ಶಾಸಕ ಭೈರತಿ ಬಸವರಾಜು ಬೆಂಬಲಿಗನಿಂದ ವ್ಯಕ್ತಿಗೆ ಇರಿತ, ದೂರು
ಬೆಂಗಳೂರು, ಮಾರ್ಚ್ 20: ಶಾಸಕ ಭಯರತಿ ಬಸವರಾಜು ಅವರ ರಾಜಕೀಯ ಆಪ್ತರ ಗೂಂಡಾಗಿರಿ ಕೊನೆ ಆಗುವಂತೆ ಕಾಣುತ್ತಿಲ್ಲ. ಮೊನ್ನೆ ಭೈರತಿ ಆಪ್ತ 'ಪೆಟ್ರೋಲ್' ನಾರಾಯಣಸ್ವಾಮಿ ಬಿಬಿಎಂಪಿ ಅಧಿಕಾರಿಗಳ ಮೇಲೆ ಬೆದರಿಕೆ ಹಾಕಿದ ನಂತರ ಈಗ ಮತ್ತೊಬ್ಬ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿದ್ದಾನೆ.
ಭೈರತಿ ಬಸವರಾಜು ಅವರ ಆಪ್ತನೆಂದು ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಸುರೇಶ್ ಎಂಬಾತ ದಾರಿ ಬಿಡುವಂತೆ ಕೇಳಿದ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಈ ಘಟನೆ ಮಾರ್ಚ್ 17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಮುಖಂಡ ಸುರೇಶ್ ಕಾಡುಗೊಡಿ ಬಳಿ ರಸ್ತೆಯಲ್ಲಿ ನಿಂತಿದ್ದಾಗ ಸಾಮಾಜಿಕ ಹೋರಾಟಗಾರರೂ ಆಗಿರುವ ಪರಮೇಶ್ವರ್ ಎಂಬುವರು ಹಿಂದಿನಿಂದ ವಾಹನದಲ್ಲಿ ಬಂದು ಹಾರ್ನ್ ಮಾಡಿ ದಾರಿ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸುರೇಶ್ ಚಾಕುವಿನಿಂದ ಪರಮೇಶ್ವರ್ ಅವರ ಹೊಟ್ಟೆಗೆ ಇರಿದಿದ್ದಾರೆ. ಕೂಡಲೇ ಪರಮೇಶ್ವರ್ ಅವರು ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಮೂರು ದಿನ ಚಿಕಿತ್ಸೆ ಪಡೆದಿದ್ದಾರೆ.
ಸಾಮಾಜಿಕ ಹೋರಾಟಗಾರ ಪರಮೇಶ್ವರ್ ಅವರು ಸಾಕಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ಭೈರತಿ ಬಸವರಾಜು ಅವರ ಮೇಲೆ ಕೇಸುಗಳನ್ನು ದಾಖಲಿಸಿದ್ದರು, ಆರ್ಟಿಐ ಬಳಸಿ ಹಲವು ಹಗರಣಗಳ ತನಿಖೆಗೆ ಇಳಿದಿದ್ದರು ಇದರ ಅರಿವಿದ್ದ ಸುರೇಶ್ ಬೇಕೆಂದೇ ಹಲ್ಲೆ ಮಾಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಪರಮೇಶ್ವರ್ ಅವರು ಘಟನೆ ಕುರಿತು ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊದಲಿಗೆ ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು ಆ ನಂತರ ಹೋರಾಟದ ಎಚ್ಚರಿಕೆ ನೀಡಿದ ಮೇಲೆ ದೂರು ಸ್ವೀಕರಿಸಿದ್ದಾರೆ.