆಳೆಸಿದ್ದೇನೆ. ಈ ಘಟನೆ ಬಗ್ಗೆ ನಾನು ಕಾಂಗ್ರೆಸ್ ಕಚೇರಿಗೆ ದೂರು ನೀಡಿದ್ದೇನೆ. ನಮ್ಮ ಅಧ್ಯಕ್ಷರೇ ಇದರ ಬಗ್ಗೆ ಗಮನಹರಿಸುತ್ತಾರೆ' ಎಂದು ತಿಳಿಸಿದ್ದಾರೆ.

ನಾನು ವೀರೇಂದ್ರ ಪಾಟೀಲ್, ಸಿದ್ದರಾಮಯ್ಯ ಅವರಂತಹ ನಾಯಕರ ಜೊತೆ ಕೆಲಸ ಮಾಡಿದವನು. ನನಗೆ ಇವತ್ತು ಕಾಂಗ್ರೆಸ್ ಕಚೇರಿಯಲ್ಲೇ ಹೊಡೆದಿದ್ದಾರೆ. ನಮ್ಮ ಹಾಗೂ ಅವರ ನಡುವೆ ಯಾವುದೇ ಭಿನ್ನಾಬಿಪ್ರಾಯವಿಲ್ಲ. ನಾನು ಸಂಘಟನೆ ಮಾಡುವುದಕ್ಕೆ ಹುಟ್ಟಿದ್ದೇನೆ. ಸಂಘಟನೆ ಮಾಡುವುದಕ್ಕೆ ಅವರು ನನಗೆ ಬಿಡುತ್ತಿಲ್ಲ. ನಾನು ನಮ್ಮ ನಾಯಕರ ಜೊತೆ ಮಾತನಾಡುತ್ತೇನೆ. ಸೋನಿಯಾ ಗಾಂಧಿಯವರ ಜೊತೆ ಮಾತನಾಡುತ್ತೇನೆ. ನನಗೆ ಇವತ್ತಿನ ಘಟನೆಯಿಂದ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.
ನಾನು ಐಎನ್ ಟಿಯುಸಿ ಪ್ರೆಸಿಡೆಂಟ್ ಕೂಡ ಹೌದು. ಎಂಟು ಲಕ್ಷ ಕಾರ್ಮಿಕರ ಸದಸ್ಯತ್ವ ನೋಂದಣಿ ಮಾಡಿದ್ದೇನೆ. ಲೇಬರ್ ಸೆಲ್ ನಿಂದ ಫುಡ್ ಕಿಟ್ ಕೂಡ ಹಂಚಿದ್ದೇನೆ. ರಾಕೇಶ್ ಮಲ್ಲಿ ನನ್ನ ಮೇಲೆ ಜಗಳ ಮಾಡಿಲ್ಲ. ಅವರ ಜೊತೆ ಬಂದವರು ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ರೌಡಿಗಳು, ಗೂಂಡಾಗಳು ಪಕ್ಷದಲ್ಲಿ ಇರಬಾರದು ಎಂದು ಪ್ರಕಾಶಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Recommended Video
'ನಮ್ಮ ಲೇಬರ್ ಸೆಲ್ ಅಧ್ಯಕ್ಷರ ನೇತೃತ್ವದಲ್ಲಿ ನಾವು ಮಧ್ಯಾಹ್ನ ಸಭೆ ನಡೆಸುತ್ತಿದ್ದೆವು. ಈ ವೇಳೆ ಘಟಕದ ಹಣಕಾಸಿನ ಆಡಿಟ್ ನಡೆದಿತ್ತು. ಆಗ ಏಕಾಏಕಿ ರಾಕೇಶ್ ಮಲ್ಲಿಯವರು ಅಟ್ಯಾಕ್ ಮಾಡಿದರು. ಪ್ರಕಾಶಂ ಅವರ ಕಪಾಳಕ್ಕೆ ಹೊಡೆದರು. ನಂತರ ಪ್ರಕಾಶಂ ಹಿಂದೆ ನಿಂತಿದ್ದ ವ್ಯಕ್ತಿಯ ಕುತ್ತಿಗೆಗೆ ಕೈಹಾಕಿ ಅವರ ಮೇಲೆ ದಾಳಿ ಮಾಡಿದರು. ನಾವೇ ಮಧ್ಯೆ ಹೋಗಿ ಅವರ ಗಲಾಟೆ ಬಿಡಿಸಿದ್ದೇವೆ. ಪ್ರಕಾಶಂ ಏನೂ ಮಾತನಾಡಿರಲಿಲ್ಲ' ಎಂದು ಲೇಬರ್ ಸೆಲ್ ಪ್ರಧಾನ ಕಾರ್ಯದರ್ಶಿ ಉಮೇಶ್ ಹೇಳಿದ್ದಾರೆ.












Click it and Unblock the Notifications